ಸಿಎಂ ಎಚ್‍ಡಿಕೆ ಸಂಬಂಧಿ, ಮೈಸೂರು ವಿವಿ ಕುಲಪತಿಗೆ ಸಂಕಷ್ಟ!

Public TV
1 Min Read

ಮೈಸೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಂಬಂಧಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರನಾಗಲು ಸಿದ್ಧರಾಗಿರುವ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಂಗಪ್ಪ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ವೇಳೆ 2016 ರಲ್ಲಿ ನಡೆದ 124 ಬೋಧಕೇತರ ವರ್ಗದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅದರಲ್ಲಿ ಪ್ರೊ.ಕೆ.ಎಸ್. ರಂಗಪ್ಪ ಎಲ್ಲಾ ನಿಯಾಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡು ಶಿಕ್ಷಿಸಿ ಎಂದು ಡಾ.ಎಂ.ಆರ್. ನಿಂಬಾಳ್ಕಾರ್ ನೇತೃತ್ವದ ತನಿಖಾ ಸಮಿತಿಯೂ ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಈ ವರದಿಯಲ್ಲಿ ತಕ್ಷಣವೇ ಅಕ್ರಮವಾಗಿ ನೇಮಕಗೊಂಡಿರುವ 124 ಬೋಧಕೇತರ ಹುದ್ದೆ ರದ್ದು ಮಾಡಬೇಕು ಹಾಗೂ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜಣ್ಣ ಕೂಡ ತಪ್ಪು ಮಾಡಿದ್ದು, ಅವರನ್ನು ಶಿಕ್ಷಿಸಿ ಎಂದು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನ ಅನುಸಾರ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ವಿ.ಆರ್. ರಮೇಶ್ ಜೂನ್ 18 ರಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತನಿಖಾ ವರದಿ ಆಧರಿಸಿ ಇನ್ನೂ 30 ದಿನದ ಒಳಗೆ ಕ್ರಮ ಜರುಗಿಸಿ 45 ದಿನದ ಒಳಗೆ ವರದಿ ಕಳುಹಿಸಿ ಎಂದು ಸೂಚಿಸಿದ್ದಾರೆ.

ಈ ಪತ್ರ ಆಧರಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೈಸೂರು ವಿವಿಗೆ ಪತ್ರ ಬರೆದು ತನಿಖಾ ವರದಿ ಆಧರಿಸಿ ಭ್ರಷ್ಟಾಚಾರದಲ್ಲಿ ಭಾಗವಹಿಸಿರುವ ಎಲ್ಲರನ್ನು ಗುರುತಿಸಿ ಒಂದು ತಿಂಗಳ ಒಳಗೆ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಅಕ್ರಮ ನೇಮಕಾತಿಗಳನ್ನು ರದ್ದು ಗೊಳಿಸಬೇಕು. ಈ ಎಲ್ಲಾ ಕ್ರಮ ಕೈಗೊಂಡು ಒಂದು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಸೂಚಿಸಿದ್ದಾರೆ. ಆದ್ದರಿಂದ ಪ್ರೊ. ರಂಗಪ್ಪಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ತನಿಖಾ ವರದಿಯಲ್ಲಿ ಪ್ರೊ. ರಂಗಪ್ಪ ತಪ್ಪು ಮಾಡಿರುವುದು ಸ್ಪಷ್ಟವಾಗಿ ನಮೂದಾಗಿರುವ ಕಾರಣ ರಂಗಪ್ಪ ಈ ಅಕ್ರಮದ ಸುಳಿಯಿಂದ ಬಚಾವಾಗುವುದು ಕಷ್ಟವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *