ಬಿಎಸ್‍ವೈ ಸರ್ಕಾರಕ್ಕಾಗಿ ಚಾಮುಂಡೇಶ್ವರಿ ಮೊರೆ ಹೋದ ಶೋಭಾ ಕರಂದ್ಲಾಜೆ

Public TV
1 Min Read

– ಶಾಸಕರೇನು ಮೂರನೇ ಕ್ಲಾಸ್ ಮಕ್ಕಳಲ್ಲ

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಚಾಮುಂಡೇಶ್ವರಿ ದೇವಿಯಲ್ಲಿ ಬೇಡಿಕೊಂಡಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಲ್ಲಿಯವರೆಗೆ ಈ ರೀತಿ ತಾಯಿಗೆ ಯಾವ ಬೇಡಿಕೆಯನ್ನೂ ಇಟ್ಟಿರಲಿಲ್ಲ. ರಾಜ್ಯದಲ್ಲಿ ಜನವಿರೋಧಿ, ಶಾಸಕ ವಿರೋಧಿ ಸರ್ಕಾರ ನಿರ್ಮಾಣವಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಳೆದ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬರದಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಇದ್ಯಾವುದೇ ಕಷ್ಟವನ್ನು ಸರ್ಕಾರ ಕೇಳುತ್ತಿಲ್ಲ. ಈ ರೀತಿಯ ಸರ್ಕಾರವನ್ನು ತೊಲಗಿಸಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದರು.

ಮುಖ್ಯಮಂತ್ರಿ ಮೊದಲಿಗೆ ಬಹುಮತ ಸಾಬೀತು ಮಾಡುವುದಾಗಿ ಪ್ರಸ್ತಾಪ ಮಾಡಿದ್ದರು. ಈಗ ಬಹುಮತ ಸಾಬೀತು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಆದರೆ ಎಷ್ಟು ದಿನ ಈ ಡ್ರಾಮಾ ಮಾಡಲು ಸಾಧ್ಯ. ಸುಪ್ರೀಂಕೋರ್ಟ್ ಗೂ ಬೆಲೆ ಕೊಡುತ್ತಿಲ್ಲ, ರಾಜ್ಯಪಾಲರಿಗೂ ಬೆಲೆ ಕೊಡುತ್ತಿಲ್ಲ ಎಂದು ಮೈತ್ರಿ ಸರ್ಕಾರದ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಕಾರಿದರು.

ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಹಾಗೂ ಸರ್ಕಾರ ಏಜೆಂಟ್ ಎಂದು ಕಿಡಿಕಾರಿದ ಕರಂದ್ಲಾಜೆ, ಶಾಸಕರು ರಾಜೀನಾಮೆ ಕೊಟ್ಟಾಗ ಸ್ಪೀಕರ್ ಅದನ್ನು ಪರಿಗಣಿಸಬೇಕು. ವಿನಾಕಾರಣ ತಡ ಮಾಡುವ ಮೂಲಕ ಅವರು ಕಾಂಗ್ರೆಸ್ ಹಾಗೂ ಸರ್ಕಾರಕ್ಕೆ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದರು.

ಇದೇ ವೇಳೆ ಬಿಜೆಪಿಯಿಂದ ಶಾಸಕರ ಕಿಡ್ನಾಪ್ ಆರೋಪದ ಬಗ್ಗೆ ಮಾತನಾಡಿ, ಶಾಸಕರೇನು ಚಿಕ್ಕ ಮಕ್ಕಳಲ್ಲ. ಅವರಿಗೆ ಯಾರೂ ಒತ್ತಡ ಹಾಕಲು ಸಾಧ್ಯವಿಲ್ಲ. ಅವರು ಮೂರನೇ ಕ್ಲಾಸ್ ಮಕ್ಕಳಲ್ಲ. ಅವರೇ ಮಾಧ್ಯಮದ ಮುಂದೆ ಬಂದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ಅವರೇ ಸ್ವತಃ ಸರ್ಕಾರದ ವಿರುದ್ಧ ಧ್ವನಿ ಎತ್ತಿ ಬಂದಿರೋದು ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *