ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ, ಅವರ ಬಗ್ಗೆ ಗೌರವವಿದೆ – ಜಿಟಿಡಿ

Public TV
2 Min Read

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾನು ಯಾವತ್ತೂ ಮಾತನಾಡಿಲ್ಲ. ಅವರ ಮೇಲೆ ನನಗೆ ಗೌರವವಿದೆ ಎಂದು ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯವರು ನನ್ನ ಬಗ್ಗೆ ಟ್ವೀಟ್ ಮಾಡಿರುವುದು ನನಗೆ ಗೊತ್ತಿಲ್ಲ. ನಾನು ಅದನ್ನು ನೋಡಿಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಧರ್ಮದಿಂದ ನನ್ನ ಬಾಯಿ ಕಟ್ಟಿಹಾಕಿದ್ದಾರೆ ಹಾಗಾಗಿ ನನ್ನ ಟಾರ್ಗೆಟ್ ಮಾಡಿ ಮೊದಲು ಜಿಟಿಡಿ ಮಾತನಾಡಿದರು ಈಗ ವಿಶ್ವನಾಥ್ ಮಾತನಾಡಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಯಾಕೆ ನನ್ನ ಹೆಸರು ಹೇಳಿದ್ದಾರೋ ನನಗೆ ಗೊತ್ತಿಲ್ಲ. ನಾನು ಅವರು ಜೊತೆಯಲ್ಲಿ ಇದ್ದಾಗ, ಅವರು ಬೇರೆ ಪಕ್ಷಕ್ಕೆ ಹೋದಾಗ, ಅವರು ಮುಖ್ಯಮಂತ್ರಿಯಾದಾಗ ನಾನು ವಿರೋಧ ಪಕ್ಷದಲ್ಲಿ ಶಾಸಕನಾಗಿದ್ದಾಗ ಎಲ್ಲೂ ನಾನು ಅವರ ವಿರುದ್ಧ ಮಾತನಾಡಿಲ್ಲ. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ ಎಂದು ಹೇಳಿದರು.

ಇದೇ ವೇಳೆ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯನವರೇ 5 ವರ್ಷ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಅವರೇ ಹೇಳಿದ್ದಾರೆ ಅಂದ ಮೇಲೆ ನಾವು ಬೇರೆ ಮಾತನ್ನು ಆಡಬಾರದು. ವಿಶ್ವನಾಥ್ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು.

ಮೇ 23ರ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಮೈತ್ರಿ ಸರ್ಕಾರ ಇರಲ್ಲ ಎಂಬ ಬಿಜೆಪಿ ನಾಯಕರ ಮಾತಿಗೆ ತಿರುಗೇಟು ಕೊಟ್ಟ ಅವರು, ರಿಸಲ್ಟ್ ಬರುವುದು ಕೇಂದ್ರದಲ್ಲಿ. ಯಾವ ಸರ್ಕಾರ ರಚನೆಯಾಗಬೇಕು ಎಂದು ಆ ರಿಸಲ್ಟ್ ಗೂ ರಾಜ್ಯ ಸರ್ಕಾರಕ್ಕೂ ಏನ್ ಸಂಬಂಧ? ರಾಜ್ಯ ಸರ್ಕಾರ ಹೇಗೆ ಪತನವಾಗುತ್ತೆ ಎಂದು ಪ್ರಶ್ನೆ ಮಾಡಿದರು.

ಮಾಜಿ ಕಾಂಗ್ರೆಸ್ ಶಾಸಕ ಚೆಲುವರಾಯಸ್ವಾಮಿ ಅವರು ಮೈಸೂರಿನಲ್ಲಿ ಜಿಟಿ ದೇವೇಗೌಡರು ಮೈತ್ರಿ ಧರ್ಮ ಪಾಲನೆ ಮಾಡಿಲ್ಲ ಎಂಬ ಮಾತಿಗೆ ತಿರುಗೇಟು ಕೊಟ್ಟ ಅವರು, ಅ ಮಾತಿನ ಅರ್ಥ ಏನು ಎಂದು ಅವರನ್ನೇ ಕೇಳಬೇಕು. ನಾನು ಎಲ್ಲವನ್ನು ಮರೆತು ಸಿದ್ದರಾಮಯ್ಯ ಜೊತೆ ಪ್ರಚಾರ ಮಾಡಿದ್ದೇನೆ. ಮೈತ್ರಿ ಧರ್ಮವನ್ನು ಪಾಲಿಸಿದ್ದೇನೆ. ಆದರೆ ಮಂಡ್ಯದಲ್ಲಿ ಅವರು ಪಾಲಿಸಿಲ್ಲ ಎಂದು ಅವರೇ ನೇರವಾಗಿ ಒಪ್ಪಿಕೊಂಡಿದ್ದಾರೆ. ಜಿಟಿಡಿ ಹೇಗೆ ಕೆಲಸ ಮಾಡಿದ್ದಾರೆ ಅಂತ ಚೆಲುವರಾಯಸ್ವಾಮಿಯನ್ನೆ ಕೇಳಿ ಎಂದರು.

ಕುಮಾರಸ್ವಾಮಿ ಅವರು ದೇವಸ್ಥಾನಕ್ಕೆ ಹೋಗುವುದೆಲ್ಲ ಟೀಕೆ ಟಿಪ್ಪಣೆಯೇ? ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಎಲ್ಲರೂ ದೇವಸ್ಥಾನಕ್ಕೆ ಹೋಗಿದ್ದಾರೆ. ದೇವರು ಮನಸ್ಸಿಗೆ ಬಂದಾಗ ದೇವಾಲಯಕ್ಕೆ ಹೋಗುತ್ತಾರೆ. ಅದನ್ನೆ ಟೀಕೆ ಟಿಪ್ಪಣಿ ಮಾಡೋದು ಸರಿಯಲ್ಲ. ನೀರಿಲ್ಲ, ಮೇವಿಲ್ಲ ಆ ವಿಚಾರವನ್ನು ಕೇಳುವುದು ನಿಮ್ಮ ಕೆಲಸ. ಜನಪ್ರತಿನಿಧಿಗಳು ಪ್ರತಿ ಪಕ್ಷದ ನಾಯಕರು ಈ ಬಗ್ಗೆ ನೋಡಿಕೊಂಡು ಮಾತನಾಡಬೇಕು ಎಂದು ಸಿಎಂ ಅವರ ದೇವಸ್ಥಾನಕ್ಕೆ ಹೋಗಿದ್ದನ್ನು ಸಮರ್ಥಿಸಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *