ತೂಕ ಹೆಚ್ಚಿಸಿಕೊಂಡು ಕಾಡಿನತ್ತ ಪಯಣ ಬೆಳೆಸಿದ ದಸರಾ ಗಜಪಡೆ

Public TV
2 Min Read

ಮೈಸೂರು: ದಸರಾ ಜಂಬೂ ಸವಾರಿಗೆ ಆಗಮಿಸಿದ್ದ ಗಜಪಡೆ ತೂಕವನ್ನು ಹೆಚ್ಚಿಸಿಕೊಂಡು ಇದೀಗ ಮತ್ತೆ ಕಾಡಿಗೆ ಮರಳಿವೆ.

ಆದರೆ ಪ್ರತಿ ಬಾರಿ ದಸರಾ ಸಂದರ್ಭದಲ್ಲಿ ಆನೆಗಳ ತೂಕ ಹೆಚ್ಚಾಗುತ್ತದೆ. ಅದೇ ರೀತಿ ಈ ಬಾರಿಯೂ ಸಹ ಆನೆಗಳು ತೂಕ ಹೆಚ್ಚಿಸಿಕೊಂಡು ಕಾಡಿಕೆ ತೆರಳಿವೆ. ದಸರಾಗೆ ಆಗಮಿಸುವ ಸಂದರ್ಭದಲ್ಲಿ 6 ಆನೆಗಳ ತೂಕವನ್ನು ಪರೀಕ್ಷಿಸಲಾಗಿತ್ತು. ಗರ್ಭಿಣಿಯಾಗಿದ್ದರಿಂದ ವರಲಕ್ಷ್ಮಿ ಆನೆ ಮೊದಲೇ ಕಾಡಿಗೆ ತೆರಳಿತ್ತು. ಈಗ ಉಳಿದ 5 ಆನೆಗಳ ತೂಕವನ್ನು ಪರೀಕ್ಷಿಸಲಾಗಿದ್ದು, ಅಭಿಮನ್ಯು ಮತ್ತು ಈಶ್ವರ ಮೊದಲಿಗಿಂತ 275 ಕೆ.ಜಿ.ತೂಕವನ್ನು ಹೆಚ್ಚಿಸಿಕೊಂಡಿವೆ.

ಧನಂಜಯ 250, ಅರ್ಜುನ 240, ವಿಜಯ 145 ಕೆ.ಜಿ.ತೂಕವನ್ನು ಹೆಚ್ಚಿಸಿಕೊಂಡಿವೆ. ಅಭಿಮನ್ಯು ಮೈಸೂರಿಗೆ ಬರುವಾಗ 5,145 ಕೆ.ಜಿ. ಇದ್ದ. ಇದೀಗ 5,420 ಕೆ.ಜಿ.ಗೆ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. ಈಶ್ವರ 3,995 ಕೆಜಿಯಿಂದ 4,270 ಕೆ.ಜಿ., ಧನಂಜಯ 4,460 ಕೆಜಿಯಿಂದ 4,710 ಕೆ.ಜಿ.ಗೆ ತೂಕವನ್ನು ಹೆಚ್ಚಿಸಿಕೊಂಡಿದ್ದಾನೆ. ಅಂಬಾರಿ ಹೊತ್ತ ಅರ್ಜುನ 5,800 ಕೆ.ಜಿ.ಯಿಂದ 6,040 ಕೆ.ಜಿ. ಹಾಗೂ ವಿಜಯ 2,825 ಕೆ.ಜಿ.ಯಿಂದ 2,970 ಕೆ.ಜಿ.ಗೆ ತೂಕವನ್ನು ಹೆಚ್ಚಿಸಿಕೊಂಡಿವೆ.

ಜಂಬು ಸವಾರಿ ಮುಗಿದ ಮಾರನೆ ದಿನ ಅಂದರೆ ಬುಧವಾರವೇ ಮೂರು ಆನೆಗಳು ಕಾಡಿಗೆ ಮರಳಿದ್ದವು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಲು ಅಭಿಮನ್ಯು, ಗೋಪಾಲಸ್ವಾಮಿ ಹಾಗೂ ಜಯಪ್ರಕಾಶ್ ಆನೆಗಳು ಬುಧವಾರ ಕಾಡಿಗೆ ತೆರಳಿದ್ದವು.

 

ಗಜಪಡೆಯನ್ನು ಬೀಳ್ಕೊಡಲು ಯಾವೊಬ್ಬ ಜನಪ್ರತಿನಿಧಿಯೂ ಬಂದಿರಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳು ಮಾತ್ರ ಗಜಪಡೆಯ ಬೀಳ್ಕೊಡಗೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ ದಸರಾ ಮುಗಿದ ಮೇಲೆ ಗಜಪಡೆ, ಅದರ ಮಾವುತ – ಕಾವಾಡಿಗಳು ಯಾರಿಗೆ ಬೇಕು ಎಂಬ ಮಾತನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಕ್ಷರಶಃ ಸತ್ಯ ಮಾಡಿದ್ದಾರೆ.

ಎಲ್ಲ ಆನೆಗಳನ್ನು ಲಾರಿಗಳಿಗೆ ಹತ್ತಿಸುವಾಗ ಆ ಭಾವನಾತ್ಮಕ ಕ್ಷಣವನ್ನು ಕಂಡು ಅಲ್ಲಿನ ಜನರ ಕಣ್ತುಂಬಿ ಬಂತು. ಇದಕ್ಕೆ ಕಾರಣ ನಾನು ಅರಮನೆಯಿಂದ ಹೋಗುವುದಿಲ್ಲ ಎಂಬಂತೆ ಲಕ್ಷ್ಮಿ ಆನೆ ಲಾರಿ ಏರದೇಸತಾಯಿಸುತ್ತಿತ್ತು. ಸತತ ಎರಡು ಗಂಟೆಗಳ ಕಾಲ ಅರ್ಜುನ, ಗೋಪಿ, ವಿಕ್ರಮ ಆನೆಗಳು ಲಕ್ಷ್ಮಿ ಆನೆಯನ್ನ ಲಾರಿ ಹತ್ತಿಸಲು ಎಷ್ಟೇ ಪ್ರಯತ್ನಪಟ್ಟರೂ ಲಾರಿ ಏರದೇ ನಾನು ಹೋಗುವುದಿಲ್ಲ ಎಂದು ಹಠ ಹಿಡಿದಿತ್ತು. ಈ ವೇಳೆ ಕಡೆಯ ಪ್ರಯತ್ನವೆಂಬಂತೆ ಮಾವುತರು ಸೇರಿದಂತೆ ಆನೆಗಳ ಸಹಾಯದೊಂದಿಗೆ ಲಕ್ಷ್ಮಿ ಆನೆಯನ್ನು ಲಾರಿ ಹತ್ತಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *