ಶ್ರೀಕಿಗೂ, ನನ್ನ ಮಗನಿಗೂ ಯಾವುದೇ ರೀತಿಯ ಸಂಬಂಧವಿಲ್ಲ: ರುದ್ರಪ್ಪ ಲಮಾಣಿ

Public TV
2 Min Read

– ಕಾನೂನು ಯಾವುದೇ ರೀತಿಯ ಕ್ರಮ ತೆಗೆದುಕೊಂಡರು ಸರಿ

ಬೆಂಗಳೂರು: ಹ್ಯಾಕರ್ ಶ್ರೀಕಿಗೂ ನನ್ನ ಮಗ ದರ್ಶನ್ ಕುಮಾರನಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಂದೆ ನನ್ನ ಮಗನ ಮೇಲೆ ಕೇಸ್ ಆಗಿತ್ತು. ಆಗ ನನ್ನ ಮಗನ ಜೊತೆ ಆ ಹುಡುಗನೂ(ಶ್ರೀಕಿ) ಸಹ ಅರೆಸ್ಟ್ ಆಗಿದ್ದ. ಅದರಿಂದ ಅವನು ಈ ರೀತಿ ಹೇಳಿರಬಹುದು. ಅದು ಬಿಟ್ಟು ನಮಗೂ ಅವನಿಗೂ ಯಾವುದೇ ರೀತಿಯ ಸಂಬಂಧ ಇಲ್ಲ. ಈಗ ನನ್ನ ಮಗ ಆ ರೀತಿಯ ಕೆಲಸಗಳನ್ನು ಮಾಡುತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ

ಆ ಬಗ್ಗೆ ನಮಗೆ ಯಾವ ವಿಚಾರವೂ ತಿಳಿದಿಲ್ಲ. ತನಿಖೆ ಮಾಡಲಿ ನಂತರ ಏನು ಎಂದು ಅವರಿಗೂ ತಿಳಿಯುತ್ತೆ. ಒಂದು ವೇಳೆ ತನಿಖೆಯಲ್ಲಿ ತಿಳಿದರೆ ನೋಡಣ ಎಂದು ಉತ್ತರಿಸಿದರು. ಶ್ರೀಕಿ ನಿಮ್ಮ ಮಗನನ್ನು ಸ್ನೇಹಿತ ಎಂದು ಹೇಳಿರುವ ವಿಚಾರವಾಗಿ ಮಾತನಾಡಿದ ಅವರು, ಆ ರೀತಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಆ ಕೇಸ್ ಮುಗಿದ ಮೇಲೆ ಅವನ ಜೊತೆ ನನ್ನ ಮಗನ ಸಂಬಂಧವಿರಲಿಲ್ಲ ಎಂದು ತಿಳಿಸಿದರು.

ಶ್ರೀಕಿ ಜೊತೆ ಅರೆಸ್ಟ್ ಆಗಿ ಈತನ ಜೊತೆ ಇದ್ದ ಎಂಬುದನ್ನು ಬಿಟ್ಟರೇ ಇವನಿಗೂ ನನ್ನ ಮಗನಿಗೂ ಯಾವುದೇ ಸಂಬಂಧವಿಲ್ಲ. ಪೊಲೀಸರು ಕೇಸ್ ಫೈಲ್ ಮಾಡಿರುವುದರಲ್ಲಿ ಅವರ ಹೆಸರು ಬಂದಿದೆ ಎಂಬುದು ಬಿಟ್ಟರೇ ಬೇರೆ ಏನೂ ಇಲ್ಲ. ಏನಾದರೂ ಇದ್ದರೆ ತನಿಖೆ ಮಾಡಲಿ. ಅದರಲ್ಲಿ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಈ ವಿಚಾರವಾಗಿ ನಿಮ್ಮ ಮಗನನ್ನು ವಿಚಾರಿಸಿದ್ದೀರಾ ಎಂಬ ಪ್ರೇಶ್ನೆಗೆ ಉತ್ತರಿಸಿದ ಅವರು, ಅಲ್ಲ. ಏಕೆಂದರೆ ಅವನಿಗೂ ಇವನಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂಬುದು ನನಗೆ ಗೊತ್ತಿತ್ತು. ಅವನು ಇವನನ್ನು ನೋಡು ಇಲ್ಲ. ಶ್ರೀಕಿ ಯಾವ ಉದ್ದೇಶದಿಂದ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಮಗ ಶ್ರೀಕಿಯ ಸ್ನೇಹಿತನಲ್ಲ ಎಂಬುದು ಮಾತ್ರ ನಿಜ ಎಂದು ಸ್ಪಷ್ಟಪಡಿಸಿದರು.

ಇಬ್ಬರು ಒಂದೇ ಕೇಸ್ ನಲ್ಲಿ ಇದ್ದಿದ್ದು, ನಿಜ. ಅದು ಬಿಟ್ಟರೇ ಇವರಿಬ್ಬರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಆ ಕೇಸ್ ಬಿಟ್ಟ ಮೇಲೆ ಇವರಿಬ್ಬರಿಗೂ ಯಾವುದೇ ಸಂಪರ್ಕವಿಲ್ಲ. ಪ್ರಸ್ತುತ ನಮ್ಮ ಮಗ ನಮ್ಮ ಜೊತೆಯಲ್ಲಿಯೇ ಇದ್ದಾನೆ. ಬೇರೆ ಕೆಲಸ ಮಾಡಿಕೊಂಡು ಇದ್ದಾನೆ. ಅದು ಬಿಟ್ಟು ಬೇರೆ ಏನು ಇಲ್ಲ ಎಂದರು.

ಕ್ರಮ ತೆಗೆದುಕೊಳ್ಳಲಿ!

ಯಾರು ಬೇಕಾದರೂ ತನಿಖೆ ಮಾಡಲಿ. ಯಾವುದೇ ರೀತಿಯಲ್ಲಿ ತನಿಖೆ ಮಾಡಿದರು ನಾವು ಒಪ್ಪಿಕೊಳ್ಳುತ್ತೇವೆ. ಕಾನೂನಿಗೆ ಎಲ್ಲರೂ ಸರಿಸಮಾನರು. ಒಂದು ವೇಳೆ ನಮ್ಮ ಮಗ ಏನಾದರೂ ಈ ಕೇಸ್‍ನಲ್ಲಿ ಇದ್ದರೆ, ಕಾನೂನು ಯಾವ ರೀತಿ ಬೇಕಾದರೂ ಕ್ರಮ ತೆಗೆದುಕೊಳ್ಳಲಿ ನಾವು ಅದಕ್ಕೆ ತಲೆ ಬಾಗುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವುದೇ ಕಾಯಿನ್ ವಿಚಾರಕ್ಕೂ, ನನ್ನ ಮಗನಿಗೂ ಸಂಬಂಧ ಇಲ್ಲ: ಎನ್.ಎ.ಹ್ಯಾರಿಸ್

ಸಿಸಿಬಿ ಈ ಕುರಿತು ಕರೆ ಮಾಡಿದ್ರ ಎಂಬುದಕ್ಕೆ ಉತ್ತರಿಸಿದ ಅವರು, ಇಲ್ಲ ಇನ್ನೂ ಅವರು ಯಾವುದೇ ರೀತಿ ಕರೆ ಮಾಡಿಲ್ಲ. ನಮ್ಮ ಮಗನನ್ನು ಅವರು ವಿಚಾರಣೆಗೆ ಕರೆದಿಲ್ಲ. ಈ ವಿಚಾರ ನಮಗೆ ತಿಳಿದಿದ್ದೆ ಮಾಧ್ಯಮಗಳನ್ನು ನೋಡಿದ ಮೇಲೆ. ಅಲ್ಲಿಯವರೆಗೂ ಈ ವಿಚಾರ ನಮಗೆ ತಿಳಿದಿರಲಿಲ್ಲ. ಈ ಕುರಿತು ನನಗೆ ಯಾವುದೇ ರೀತಿಯ ಮಾಹಿತಿ ತಿಳಿದಿಲ್ಲ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *