ಮೊದಲು ದೇಶ, ನಂತ್ರ ಪಕ್ಷ, ಭ್ರಷ್ಟಾಚಾರದಲ್ಲಿ ನನಗೆ ಯಾರೂ ಸಂಬಂಧಿಗಳಿಲ್ಲ: ಮೋದಿ

Public TV
1 Min Read

ನವದೆಹಲಿ: ಮೊದಲು ದೇಶ, ನಂತರ ಪಕ್ಷ. ಪ್ರಜಾಪ್ರಭುತ್ವ, ಚುನಾವಣೆ ಬದಿಗಿಟ್ಟು ನಾಯಕರು ಚಿಂತನೆಗೆ ಹಚ್ಚಿಕೊಳ್ಳಬೇಕು. ಅಧಿಕಾರ ಅನುಭವಿಸಲಿಕ್ಕಲ್ಲ ಜನಸೇವೆಗೆ ಎಂದು ಪಕ್ಷದ ನಾಯಕರಿಗೆ ಕಾರ್ಯಕಾರಿಣಿಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ದೆಹಲಿಯ ತಾಲ್ಕೋಟಾ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ಏನು ಮಾತನಾಡಿದ್ದಾರೆ ಎನ್ನುವುದನ್ನು ಮಾಧ್ಯಮಗಳಿಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿ, ಭ್ರಷ್ಟಾಚಾರದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಯಿಲ್ಲ. ಈ ವಿಚಾರದಲ್ಲಿ ನನಗೆ ಯಾರೂ ಸಂಬಂಧಿಗಳು ಇಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ವಿವರಿಸಿದರು.

ಯಾವುದೇ ಮುಲಾಜಿಗೆ ಒಳಗಾಗದೇ ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಮತ್ತಷ್ಟು ವ್ಯಾಪಕಗೊಳಿಸುತ್ತೇವೆ. ಆಡಳಿತದಲ್ಲಿ ಜನರ ಸಹಭಾಗಿತ್ವ ಆಗುವಂಥೆ ನೋಡಿಕೊಳ್ಳಬೇಕು. ಜನರೇ ಪಾಲ್ಗೊಳ್ಳದಿದ್ದರೆ ಯಾವುದೇ ವಿಷಯದಲ್ಲೂ ನಾವು ಯಶಸ್ವಿ ಸಾಧಿಸಲು ಆಗುವುದಿಲ್ಲ ಎಂದು ಮೋದಿ ಹೇಳಿದರು ಎಂಬುದಾಗಿ ತಿಳಿಸಿದರು.

ಹಿಂದಿನ ಸರ್ಕಾರಗಳು ಸುಖವನ್ನು ಅನುಭವಿಸಲು ಅಧಿಕಾರ ನಡೆಸುತ್ತಿದ್ದವು. ಹೀಗಾಗಿ ಅವರು ಅಧಿಕಾರಲ್ಲಿದ್ದಾಗ ಕಪ್ಪು ಹಣವನ್ನು ತಡೆಗಟ್ಟಲು ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಮೋದಿ ಹೇಳಿದ್ದಾರೆ ಎಂದರು.

ಇದೇ ವೇಳೆ ಮೂಲಗಳ ಪ್ರಕಾರ ಸರ್ಕಾರದ ಆರ್ಥಿಕ ನಿಯಮಗಳನ್ನು ಸಮರ್ಥಿಸಿಕೊಳ್ಳುವಂತೆ ಮತ್ತು ವಿಪಕ್ಷಗಳಿಗೆ ಸಮರ್ಥವಾಗಿ ತಿರುಗೇಟು ನೀಡುವಂತೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

ಕಾರ್ಯಕಾರಿಣಿಯಲ್ಲಿ ಸಾಮಾನ್ಯವಾಗಿ 120 ಮಂದಿಗೆ ಮಾತ್ರ ಅವಕಾಶ ಇರುತ್ತಿತ್ತು. ಆದ್ರೆ ಈ ಬಾರಿ 13 ಸಿಎಂಗಳು ಸೇರಿದಂತೆ ಎರಡೂವರೆ ಸಾವಿರಕ್ಕೂ ಅಧಿಕ ಜನಪ್ರತಿನಿಧಿಗಳು ಭಾಗಿಯಾಗಿದ್ರು.

Share This Article
Leave a Comment

Leave a Reply

Your email address will not be published. Required fields are marked *