ನೇಣಿಗೆ ಶರಣಾಗಲು ಮುಂದಾಗಿದ್ದ ಮಾತು ಬಾರದ ಮೂಕಿ – ವಿಡಿಯೋ ಕಾಲ್ ಮೂಲಕ ಆತ್ಮಹತ್ಯೆ ತಪ್ಪಿಸಿದ್ರು

Public TV
2 Min Read

ಜೈಪುರ: ತಂದೆ ಹಾಗೂ ಪತಿ ದೌರ್ಜನ್ಯಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ರಾಜಸ್ಥಾನದ ಇಂದೋರ್ ನಲ್ಲಿರುವ ಸಂಸ್ಥೆಯೊಂದು ವಿಡಿಯೋ ಕರೆ ಮಾಡಿ ರಕ್ಷಿಸಿದ್ದಾರೆ.

ಇಂದೋರ್ ನಲ್ಲಿರುವ ಸಂಕೇತ ಭಾಷಾ ತಜ್ಞರಾದ ಜ್ಞಾನೇಂದ್ರ ಪುರೋಹಿತ್ ಬಳಿ ವಿಡಿಯೋ ಕಾಲ್ ಒಂದು ಬಂದಿದೆ. ಅದರಲ್ಲಿ ಮಹಿಳೆ ತನ್ನ ನೋವನ್ನು ತೋಡಿಕೊಂಡಿದ್ದಾಳೆ. ಜೊತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾಳೆ. ಸಂತ್ರಸ್ತೆಯ ಪತಿ ಹಾಗೂ ತಂದೆ ಹಿಂಸೆಗೆ ಮತ್ತು ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ಸಂಜ್ಞೆ ಮೂಲಕ ತನ್ನ ಮೇಲೆ ಹಿಂದಿನ ದಿನ ಕೂಡ ತಂದೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಮಾಡಿದ್ದಳು.

ನೇಣಿಗೆ ಕೊರಳೊಡ್ಡಿ ನಿಂತಿದ್ದ ಮಹಿಳೆಯನ್ನು ನೋಡಿ ಜ್ಞಾನೇಂದ್ರ ಕಂಗಾಲಾಗಿದ್ದು, ಸಂತ್ರಸ್ತೆ ತನ್ನ ಕುತ್ತಿಗೆಗೆ ಸೀರೆಯಲ್ಲಿ ನೇಣು ಹಾಕಿಕೊಳ್ಳುತ್ತಿದ್ದಳು. ಇದನ್ನು ನೋಡಿದ ಜ್ಞಾನೇಂದ್ರ ಆಕೆಯ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಜ್ಞಾನೇಂದ್ರ ಪುರೋಹಿತ್ ತಂಡದವರು ಈ ರೀತಿ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಆದರೆ ಎಷ್ಟು ಹೇಳಿದರೂ ಆಕೆ ಕುತ್ತಿಗೆಯಿಂದ ಬಟ್ಟೆ ತೆಗೆಯಲಿಲ್ಲ. ಕೂಡಲೇ ಜ್ಞಾನೇಂದ್ರ ಅವರ ಸಂಸ್ಥೆಯಲ್ಲಿರುವ ಸಿಬ್ಬಂದಿ ಫೋನ್ ನಂಬರನ್ನು ರಾಜಸ್ಥಾನ ಪೊಲೀಸರಿಗೆ ನೀಡಿದ್ದಾರೆ.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ಮಹಿಳೆಯ ವಿಳಾಸ ಪತ್ತೆ ಹಚ್ಚಿ ಅಲ್ಲಿಗೆ ಹೋಗಿ ಪ್ರಾಣ ಉಳಿಸಿದ್ದಾರೆ. ಪೊಲೀಸರು ಮಹಿಳೆಯ ಮನೆ ವಿಳಾಸ ಪತ್ತೆ ಮಾಡಿ ಅಲ್ಲಿಗೆ ಹೋಗುವಷ್ಟರಲ್ಲಿ ಸುಮಾರು 4 ಗಂಟೆ ಆಗಿತ್ತು. ಅಲ್ಲಿಯವರೆಗೆ ಜ್ಞಾನೇಂದ್ರ ಮತ್ತು ತಂಡ ಸಂಜ್ಞೆಯ ಮೂಲಕ ಆಕೆಯ ಮನವೊಲಿಸುವ ಯತ್ನ ನಡೆಸುತ್ತಿದ್ದರು ಎಂದು ವರದಿಯಾಗಿದೆ.

ಸಂತ್ರಸ್ತೆ ಕೆಲವು ದಿನಗಳ ಹಿಂದೆ ಮಾತು ಬಾರದ ಹುಡುಗನೊಂದಿಗೆ ಮದುವೆಯಾಗಿದ್ದಳು. ಮದುವೆಯಾದ ನಂತರ ಪತಿ ಆಕೆಯನ್ನು ಹಿಂಸುತ್ತಿದ್ದನು. ಅಷ್ಟೇ ಅಲ್ಲದೇ ನನ್ನನ್ನು ನೋಡಲು ಮನೆಗೆ ಬಂದಿದ್ದ ತಂದೆಯೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳೆ ಜ್ಞಾನೇಂದ್ರ ಅವರ ಬಳಿ ಹೇಳಿಕೊಂಡಿದ್ದಳು.

ಈ ಪ್ರಕರಣ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಈ ಬಗ್ಗೆ ಸಾಕ್ಷ್ಯಧಾರಗಳು ಲಭಿಸಿಲ್ಲ. ಆದ್ದರಿಂದ ಆರೋಪಿ ತಂದೆ ಮತ್ತು ಪತಿಗೆ ವಿರುದ್ಧವಾಗಿ ಮಾಡಿರುವ ಆರೋಪ ದೃಢವಾಗಿಲ್ಲ. ಈ ಬಗ್ಗೆ ಸತ್ಯಾಂಶ ತಿಳಿಯಲು ನಮ್ಮ ಇಲಾಖೆಯಲ್ಲಿ ಮೂಕ-ಕಿವುಡ ತಜ್ಞರನ್ನು ಇಲ್ಲ. ಆದ್ದರಿಂದ ಸಂತ್ರಸ್ತೆಯನ್ನು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

https://www.facebook.com/Jansatta/videos/1904947196191866/

Share This Article
Leave a Comment

Leave a Reply

Your email address will not be published. Required fields are marked *