ಹಜ್‍ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು, ನಾಡಹಬ್ಬಕ್ಕೆ ಎಲ್ಲರೂ ಬರ್ತಾರೆ: ನಿಸಾರ್ ಅಹಮದ್

Public TV
1 Min Read

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಚಾಮುಂಡಿ ಬೆಟ್ಟದಲ್ಲಿ ನಿತ್ಯೋತ್ಸವ ಕವಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರು ಇಂದು ಅಧಿಕೃತವಾಗಿ ಚಾಲನೆ ನೀಡಿದರು.

ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಹಬ್ಬ ಗತಕಾಲದ ವೈಭವ. ಜಾತಿ ಧರ್ಮದ ಮಿತಿಗಳಿಲ್ಲದೆ ದಸರಾ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. ಹಜ್ ನಲ್ಲಿ ಮುಸ್ಲಿಮರು, ಕುಂಭ ಮೇಳದಲ್ಲಿ ಹಿಂದುಗಳು. ಆದರೆ ಮೈಸೂರು ದಸರಾದಲ್ಲಿ ಮಾತ್ರ ಧರ್ಮಗಳ ಮೀತಿಯೇ ಇಲ್ಲದೆ ಎಲ್ಲರೂ ತಾಯಿ ಚಾಮುಂಡಿ ದೇವಿ ಆಶೀರ್ವಾದ ಪಡೆದು ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಇದೇ ಮೈಸೂರು ದಸರಾ ವೈಶಿಷ್ಟ ಎಂದು ನಿಸಾರ್ ಅಹಮದ್ ಹೇಳಿದರು.

ನಾಡಹಬ್ಬದ ಉದ್ಘಾಟನೆಗೆ ನನ್ನನ್ನು ಆಹ್ವಾನ ಮಾಡಿದಾಗ ನನಗೆ ದಸರಾಗೆ ಚಾಲನೆ ನೀಡುವ ಅರ್ಹತೆ ಇದೆಯಾ ಅಂತ ಭಯ ಶುರುವಾಗಿತ್ತು. ಕಾರಣ ಈಡೀ ವಿಶ್ವವೇ ಒಂಭತ್ತು ದಿನಗಳ ಕಾಲ ದಸರಾ ವೀಕ್ಷಣೆ ಮಾಡುತ್ತದೆ. ಇಂತಹ ಹಬ್ಬವನ್ನು ಉದ್ಘಾಟನೆ ಮಾಡುವುದು ಸುಲಭದ ಮಾತಲ್ಲ. ನನಗೆ ಪದ್ಮಶ್ರೀ, ನಾಡೋಜ ಪ್ರಶಸ್ತಿ ಗೌರವ ಸಿಕ್ಕಿರಬಹುದು. ಆದರೆ ದಸರಾ ಚಾಲನೆ ಮಾಡುವ ಭಾಗ್ಯ ಸಿಕ್ಕಿರುವುದು ದೊಡ್ಡದು ಎಂದು ಸಂತೋಷ ವ್ಯಕ್ತಪಡಿಸಿದರು.

ಅರಮನೆಯ ಸಿಂಹಾಸನ ಜೋಡಣೆ ಕಾರ್ಯ ಮುಕ್ತಾಯವಾಗಿದ್ದು, ಅರಮನೆಯಲ್ಲಿ ಖಾಸಗಿ ದರ್ಬಾರ್ ಕಾರ್ಯ ಶುರುವಾಗಿದೆ. ರಾಜಮನೆತನದ ಸಂಪ್ರದಾಯದಂತೆ ಇಂದು ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾಗಿವೆ.

ರಾಜ ಯದುವೀರ್ ಒಡೆಯರ್‍ಗೆ ಈಗಾಗಲೇ ಕಂಕಣಧಾರಣೆ ನಡೆದಿದ್ದು ಬೆಳಗ್ಗೆ 11 ಗಂಟೆಗೆ ರಾಜರ ಪಟ್ಟದ ಕಾರ್ಯಕ್ಕೆ ಆನೆ, ಕುದುರೆ, ಹಸು ಆರಮನೆ ಪ್ರವೇಶಿಸುತ್ತವೆ. ಬಳಿಕ ರಾಜ ಯದುವೀರ್ ಒಡೆಯರ್‍ಗೆ ಸಿಂಹಾಸನಾರೋಹಣ ಕಾರ್ಯಕ್ರಮ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *