ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ವ್ಯಾಪಿಸಿದ ಧರ್ಮ ಸಂಘರ್ಷ

Public TV
2 Min Read

ಬೆಂಗಳೂರು: ಮಂಗಳೂರು, ಉಡುಪಿ ಬಳಿಕ ಬೆಂಗಳೂರಿಗೂ ಧರ್ಮ ಸಂಘರ್ಷ ವ್ಯಾಪಿಸಿದೆ. ನಗರದ ಬನಶಂಕರಿ ದೇಗುಲ ಸೇರಿದಂತೆ ಬೆಂಗಳೂರಿನ ಮುಜರಾಯಿ ದೇಗುಲದಲ್ಲಿಯೂ ಜಾತ್ರಮಹೋತ್ಸವ ಸೇರಿದಂತೆ ದೇಗುಲದ ಅವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧಕ್ಕೆ ಆಗ್ರಹ ಕೇಳಿಬಂದಿದೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆಯ ಬೆಂಗಳೂರು ನಗರ ಸದಸ್ಯ ವೆಂಕಟೇಶ್ ಮೂರ್ತಿ, ಬನಶಂಕರಿ ದೇಗುಲ ಸೇರಿದಂತೆ ಬೆಂಗಳೂರಿನ ಮುಜರಾಯಿ ದೇಗುಲದಲ್ಲಿಯೂ ಜಾತ್ರಮಹೋತ್ಸವ ಸೇರಿದಂತೆ ದೇಗುಲದ ಅವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡದಂತೆ ಪತ್ರ ಬರೆಯುತ್ತೇನೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. 2002ರ ಇಲಾಖೆಯ ಕಾಯ್ದೆಯ ಜಾರಿಗೆ ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ರಾಮೇಶ್ವರ ದೇಗುಲದ ಬ್ರಹ್ಮರಥೋತ್ಸವ ಆಹ್ವಾನ ಪತ್ರಿಕೆಯ ಮುಖಪುಟದಲ್ಲಿ ದೇಗುಲದ ಹೆಸರು ಹಾಕದೇ ಸ್ಥಳೀಯ ಮುಸ್ಲಿಂ ಶಾಸಕ ಜಮೀರ್ ಅಹ್ಮದ್ ಹೆಸರನ್ನೇ ದೊಡ್ಡದಾಗಿ ಅಚ್ಚು ಹಾಕಿದ್ದಾರೆ. ಇದು ಸರಿಯಲ್ಲ. ಮಸೀದಿ ಚರ್ಚ್‍ಗಳಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲ್ಲ. ಹೀಗಾಗಿ ಬನಶಂಕರಿ ದೇಗುಲದಲ್ಲಿ ಸೇರಿದಂತೆ ಬೆಂಗಳೂರು ನಗರದ ಪ್ರಮುಖ ದೇಗುಲದಲ್ಲಿ ಅನ್ಯ ಧರ್ಮಿಯ ವ್ಯಾಪಾರಿಗಳಿಗೆ ಅವಕಾಶ ಕೊಡದಂತೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವ್ಯಾಪಾರಿಗಳಿಗೆ ನಿಷೇಧ: ನಿಯಮ ಏನಿದೆ?

ಮುಂದಿನ ತಿಂಗಳು ನಡೆಯಲಿರುವ ಬೆಂಗಳೂರು ಕರಗ ಮಹೋತ್ಸದಲ್ಲಿಯೂ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬೇಕಾ ಬೇಡ್ವ ಎನ್ನುವುದರ ಬಗ್ಗೆ ಹಿಂದೂ ಸಂಘಟನೆಗಳಿಂದ ಇಂದು ಸಭೆ ನಡೆಯಲಿದೆ. ಧರ್ಮರಾಯ ದೇಗುಲದ ಆಡಳಿತ ಮಂಡಳಿಯ ಜೊತೆ ಕೆಲ ಹಿಂದೂ ಮುಖಂಡರ ಸಭೆ ಕರೆದಿದ್ದು, ಸಭೆಯ ಬಳಿಕ ಅಂತಿಮ ನಿರ್ಧಾರ ಪ್ರಕಟ ಸಾಧ್ಯತೆ ಇದೆ. ಇದನ್ನೂ ಓದಿ: ಮಂಗಳೂರಿನ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ

ನಿಯಮ ಏನಿದೆ?
ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ.

ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಕಾಪು ಮಾರಿಗುಡಿ ಆಡಳಿತ ಮಂಡಳಿ ಹೇಳುತ್ತಿದೆ. ಹಿಂದೂ ಸಂಘಟನೆಗಳಿಗೂ ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ.

ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

ಹಿಜಬ್ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್ ವಿವಾದ, ಕರ್ನಾಟಕ ಬಂದ್ ಬಳಿ ಈ ನಿಯಮ ಮುನ್ನೆಲೆಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *