ಗೋರಕ್ಷಕರಿಂದ ಕಿರುಕುಳ, ಮಾರಣಾಂತಿಕ ಹಲ್ಲೆ- ಮುಸ್ಲಿಂ ಯುವಕ ಸಾವು

By
1 Min Read

ಪಾಟ್ನಾ: ಬಿಹಾರದಲ್ಲಿ ಮುಸ್ಲಿಂ ಸಮುದಾಯದ ಯುವಕನೊಬ್ಬನಿಗೆ ಸ್ವಯಂಘೋಷಿತ ಗೋರಕ್ಷಕರು ಕಿರುಕುಳ ನೀಡಿ ಕೊಂದಿರುವ ಘಟನೆ ನಡೆದಿದೆ. ಆತನನ್ನು ಹೊಡೆದು ಕೊಂದು ಶವವನ್ನು ನಾಲೆಯಲ್ಲಿ ಹೂತಿರುವುದು ಬೆಳಕಿಗೆ ಬಂದಿದೆ. ಯುವಕನಿಗೆ ಕಿರುಕುಳ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ದಾಳಿಕೋರರು ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಯತ್ನಿಸಿದ್ದಾರೆ. ನಂತರ ದೇಹ ಬೇಗ ಕೊಳೆಯಲೆಂದು ದೇಹಕ್ಕೆ ಉಪ್ಪನ್ನು ಎರಚಿ ಸಮಾಧಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

ಬಿಹಾರ್‌ನ ವಿಪಕ್ಷ ನಾಯಕ ತೇಜಸ್ವಿ ಯಾದವ್‌ ಘಟನೆಗೆ ಸಂಬಂಧಿಸಿದ ಸುದ್ದಿಯನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಎನ್‌ಡಿಎ ನೇತೃತ್ವದ ಸರ್ಕಾರದ ಆಡಳಿತದಿಂದಾಗಿ ಬಿಹಾರ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜೆಡಿ(ಯು) ನಾಯಕನಾಗಿರುವ ಮುಸ್ಲಿಂ ಸಮುದಾಯದ ಯುವಕನಿಗೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಜೀವಂತವಾಗಿ ಸುಟ್ಟು ಸಮಾಧಿ ಮಾಡಲಾಗಿದೆ. ಇಂತಹ ದುರ್ಘಟನೆಗಳು ಬಿಹಾರ್‌ನಲ್ಲಿ ಯಾಕೆ ನಡೆಯುತ್ತಿವೆ ಎಂಬ ಬಗ್ಗೆ ನಿತೀಶ್‌ ಕುಮಾರ್‌ ಅವರು ಸ್ಪಷ್ಟನೆ ನೀಡಬೇಕು. ಜನರೇಕೆ ಕಾನೂನನ್ನು ಕೈಗೆ ತೆಗೆದುಕೊಂಡು ಹೀಗೆ ವರ್ತಿಸುತ್ತಿದ್ದಾರೆ ಎಂದು ಯಾದವ್‌ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹರ್ಷ ಮನೆಗೆ ಬಿಜೆಪಿ ನಾಯಕರ ಭೇಟಿ, ಸಾಂತ್ವನ

ಖಲೀಲ್‌ನ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಮೃತನ ಕುಟುಂಬಸ್ಥರು ಖಲೀಲ್‌ ಕಾಣೆಯಾಗಿರುವ ಬಗ್ಗೆ ಫೆ.16ರಂದು ದೂರು ದಾಖಲಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಖಲೀಲ್‌ನ ಮೊಬೈಲ್‌ನಿಂದ ಕುಟುಂಬಸ್ಥರಿಗೆ ಕರೆ ಬಂದಿದೆ. ಫೋನ್‌ನಲ್ಲಿ ಮಾತನಾಡಿದಾತ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡಲು ತಡ ಮಾಡಿದರೆ, ಖಲೀಲ್‌ನ ಕಿಡ್ನಿಯನ್ನು ಮಾರುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *