ಮಗಳನ್ನ ಪ್ರೀತಿಸಿದ್ದ ಯುವಕನ ಮೇಲೆ ಕೇಸ್ ಕೊಟ್ಟ ತಾಯಿ – ಜೈಲಿಂದ ಹೊರಬಂದಿದ್ದ ಯುವಕನಿಂದ ಕೊಲೆ

2 Min Read

ಚಿಕ್ಕಬಳ್ಳಾಪುರ: ಪ್ರೀತಿಸಿದ್ದ (Love) ಯುವತಿ ಜೊತೆ ಮದುವೆಯಾಗೋಕೆ ಯುವತಿಯ ತಾಯಿ ಅಡ್ಡಿಪಡಿಸಿದ್ದಳು. ಇದೇ ವಿಚಾರದಲ್ಲಿ ಮಗಳ ಜೊತೆ ಪ್ರೀತಿ ಪ್ರೇಮ ಪ್ರಣಯ ಅಂತ ಸುತ್ತಾಡಿದ್ದ ಆ ಯುವಕನ ಮೇಲೆ ಕೊನೆಗೆ ಪೊಲೀಸ್ ಕೇಸ್ ಕೂಡ ಕೊಡಿಸಿದ್ಲು ಆ ತಾಯಿ. ಇದ್ರಿಂದ ಪೋಕ್ಸೋ ಕೇಸ್ ನಲ್ಲಿ (POSCO Case) ಜೈಲುಪಾಲಾಗಿದ್ದ ಆರೋಪಿ ಹೊರಬಂದು ಕೊನೆಗೆ ಪ್ರೀತಿಸಿದ್ದ ಯುವತಿಯ ತಾಯಿಯನ್ನ ಕೊಲೆ ಮಾಡಿದ್ದಾನೆ.

ಹೌದು. ಕೊಲೆಯಾಗಿರೋದು ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ 38 ವರ್ಷದ ರೇಣುಕಾ ಅಂತ. ಕೊಲೆ ಮಾಡಿರೋದು ಇದೇ ಗ್ರಾಮದ ರಂಜಿತ್ ಅಂತ. ಆಸಲಿಗೆ 2023 ರಲ್ಲಿ ಕೊಲೆಯಾಗಿರುವ ರೇಣುಕಾಳ ಮಗಳನ್ನ ಇದೇ ಗ್ರಾಮದ ರಂಜಿತ್ ಕುಮಾರ್ ಪ್ರೀತಿಸುತ್ತಿದ್ದನಂತೆ. ಮಗಳನ್ನ ಮದುವೆ ಮಾಡಿಕೊಡಿ ಅಂತ ಮನೆಗೆ ಬಂದು ಕೇಳಿದ್ದನಂತೆ. ಆದ್ರೆ ಮನೆಯವರು ಇದಕ್ಕೆ ಒಪ್ಪಿಲ್ಲ, ಆದ್ರಲ್ಲೂ ರೇಣುಕಾ ನನ್ನ ಮಗಳನ್ನ ನಿನಗೆ ಕೊಡಲ್ಲ ಅಂತ ರಂಜಿತ್ ಕುಮಾರ್ ವಿರುದ್ಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.

ಪ್ರಕರಣದಲ್ಲಿ ಜೈಲುಪಾಲಾಗಿ ರೌಡಿಶೀಟರ್ ಸಹ ಆಗಿದ್ದ ರಂಜಿತ್ 2024 ರಲ್ಲಿ ಹೊರಬಂದಿದ್ದ. ಅಂದಿನಿಂದಲೂ ರೇಣುಕಾರನ್ನ ನೋಡಿದ್ರೆ ಸಾಕು ಬಾಯಿಗೆ ಬಂದಂತೆ ಬೈಕೊಂಡು ಒಡಾಡುತ್ತಿದ್ದ. ಇದೇ ರೀತಿ ರೇಣುಕಾ ಮನೆಯ ಮುಂದೆ ಇದ್ದಾಗ ಬಾಯಿಗೆ ಬಂದ ಹಾಗೆ ಬೈದಿದ್ದಾನೆ. ಇದ್ರಿಂದ ಯಾಕೆಲೇ ಅಂತ ರೇಣುಕಾ ಅಂತಿದ್ದಂತೆ ಮೈಮೇಲೆ ಬಿದ್ದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಅಷ್ಟರಲ್ಲೇ ರಂಜಿತ್ ತಾಯಿ ರಾಧಮ್ಮ, ಆತನ ಅಣ್ಣ ನವೀನ್ ರೇಣುಕಾ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ರೇಣುಕಾ ಪ್ರಜ್ಞಾಹೀನಳಾಗಿ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಆಕೆಯ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ.

ಇನ್ನೂ ರೇಣುಕಾಳ ಮೇಲೆ ರಂಜಿತ್ ಹಾಗೂ ಅತನ ತಾಯಿ ಹಾಗೂ ಅಣ್ಣ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಡ್ಡ ಬಂದಿರೋ ರೇಣುಕಾಳ ಮಗನಿಗೂ ಹಲ್ಲೆ ನಡೆಸಿದ್ದು, ಗಲಾಟೆ ಬಿಡಿಸಲು ಬಂದ ರೇಣುಕಾ ತಾಯಿಗೂ ಗಾಯವಾಗಿದೆ. ಘಟನೆ ನಂತರ ರೇಣುಕಾ ಸಂಬಂಧಿಕರು ರಂಜಿತ್, ಆತನ ತಾಯಿ ರಾಧಮ್ಮ ಹಾಗೂ ಆತನ ಅಣ್ಣ ನವೀನ್ ಸೇರಿದಂತೆ ಗಲಾಟೆಗೆ ಪ್ರಚೋದನೆ ನೀಡಿದ್ದಕ್ಕಾಗಿ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಂತರ ನಾಲ್ವರು ಸಹ ಊರು ಬಿಟ್ಟು ಪರಾರಿಯಾಗಿದ್ದು, ಈ ಸಂಬಂಧ ವಿಶ್ವನಾಥಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share This Article