ತಿರುವನಂತಪುರಂ: ಬಿಜೆಪಿ ಮುಖಂಡ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ನಾಯಕರ ಹತ್ಯೆ ಪ್ರಕರಣದ ಹಿನ್ನೆಲೆ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಭಾನುವಾರ ಬೆಳಗ್ಗೆ ಬಿಜೆಪಿಯ ಮೋರ್ಚಾ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿದ ಗ್ಯಾಂಗ್ ಅವರ ಕತ್ತು ಸೀಳಿ ಕೊಂದಿದ್ದಾರೆ.
ಶನಿವಾರ ಕೇರಳದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಕೆಎಸ್ ಶಾನ್ ಅವರ ಮೇಲೆ ಕೇರಳದ ಕೊಚ್ಚಿಯಲ್ಲಿ ಅಪರಿಚಿತ ಗ್ಯಾಂಗ್ವೊಂದು ದಾಳಿ ನಡೆಸಿತ್ತು. ಇದಾದ ಒಂದು ದಿನದ ನಂತರ ಭಾನುವಾರ ಬೆಳಗ್ಗೆ ರಂಜಿತ್ ಶ್ರೀನಿವಾಸನ್ ಅವರ ಹತ್ಯೆ ಮಾಡಲಾಗಿದೆ. ಇದನ್ನೂ ಓದಿ: SDPI ನಾಯಕನ ಹತ್ಯೆ ನಂತ್ರ ಬಿಜೆಪಿ ಮುಖಂಡನ ಕತ್ತು ಸೀಳಿ ಕೊಂದ್ರು
Section 144 imposed in Alappuzha district of Kerala: A Alexander, District Collector
— ANI (@ANI) December 19, 2021
ಕೆ.ಎಸ್. ಶಾನ್ ಮನೆಗೆ ತೆರಳುತ್ತಿದ್ದ ವೇಳೆ ಅವರ ಬೈಕ್ಗೆ ಕಾರೊಂದು ಡಿಕ್ಕಿ ಹೊಡೆದಿದೆ. ಈ ವೇಳೆ ಅವರಿಗೆ 40ಕ್ಕೂ ಹೆಚ್ಚು ಗಾಯಗಳಾಗಿತ್ತು. ಹೀಗಾಗಿ ಅವರನ್ನು ಕೊಚ್ಚಿಯಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಈ ಘಟನೆ ಕುರಿತಂತೆ ಎಸ್ಡಿಪಿಐ ಅಧ್ಯಕ್ಷ ಎಂ.ಕೆ.ಫೈಝಿ ಅವರು, ಕೆ.ಎಸ್.ಶಾನ್ ರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸದಸ್ಯರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ: ಓವೈಸಿ
ಇದೀಗ ಈ ಭೀಕರ ಹತ್ಯೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಖಂಡಿಸಿದ್ದಾರೆ. ದಾಳಿಯ ಹಿಂದಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮಕೈಗೊಳ್ಳಲಿದ್ದಾರೆ. ಇಂತಹ ಸಂಕುಚಿತ ಮತ್ತು ಅಮಾನವೀಯ ಕೃತ್ಯಗಳು ರಾಜ್ಯಕ್ಕೆ ಹಾನಿಕಾರಕವಾಗಿದೆ. ಕೊಲೆ ಮಾಡುವವರ ಗುಂಪುನ್ನು ಮತ್ತು ದ್ವೇಷ ತುಂಬಿಸಿಕೊಂಡಿರುವವರನ್ನು ಪ್ರತ್ಯೇಕಿಸಿ ನಾಗರಿಕ ಸಮಾಜದಿಂದ ದೂರ ಇಡಬೇಕು ಎಂದು ಕಿಡಿಕಾರಿದ್ದಾರೆ.