– ಮದ್ವೆ ಮನೆಯಲ್ಲಿ ಸ್ಮಶಾನ ಮೌನ
ಲಕ್ನೋ: ಗುರುವಾರ ಹಸೆಮಣೆ ಏರಬೇಕಿದ್ದ ವಧುವನ್ನು ಬರ್ಬರವಾಗಿ ಕೊಲೆಗೈದು ದುಷ್ಕರ್ಮಿಗಳು ಶವವನ್ನು ರಸ್ತೆಬದಿ ಎಸೆದು ಹೋದ ಘಟನೆ ಉತ್ತರ ಪ್ರದೇಶದ ಕಾನ್ಪುರ ನಗರದ ಬಿಟೂರ್ ಕ್ಷೇತ್ರದಲ್ಲಿ ನಡೆದಿದೆ.
20 ವರ್ಷದ ಅನ್ನಪೂರ್ಣ ಅಲಿಯಾಸ್ ಚೋಟಿ ಕೊಲೆಯಾದ ದುರ್ದೈವಿ. ಯುವತಿಯ ಮುಖವನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದೆ. ಅನ್ನಪೂರ್ಣಳ ಮದುವೆ ಕುರಸೌಲಿ ಗ್ರಾಮದ ಪುನೀತ್ ಎಂಬಾತನನೊಂದಿಗೆ ನಿಶ್ಚಯವಾಗಿತ್ತು. ಬಿರೂಟ್ ದೇವಾಲಯಕ್ಕೆ ತೆರಳಿ ಎರಡು ಕುಟುಂಬಸ್ಥರು ಪೂಜೆ ಸಲ್ಲಿಸಿ ಬರಲಾಗಿತ್ತು. ಪೂಜೆಯ ಬಳಿಕ ಮನೆಯಲ್ಲಿ ಮದುವೆ ಶಾಸ್ತ್ರಗಳು ಅದ್ಧೂರಿಯಾಗಿ ನಡೆದಿದ್ದವು. ಮಗಳು ಸಹ ಮದುವೆಯ ಖುಷಿಯಲ್ಲಿದ್ದಳು ಎಂದು ಅನ್ನಪೂರ್ಣ ತಂದೆ ನರೇಶ್ ಕಣ್ಣೀರು ಹಾಕುತ್ತಾರೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಅನ್ನಪೂರ್ಣ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಕಲ್ಯಾಣಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಭೇಟಿ ನೀಡಿ ಸ್ಥಳದ ಸುತ್ತಮುತ್ತಲಿನ ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇಬ್ಬರ ಮೇಲೆ ಶಂಕೆ:
ಅನ್ನಪೂರ್ಣ ಕುಟುಂಬಸ್ಥರು ಸ್ಥಳೀಯ ಇಬ್ಬರು ಯುವಕರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಓರ್ವ ನೆರೆಯ ಮನೆಯವನಾಗಿದ್ದು, ಮತ್ತೊರ್ವ ಕಲ್ಯಾಣಪುರದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇಬ್ಬರು ಯುವಕರು ಮನೆಯ ಹತ್ತಿರ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.