ತಂದೆ-ಮಗನ ಜೋಡಿ ಕೊಲೆ ಪ್ರಕರಣ: ಆರೋಪಿಗಳ ಬಂಧನ

Public TV
1 Min Read

ರಾಯಚೂರು: ಮಾನ್ವಿಯ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ತಂದೆ-ಮಗನ ಜೋಡಿ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.  ಮಾನ್ವಿ ತಾಲೂಕು ಪಂಚಾಯ್ತಿ ಬಿಜೆಪಿ ಸದಸ್ಯ ದೇವರಾಜ್ ನಾಯಕ್, ಮುದಿಯಪ್ಪ, ಹಸನ್ ಸಾಬ್, ಅಮರೇಶ್ ಬಂಧಿತ ಆರೋಪಿಗಳು.

ಏನಿದು ಪ್ರಕರಣ: ಏಪ್ರಿಲ್ 13 ರಂದು ಸಂಜೆ 6:30ರ ವೇಳೆಗೆ ಕುರುಕುಂದಾ ಗ್ರಾಮದ ನಬೀಸಾಬ್ ಎಂಬವರನ್ನ ಮಾಡಗೇರಾ ಕ್ರಾಸ್‍ನಲ್ಲಿ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬರುತ್ತಿದ್ದ ನಬೀಸಾಬ್ ಮಗ ಅಬ್ದುಲ್ ನಜೀರ್ ಸಾಬ್‍ನನ್ನ 1 ಗಂಟೆಯ ಅಂತರದಲ್ಲಿ ಹುಣಚೇಡ್ ಕ್ರಾಸ್ ಬಳಿ ಕೊಲೆ ಮಾಡಲಾಗಿತ್ತು.

ಹಳೇ ವೈಷಮ್ಯಕ್ಕೆ ಕೊಲೆ: ಕುರಕುಂದಾ ಗ್ರಾಮದಲ್ಲಿ 30 ವರ್ಷಗಳ ಹಿಂದೆ ದೇವರಾಜ್ ನಾಯಕ್ ತಾತಾನ ಕೊಲೆಯಾಗಿತ್ತು. ಆ ಕೊಲೆ ಪ್ರಕರಣದಲ್ಲಿ ಕೊಲೆಯಾದ ನಬೀಸಾಬ್ ಕೂಡ ಭಾಗಿಯಾಗಿದ್ದ. ಈ ಹಳೇ ವೈಷಮ್ಯದಿಂದಾಗಿ ಎರಡು ಕೊಲೆಗಳನ್ನ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆದ್ರೆ ದೇವರಾಜ್ ನಾಯಕ್ ,ನಬೀಸಾಬ್ ಬಿಜೆಪಿ ಪಕ್ಷದಲ್ಲೇ ಇದ್ದು ಒಟ್ಟಾಗಿ ಕಳೆದ ತಾಲೂಕು ಪಂಚಾಯ್ತಿ ಚುನಾವಣೆ ಎದುರಿಸಿದ್ದರು. ಚುನಾವಣೆಯಲ್ಲಿ ದೇವರಾಜ್ ನಾಯಕ್ ಗೆಲುವಿಗೆ ನಬೀಸಾಬ್ ಪ್ರಮುಖ ಪಾತ್ರವಹಿಸಿದ್ದ. ಆದ್ರೆ ಕ್ಷುಲ್ಲಕ ಕಾರಣಕ್ಕೆ ಇತ್ತೀಚೆಗೆ ನಡೆದ ಸಣ್ಣ ಜಗಳದಿಂದ ಹಳೆಯ ವೈಷಮ್ಯ ಭುಗಿಲೆದ್ದು ಜೋಡಿಕೊಲೆಯಲ್ಲಿ ಅಂತ್ಯವಾಗಿದೆ.

ಜೋಡಿ ಕೊಲೆ ಹಿನ್ನೆಲೆಯಲ್ಲಿ ಸಿರವಾರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಮಾನ್ವಿ ಸಿಪಿಐ ಜಿ.ಚಂದ್ರಶೇಖರ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ರಚಿಸಿದ್ದ ವಿಶೇಷ ಪೊಲೀಸ್ ತಂಡ ನಾಲ್ಕು ಜನ ಆರೋಪಿಗಳನ್ನ ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದನ್ನೂ ಓದಿ: ರಾಯಚೂರು: ನಡುರಸ್ತೆಯಲ್ಲಿ ತಂದೆ-ಮಗನನ್ನು ದೊಣ್ಣೆಯಿಂದ ಹೊಡೆದು ಕೊಲೆ!

Share This Article
Leave a Comment

Leave a Reply

Your email address will not be published. Required fields are marked *