ಮಂಗ್ಳೂರಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತನ ಕೊಲೆಗೆ ಯತ್ನ-ಮಚ್ಚು ಲಾಂಗ್‍ಗಳಿಂದ ಹಲ್ಲೆ

Public TV
1 Min Read

ಮಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತರೊಬ್ಬರ ಮೇಲೆ 6 ಮಂದಿ ದುಷ್ಕರ್ಮಿಗಳ ತಂಡ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿ.ಸಿ ರೋಡ್‍ನಲ್ಲಿ ನಡೆದಿದೆ.

ಸಜೀಪದ ಕುಂದೂರು ನಿವಾಸಿ 28 ವರ್ಷದ ಶರತ್ ಮಡಿವಾಳ ಹಲ್ಲೆಗೊಳಗಾದ ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಿ.ಸಿ.ರೋಡ್‍ನಲ್ಲಿ ಇಸ್ತ್ರಿ ಅಂಗಡಿ ಹೊಂದಿದ್ದ ಶರತ್, ಮಂಗಳವಾರ ರಾತ್ರಿ 9.30 ಸುಮಾರಿಗೆ ಅಂಗಡಿ ಮುಚ್ಚುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳ ತಂಡ ಲಾಂಗು, ಮಚ್ಚುಗಳಿಂದ ಶರತ್ ಮೇಲೆ ಹಲ್ಲೆ ಮಾಡಿ ಪಲ್ಸರ್ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

ಶರತ್‍ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಶರತ್ ಕುಟುಂಬಕ್ಕೆ ಆಧಾರವಾಗಿದ್ದು ಒಬ್ಬನೇ ಮಗನಾಗಿದ್ದು, ತಂದೆ ಮಗ ಇಬ್ಬರೂ ಇಸ್ತ್ರಿ ಅಂಗಡಿಯಲ್ಲೇ ದುಡಿಮೆ ಮಾಡ್ತಿದ್ರು. ಶರತ್ ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದು, ನಿರಂತರ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದರು. ಹೀಗಾಗಿಯೇ ಶರತ್‍ರನ್ನು ಗುರಿಯಾಗಿಸಿ ಕೊಲೆ ಯತ್ನ ನಡೆಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ.

ಸ್ಥಳಕ್ಕೆ ಎಸ್‍ಪಿ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಸಿಸಿಬಿ ಎಸಿಪಿ ವೆಲೆಂಟೈನ್ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಮಂಗಳೂರು ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಈ ಹಿಂದೆ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಗಳು:
1. ಬೆಂಗಳೂರಿನ ಶಿವಾಜಿನಗರಲ್ಲಿ ಆರ್. ರುದ್ರೇಶ್ ಎಂಬ ಆರ್‍ಎಸ್‍ಎಸ್ ಕಾರ್ಯಕರ್ತರನ್ನ ಹತ್ಯೆ ಮಾಡಲಾಗಿತ್ತು. 2016 ಅಕ್ಟೋಬರ್ 16ರ ಭಾನುವಾರ ಆರ್‍ಎಸ್‍ಎಸ್ ಪಥಸಂಚಲ ಮುಗಿಸಿ ವಾಪಸ್ ಬರುವಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ರು.

2. ಮೈಸೂರಿನಲ್ಲಿ ಮಾರ್ಚ್ 13ರಂದು ರಾಜು ಎಂಬವರನ್ನು ಹತ್ಯೆ ಮಾಡಲಾಗಿತ್ತು. ನೇತಾಜಿ ಸರ್ಕಲ್‍ನಲ್ಲಿ ನಿಂತಿದ್ದಾಗ ಬೈಕ್‍ನಲ್ಲಿ ಬಂದ ಕಿಡಿಗೇಡಿಗಳು ದೊಣ್ಣೆಯಿಂದ ಹೊಡೆದು ಸಾಯಿಸಿದ್ರು.

3. ಬೊಮ್ಮಸಂದ್ರ ಮುನ್ಸಿಪಾಲಿಟಿ ಮೆಂಬರ್ ಕಿತ್ತಗಾನಹಳ್ಳಿ ವಾಸು ಎಂಬುವರನ್ನು ಮಾರ್ಚ್ 14ರಂದು ಕಿಡ್ನಾಪ್ ಮಾಡಿ ಹತ್ಯೆ ಮಾಡಲಾಗಿತ್ತು.

 

 

Share This Article
Leave a Comment

Leave a Reply

Your email address will not be published. Required fields are marked *