ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

Public TV
2 Min Read

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜ್ಯದಲ್ಲಿ‌ ಅತೀ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆ ಸಕ್ಕರೆ ನಾಡು ಮಂಡ್ಯದಲ್ಲಿ ನಿಗದಿ ಮಾಡಲಾಗಿದೆ. ಹೀಗಿರುವಾಗ ಶಾಸಕರೊಬ್ಬರು ತನ್ನ ಆಪ್ತರೂ ಆದ ಕೊಲೆ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷರನ್ನಾಗಿ ಮಾಡಲು ಶಿಫಾರಸು ಹೊರಡಿಸಿದ್ದಾರೆ.

ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತನ್ನ ಆಪ್ತ, ಕೊಲೆ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗೆ ಇರುವ ಒಬ್ಬ ವ್ಯಕ್ತಿಗೆ ತನ್ನ ಶಿಫಾರಸಿನಿಂದ ತಾಲೂಕಿನ ಕನ್ನಡ ಸಾಹಿತ್ಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ‌ ಜರುಗುವ ಈ ಕನ್ನಡ ಹಬ್ಬಕ್ಕೆ ಮಂಡ್ಯ ಒಂದು ಕಡೆ ಪೂರ್ವಭಾವಿ ಸಿದ್ಧತೆಯಲ್ಲಿ ಇದೆ. ಮಂಡ್ಯದಲ್ಲಿ ಈ‌ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರೋದು ಸಮ್ಮೇಳನಕ್ಕೆ ಮತ್ತಷ್ಟು ಮೆರಗು ತಂದಿದೆ. ಇನ್ನೊಂದೆಡೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಮ್ಮ ಆಪ್ತನಾದ ಕೊಲೆ ಆರೋಪಿ ಜೊತೆ ಜಾಮೀನು ಮೇಲೆ‌ ಹೊರಗೆ ಇರುವ ಎಂ.ಬಿ.ಕುಮಾರ್ ಎಂಬ ವ್ಯಕ್ತಿಗೆ ತಮ್ಮ ಶಿಫಾರಸಿನ ಮೂಲಕ ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಈ ಮೂಲಕ ಜಾಮೀನಿನ ಮೇಲೆ ಹೊರಗೆ ಇರುವ ಕೋಲೆ‌ ಆರೋಪಿಯನ್ನು ಕನ್ನಡದ ತೇರನ್ನು‌ ಎಳೆಯಲು ಮುಂಬದಿಗೆ ನಿಲ್ಲಿಸಿರೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕಸಾಪ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರಾಗಿರುವ ಎಂ.ಬಿ.ಕುಮಾರ್, ಶಾಸಕ‌ ರಮೇಶ್ ಬಾಬು ಬಂಡಿಸಿದ್ದೇಗೌಡ ಆಪ್ತ. ಈತ 2015 ಜನವರಿ 3 ರಂದು ನಡೆದ ರೌಡಿಶೀಟರ್ ಕೊಲೆ ಕೇಸ್‌ನಲ್ಲಿ 30ನೇ ಆರೋಪಿಯಾಗಿದ್ದಾನೆ.‌ ಸದ್ಯ ಈ ಕುಮಾರ್ ಬೇಲ್ ಮೇಲೆ ಹೊರಗೆ ಇದ್ದಾನೆ. ಕಸಾಪ ಬೈಲಾ ಪ್ರಕಾರ ಕ್ರಿಮಿನಲ್ ಕೇಸ್ ಹಿನ್ನೆಲೆ ಉಳ್ಳ ಯಾವ ವ್ಯಕ್ತಿಗೂ ಕಸಾಪ ಜವಾಬ್ದಾರಿಯನ್ನು ನೀಡಬಾರದು ಎಂದಿದೆ. ಹೀಗಿದ್ದರೂ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡನ ಒತ್ತಡಕ್ಕೆ ಮಣಿದು ಎಂ.ಬಿ.ಕುಮಾರ್‌ನನ್ನು‌ ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ್ ಜೋಶಿ, ಈ ಬಗ್ಗೆ ನನ್ನ ಗಮನಕ್ಕೆ ಈಗಷ್ಟೇ ಬಂದಿದೆ. ಈ ಸಂಬಂಧ ವಿಚಾರಣೆ ನಡೆಸಿ ಒಂದು ವೇಳೆ ತಪ್ಪಿದ್ಧರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Share This Article