ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

Public TV
2 Min Read

ಮುಂಬೈ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ.

ನೂಪುರ್ ಶರ್ಮಾ ಜ್ಞಾನವಾಪಿ ಮಸೀದಿ ಕುರಿತ ಚರ್ಚೆಯ ವೇಳೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಗದ್ದಲ ಎಬ್ಬಿದ್ದಾರೆ. ಈ ಸಂಬಂಧ ಇದೇ ಜೂನ್ 22ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೂಪುರ್ ಶರ್ಮಾಗೆ ಇ-ಮೇಲ್ ಮತ್ತು ಸ್ಪೀಡ್ ಪೋಸ್ಟ್ ಮೂಲಕ ಸಮನ್ಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ, ಕೊಲೆ ಬೆದರಿಕೆ – ವಿವಾದಿತ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದೆಹಲಿ ಪೊಲೀಸರಿಂದ ಭದ್ರತೆ 

ಈಗಾಗಲೇ ಅವಹೇಳನಕಾರಿ ಹೇಳಿಕೆ ಕುರಿತಂತೆ ನೂಪುರ್ ವಿರುದ್ಧ ಥಾಣೆ ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಂಬರ್‌ನಾಥ್ ಪೋಲೀಸರೂ ಸಹ ದೂರನ್ನು ಸ್ವೀಕರಿಸಿದ್ದಾರೆ. ಇದೂ ಸಹ ಎಫ್‌ಐಆರ್ ಆದರೆ ಥಾಣೆ ಜಿಲ್ಲೆಯಲ್ಲೇ ಮೂರು ಪ್ರಕರಣ ದಾಖಲಾಗಲಿದೆ. ಈ ಹಿನ್ನೆಲೆಯಲ್ಲಿ ಜೂನ್ 22ರಂದು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸಮನ್ಸ್ ಜಾರಿ ಮಾಡಲಾಗಿದೆ ಎಂದು ಥಾಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‍ ಕುರಿತು ಆಕ್ಷೇಪಾರ್ಹ ಹೇಳಿಕೆ – ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅಮಾನತು

ಭಾರತದ ರಾಯಭಾರಿಗೂ ಸಮನ್ಸ್: ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಜಕಾರ್ತದಲ್ಲಿರುವ ಭಾರತದ ರಾಯಭಾರಿಗೆ ಇಂಡೋನೇಷ್ಯಾ ಸರ್ಕಾರ ಸಮನ್ಸ್ ನೀಡಿದೆ. ಸಮನ್ಸ್ ನೀಡಿರುವ ವಿಚಾರವನ್ನು ಇಂಡೋನೇಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ತೆವುಕು ಫಜಾಸ್ಯಾಹ್ ಖಚಿತಪಡಿಸಿದ್ದಾರೆ. ಜಕಾರ್ತದಲ್ಲಿರುವ ಭಾರತದ ರಾಯಭಾರಿ ಮನೋಜ್ ಕುಮಾರ್ ಭಾರ್ತಿ ಅವರನ್ನು ನಿನ್ನೆ ಕರೆದು ಪ್ರತಿಭಟನೆ ದಾಖಲಿಸಿದ್ದು, ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಬ್ ರಾಷ್ಟ್ರಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಹಲವು ಮಧ್ಯಪ್ರಾಚ್ಯ ರಾಷ್ಟ್ರಗಳು ಭಾರತದ ರಾಯಭಾರಿಗಳಿಗೆ ಸಮನ್ಸ್ ನೀಡಿದ್ದವು. ಕುವೈತ್ ಸೂಪರ್ ಮಾರ್ಕೆಟ್‌ನಿಂದ ಭಾರತದ ಉತ್ಪನ್ನಗಳನ್ನು ತೆಗೆದುಹಾಕಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಇಂಡೋನೇಷ್ಯಾ ಕೂಡ ಕ್ರಮ ಕೈಗೊಂಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಇಂಡೋನೇಷ್ಯಾ ವಿದೇಶಾಂಗ ಸಚಿವಾಲಯವು, ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಭಾರತದ ಇಬ್ಬರು ರಾಜಕಾರಣಿಗಳು ನೀಡಿರುವ ಆಕ್ಷೇಪಾರ್ಹ, ಅವಹೇಳನಕಾರಿ ಹೇಳಿಕೆಗಳನ್ನು ಬಲವಾಗಿ ಖಂಡಿಸಿದ್ದೇವೆ ಎಂದು ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *