ರಸ್ತೆಗುರುಳಿದ ಬೃಹತ್ ಮರ – ಮುಳ್ಳಯ್ಯನಗಿರಿ ಸಂಚಾರ ಬಂದ್

Public TV
1 Min Read

ಚಿಕ್ಕಮಗಳೂರು: ಗಿರಿ ಭಾಗದಲ್ಲಿ ಮುಂದುವರಿದ ಮಳೆಯಿಂದಾಗಿ ಮುಳ್ಯಯ್ಯನಗಿರಿ ತಿರುವಿನಲ್ಲಿ ಬೃಹತ್ ಮರಗಳು ಬಿದ್ದು ರಸ್ತೆ ಮಾರ್ಗ ಸಂಪೂರ್ಣ ಬಂದ್ ಅಗಿದೆ.

ಚಿಕ್ಕಮಗಳೂರು ತಾಲೂಕಿನ ಮುಳ್ಯಯ್ಯನಗಿರಿ ದತ್ತಪೀಠದ ಮಾರ್ಗದಲ್ಲಿ ಬೃಹತ್ ಮರ ಬಿದ್ದಿರುವುದರಿಂದ ರಸ್ತೆ ಸಂಪೂರ್ಣ ಬಂದ್ ಆಗಿದೆ. ಗಿರಿ ಶ್ರೇಣಿ ಸಾಲನಲ್ಲಿಯೇ ಮರ ಬಿದ್ದಿರುವುದರಿಂದ ಗಿರಿಗೆ ತೆರಳಲು ರಸ್ತೆ ಸಂಪರ್ಕವಿಲ್ಲದೆ ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಮರ ತೆರವು ಕಾರ್ಯಚರಣೆಯನ್ನು ಆರಂಭಿಸಿದ್ದಾರೆ. ಇತ್ತ ಶೃಂಗೇರಿಯ ಕಿಗ್ಗಾ, ಕೆರೆಕಟ್ಟೆ ಭಾಗದಲ್ಲಿ ಸುರಿಯುತ್ತಿರುವ ಗಾಳಿ-ಮಳೆಯಿಂದಾಗಿ ತಾಲೂಕಿನ ಕೆರೆಕಟ್ಟೆ ಸಮೀಪದ ಹುಲುಗಾರುಬೈಲು ಗ್ರಾಮದ ಸುಮಾರು 25 ಎಕರೆ ಭತ್ತದ ಗದ್ದೆಗೆ ಗುಡ್ಡದ ಮಣ್ಣು ಜಾರಿ ಬೆಳೆ ಸಂಪೂರ್ಣ ಹಾನಿಯಾಗಿದೆ.

ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದರೂ ಭಾರೀ ಗಾಳಿಯೊಂದಿಗೆ ಸುರಿಯುತ್ತಿರುವ ಸೋನೆ ಮಳೆಯಿಂದ ಗುಡ್ಡದ ಮಣ್ಣು ಸವೆದು ಇಡೀ ಜಮೀನಿಗೆ ಆವರಿಸಿಕೊಂಡಿದೆ. ತಿಂಗಳಿಂದ ಮಡಿ ಮಾಡಿ, ಸಸಿ ನೆಟ್ಟಿದ ರೈತರೀಗ ಆತಂಕಕ್ಕೀಡಾಗಿದ್ದಾರೆ. ಮಲೆನಾಡಿನಲ್ಲಿ ಮಳೆ ನಿಂತರು ಭೂ ಕುಸಿತ ಉಂಟಾಗಿದ್ದು, ಭೂ ಕುಸಿತದಿಂದ ಮಲೆನಾಡು ಜನ ತತ್ತರಿಸಿದ್ದಾರೆ.

ಕೊಪ್ಪ ತಾಲೂಕಿನ ಭಂಡಿಗಡಿ ಸಮೀಪದ ಈಚಲಬೈಲ್ ಗ್ರಾಮದಲ್ಲಿ ಭೂ ಕುಸಿತದಿಂದ ಟ್ರಾನ್ಸ್ ಫರ್ಮರ್ ಹಾಗೂ 4 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಭಾರೀ ದುರಂತ ತಪ್ಪಿದಂತಾಗಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ನಾಲ್ಕು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *