‘ನಮ್ಮುಡುಗ್ರು’ ವಾಟ್ಸಪ್ ಗ್ರೂಪಿನಿಂದ ಮೂಡಿಗೆರೆಯ ದೇವರಮನೆ ಗುಡ್ಡ ಕ್ಲೀನ್ ಆಯ್ತು!

Public TV
1 Min Read

ಚಿಕ್ಕಮಗಳೂರು: ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಿಂದ ಇಂದು ಯುವ ಜನತೆ ಹಾಳಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಡುವೆ ಈ ಮಾಧ್ಯಮಗಳನ್ನು ಬಳಸಿ ಚಿಕ್ಕಮಗಳೂರಿನ ಯುವಕರು ಸಮಾಜ ಮೆಚ್ಚುವ ಕೆಲಸ ಮಾಡಿದ್ದಾರೆ.

ಹೌದು. 4 ವರ್ಷದ ಹಿಂದೆ ನಿವಾಸಿ ದಿವಿನ್ ಎಂಬವರು ಮಾಡಿದ ನಮ್ಮುಡುಗ್ರು ಗ್ರೂಪ್ ಇಂದು ಒಂದು ಗುಡ್ಡವನ್ನೇ ಕ್ಲೀನ್ ಮಾಡಿದೆ.

ಪ್ರವಾಸಿಗರಿಂದ ಹಾಳಾದ ಮೂಡಿಗೆರೆಯ ದೇವರಮನೆ ಗುಡ್ಡದ ಫೋಟೋವನ್ನ ಸದಸ್ಯರೊಬ್ಬರು ಗ್ರೂಪ್‍ನಲ್ಲಿ ಹಾಕಿದ್ದರು. ಈ ಫೋಟೋವನ್ನು ನೋಡಿ ಕೂಡಲೇ ಕಾರ್ಯಪ್ರವೃತರಾದ ಸದಸ್ಯರು ನಾವೇ ಕ್ಲೀನ್ ಮಾಡೋಣ ಎಂದು ನಿರ್ಧರಿಸಿ ಜನವರಿ 14ರ ಮಕರ ಸಂಕ್ರಾಂತಿ ಹಬ್ಬದ ದಿನದಂದು ಎಲ್ಲರೂ ಒಂದುಗೂಡಿ ದೇವರಮನೆ ಗುಡ್ಡವನ್ನ ಕ್ಲೀನ್ ಮಾಡಿದ್ದಾರೆ.

ಗುಡ್ಡವನ್ನು ಕ್ಲೀನ್ ಮಾಡಿದ ಸದಸ್ಯರೇ ನಾಮಫಲಕವನ್ನು ಹಾಕಿದ್ದಾರೆ. ಇದು ನಿಮ್ಮ ಪ್ರಕೃತಿ, ಒಮ್ಮೆ ಹಾಳಾದರೆ ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನ ಉಳಿಸಿ-ಬೆಳೆಸುವ ಮನಸ್ಥಿತಿಯವರು ಮಾತ್ರ ಬನ್ನಿ ಎಂದು ಗ್ರೂಪ್ ಅಡ್ಮಿನ್ ದಿವಿನ್ ನಾಮಫಲಕ ಹಾಕಿದ್ದಾರೆ.

ಮತ್ತೊಂದು ವಿಷಯ ಏನೆಂದರೆ ಈ ಗ್ರೂಪಿನ ಬಹುತೇಕರು ಒಬ್ಬರಿಗೊಬ್ಬರು ಪರಿಚಯವಿಲ್ಲ. ಮುಖವನ್ನೂ ನೋಡಿಲ್ಲ. ಆದರು ಗ್ರೂಪ್‍ನಲ್ಲಿ ಬಂದ ಒಂದು ಮೇಸೆಜ್ ಹಾಗೂ ಫೋಟೋಗೆ ಎಲ್ಲರೂ ಸ್ಪಂದಿಸಿದ್ದಾರೆ. ಹಬ್ಬ ಎನ್ನುವುದನ್ನು ಮರೆತು 250ಕ್ಕೂ ಅಧಿಕ ಗ್ರೂಪಿನ ಸದಸ್ಯರು ಎಲ್ಲರೂ ಒಂದೆಡೆ ಸೇರಿ ದೇವರಮನೆ ಗುಡ್ಡವನ್ನ ಸ್ವಚ್ಛ ಮಾಡಿದ್ದಾರೆ. ಸ್ವಚ್ಛತಾ ಕಾರ್ಯದ ವೇಳೆ ಎರಡೂ ಟ್ರ್ಯಾಕ್ಟರ್ ಬಿಯರ್ ಬಾಟಲಿ, ಎರಡು ಟ್ರ್ಯಾಕ್ಟರ್ ಪ್ಲಾಸ್ಟಿಕ್ ಸಿಕ್ಕಿದೆ.

ಎಲ್ಲ ರಾಜಕೀಯ ಪಕ್ಷದ ಸದಸ್ಯರು ಈ ಗ್ರೂಪಿನಲ್ಲಿದ್ದು ಎಲ್ಲರೂ ರಾಜಕೀಯವನ್ನು ಬಿಟ್ಟು ಈ ಒಳ್ಳೆ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದು ವಿಶೇಷ. ವಾಟ್ಸಪ್ ಹಾಗೂ ಫೇಸ್‍ಬುಕ್‍ಗಳು ಬರೀ ಮನೋರಂಜನೆಗಷ್ಟೆ ಇಲ್ಲ. ಇದರಿಂದಲೂ ಒಳ್ಳೆ ಕೆಲಸ ಆಗುತ್ತೆ ಅನ್ನೋದಕ್ಕೆ ಮಲೆನಾಡಿನ ಈ ಗ್ರೂಪ್ ಸಾಕ್ಷಿಯಾಗಿದೆ. ವಾಟ್ಸಪ್‍ನಿಂದ ಆರಂಭವಾದ ಒಂದು ಗ್ರೂಪ್ ಈ ಪ್ರಮಾಣದ ಕೆಲಸ-ಕಾರ್ಯ ಮಾಡಿರೋದಕ್ಕೆ ಮಲೆನಾಡಿಗರು ಶಹಬ್ಬಾಸ್ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *