ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ರೆ ಮುಂದೇನು?

Public TV
1 Min Read

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ಸೈಟ್‌ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot) ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

ಈ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ರಾಜಭವನದ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟ್ ಸಚಿವರು ಮುಗಿಬಿದ್ದಿದ್ದಾರೆ. ಬಿಜೆಪಿಗರು (BJP) ಪ್ರತಿದಾಳಿಗೆ ನಿಂತಿದ್ದಾರೆ. ಮುಡಾ ಅಕ್ರಮ ವಿಚಾರದಲ್ಲಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಾಸಿಕ್ಯೂಶನ್‌ಗೆ ಅನುಮತಿ ಕೋರಿ ಪತ್ರ ಬರೆದಿದ್ದರು. ಇದನ್ನೇ ಆಧರಿಸಿ ವಿವರಣೆ ಕೋರಿ ರಾಜ್ಯಪಾಲರು ನೋಟಿಸ್‌ ನೀಡಿದ್ದಾರೆ.

ಪ್ರಾಸಿಕ್ಯೂಷನ್ ಅನುಮತಿ ನೀಡಿದ್ರೆ ಮುಂದೇನು?
ದೂರುದಾರ ಟಿ ಜೆ ಅಬ್ರಾಹಂ (TJ Abraham) ನೇರವಾಗಿ ಪಿಸಿಆರ್ ದಾಖಲು ಮಾಡಬಹುದು. ಖಾಸಗಿ ದೂರು ದಾಖಲು ಮಾಡಿ ಕೋರ್ಟ್‌ ಎಫ್‌ಐಆರ್‌ ದಾಖಲಿಸುವಂತೆ ಲೋಕಾಯುಕ್ತಕ್ಕೆ (Lokayukta) ನಿರ್ದೇಶನ ನೀಡಬೇಕು. ಇದನ್ನೂ ಓದಿ: ಕರ್ನಾಟಕದಲ್ಲಿ ವಿರೋಧ ಪಕ್ಷಗಳ ಸ್ಟಾರ್ ಚೆನ್ನಾಗಿಲ್ಲ: ಡಿವಿಎಸ್‌

ಕೋರ್ಟ್ ನಿರ್ದೇಶನ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲು ಮಾಡಬೇಕಾಗುತ್ತದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ಮಾಡಬೇಕು. ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ಲೋಕಾಯುಕ್ತ ಮಾಡಬಹುದು.


3 ತಿಂಗಳು ಕಾಲಾವಕಾಶ:
ಮುಖ್ಯಮಂತ್ರಿಗಳ ವಿರುದ್ಧ ಒಬ್ಬರು ದೂರು ನೀಡಿದರೆ ಆ ದೂರನ್ನು ಇತ್ಯರ್ಥ ಮಾಡಲು ರಾಜ್ಯಪಾಲರಿಗೆ 3 ತಿಂಗಳು ಕಾಲಾವಕಾಶ ಇರಲಿದೆ. ಈಗಾಗಲೇ ದೂರು ಸ್ವೀಕರಿಸಿದ ರಾಜ್ಯಪಾಲರು ಮುಖ್ಯಮಂತ್ರಿ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ಸ್ವೀಕರಿಸಿರುವ ಸಿಎಂ ಸಿದ್ದರಾಮಯ್ಯ 15 ದಿನದ ಒಳಗೆ ಉತ್ತರ ಅಥವಾ ಸಮಜಾಯಿಷಿ ನೀಡಬೇಕು. 15 ದಿನ ಕಳೆದರೂ ಸಮಜಾಯಿಷಿ ನೀಡದೇ ಇದ್ದರೆ ರಾಜ್ಯಪಾಲರು ಮುಂದಿನ ಕ್ರಮ ತೆಗೆದುಕೊಳ್ಳಬಹುದು. ರಾಜ್ಯಪಾಲರು ಜುಲೈ 27 ರಂದು ಸಿಎಂಗೆ ನೋಟಿಸ್‌ ನೀಡಿದ್ದಾರೆ. ಇಂದಿಗೆ (ಆಗಸ್ಟ್‌ 01) ಒಟ್ಟು 6 ದಿನ ಕಳೆದಿದ್ದು ಇನ್ನು 9 ದಿನ ಮಾತ್ರ ಸಿಎಂಗೆ ಅವಕಾಶ ಇದೆ.

Share This Article