ಎಂಟಿಬಿ ನಾಗರಾಜ್ ಮನವೊಲಿಸಲು ಸಿದ್ದರಾಮಯ್ಯ ವಿಫಲ

Public TV
2 Min Read

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನದಿಂದ ರಾಜೀನಾಮೆ ನೀಡಿರುವ ಸಚಿವ ಎಂಟಿಬಿ ನಾಗರಾಜ್ ಅವರ ಮನವೊಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿಫಲರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಂದು ಬೆಳಗ್ಗೆ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಂಧಾನಕ್ಕೆ ಪ್ರಯತ್ನ ನಡೆಸಿದ್ದರು. ಆ ಬಳಿಕ ಸಿದ್ದರಾಮಯ್ಯ ನಿವಾಸಕ್ಕೆ ಎಂಟಿಬಿ ನಾಗರಾಜ್ ಆಗಮಿಸಿದ್ದರು.

ಸಿದ್ದರಾಮಯ್ಯ ನಿವಾಸಕ್ಕೆ ಒಂದೇ ಕಾರಿನಲ್ಲಿ ಬಂದ ಡಿಸಿಎಂ ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್ ಹಾಗೂ ಎಂಟಿಬಿ ನಾಗರಾಜ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಮನವೊಲಿಕೆ ಮಾಡಲು ಸುಮಾರು 3 ಗಂಟೆಗಳ ಕಾಲ ಚರ್ಚೆ ನಡೆಸಿದ್ದರು. ಆದರೆ ಈಗಲೂ ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎನ್ನುತ್ತಿರುವ ಎಂಟಿಬಿ ನಾಗರಾಜ್, ಸಂಪೂರ್ಣವಾಗಿ ಸಿದ್ದರಾಮಯ್ಯ ಅವರ ಮಾತಿಗೆ ಒಪ್ಪಿಗೆ ಸೂಚಿಸದೆ ತೆರಳಿದ್ದಾರೆ. ನನ್ನೊಂದಿಗೆ ರಾಜೀನಾಮೆ ನೀಡಿರುವ ಇತರೆ ಶಾಸಕರ ಅಭಿಪ್ರಾಯವೂ ಪಡೆಯಬೇಕು ಎಂದು ಎಂಟಿಬಿ ತಿಳಿಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ಈ ಮೂಲಕ ಎಂಟಿಬಿ ನಾಗರಾಜ್ ಅವರು ಮತ್ತೊಮ್ಮೆ ಅಡ್ಡಗೋಡೆ ದೀಪ ಇಟ್ಟಂತೆ ಕಾಣುತ್ತಿದೆ.

ಎಂಟಿಬಿ ನಾಗರಾಜ್ ಅವರು ಸಿದ್ದರಾಮಯ್ಯ ನಿವಾಸಕ್ಕೆ ಬರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಜಮೀರ್ ಅಹಮದ್ ಕೂಡ ಆಗಮಿಸಿದ್ದರು. ಎಂಟಿಬಿ ನಾಗರಾಜ್ ಅವರೊಂದಿಗೆ ಆಗಮಿಸಿದ್ದ ಡಿಕೆಶಿ ಅಲ್ಲಿಂದ ನೇರವಾಗಿ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ನಿವಾಸಕ್ಕೆ ತೆರಳಿದ್ದರು. ಆದರೆ ಸುಧಾಕರ್ ಅವರು ಮನೆಯಲ್ಲಿ ಇರಲಿಲ್ಲ. ಈ ಮೂಲಕ ಇಬ್ಬರು ಶಾಸಕರನ್ನು ಸಿದ್ದರಾಮಯ್ಯ ಅವರ ಮನೆಗೆ ಕರೆತಂದು ಸಂಧಾನ ಮಾಡವ ಅವರ ಪ್ರಯತ್ನ ಫಲ ನೀಡಿಲ್ಲ. ಇಂದು ಬೆಳಗ್ಗೆ ಶಾಸಕ ಸುಧಾಕರ್ ಅವರು ತಮ್ಮ ನಿವಾಸದಿಂದ ಹೊರಗೆ ತೆರಳಿದ್ದ ಕಾರಣ ಡಿಕೆ ಶಿವಕುಮಾರ್ ಅವರ ಭೇಟಿ ಸಾಧ್ಯವಾಗಿಲ್ಲ. ಇತ್ತ ಫೋನ್ ಮೂಲಕ ಸಂಪರ್ಕ ಮಾಡುವ ಪ್ರಯತ್ನವೂ ವಿಫಲವಾಗಿದೆ ಎನ್ನಲಾಗಿದೆ.

ಇದಕ್ಕೂ ಮುನ್ನ ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ವಿಶ್ವಾಸ ಮತವನ್ನು ಹೇಗೆ ಸಾಬೀತು ಮಾಡುತ್ತೇವೆ ಎಂಬುದನ್ನು ನೋಡುತ್ತಾ ಇರಿ. ಈಗ ಎಂಟಿಬಿ ನಾಗರಾಜ್, ಸುಧಾಕರ್ ಎಲ್ಲಾ ಸಿದ್ದರಾಮಯ್ಯ ಮನೆಗೆ ಬರುತ್ತಾರೆ. ಎಷ್ಟು ಜನ ವಾಪಸ್ ಬರುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ ಡಿಕೆ ಶಿವಕುಮಾರ್ ಮಾತನಾಡಿ, ಎಂಟಿಬಿ ಮನವೊಲಿಸಿದ್ದೇವೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *