ಸುಧಾಕರ್ ಓಲೈಸೋ ನೆಪದಲ್ಲಿ ಮುಂಬೈಗೆ ಹಾರಿದ್ರಾ ಎಂಟಿಬಿ?

Public TV
2 Min Read

ಬೆಂಗಳೂರು: ಈಗಾಗಲೇ ದೋಸ್ತಿ ಪಾಳಯದಲ್ಲಿ ಅತೃಪ್ತ ಶಾಸಕರ ರಾಜೀನಾಮೆಗಳ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಈ ನಡುವೆ ಶಾಸಕ ಸುಧಾಕರ್ ಅವರ ಮನವೊಲಿಸುವ ನೆಪದಲ್ಲಿ ಶಾಸಕ ಎಂ.ಟಿ. ಬಿ ನಾಗರಾಜ್ ಕೂಡ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ.

ಹೌದು, ಈಗಾಗಲೇ ಬೆಂಗಳೂರಿನಿಂದ ಎಂಟಿಬಿ ಅವರು ವಿಶೇಷ ವಿಮಾನವನ್ನು ಏರಿ ಮುಂಬೈನತ್ತ ತೆರಳಿದ್ದಾರೆ. ಸುಧಾಕರ್ ಈಗಾಗಲೇ ಮುಂಬೈ ಸೇರಿದ್ದಾರೆ ಎಂದು ಹೇಳಲಾಗುತ್ತಿದ್ದು, ಎಂಟಿಬಿ ಮತ್ತು ಸುಧಾಕರ್ ಕೆಲವೇ ಕ್ಷಣಗಳಲ್ಲಿ ಮುಂಬೈನಲ್ಲಿರುವ ಅತೃಪ್ತರ ತಂಡ ಸೇರಲಿದ್ದಾರೆ. ಮುಂಬೈನ ರಿನೈಸೆನ್ಸ್ ಹೋಟೆಲ್‍ಗೆ ಇಬ್ಬರು ಶಾಸಕರೂ ಹೋಗಲಿದ್ದಾರೆ ಎನ್ನಲಾಗಿದೆ.

ಎಂಟಿಬಿ ಅವರು ಕಾಂಗ್ರೆಸ್ ನಾಯಕರ ಜೊತೆ ಮಾತನಾಡಿಕೊಂಡೇ ಎಂಟಿಬಿ ಅವರು ಮಾಜಿ ಡಿಸಿಎಂ ಆರ್ ಅಶೋಕ್ ಅವರ ಸಂಪರ್ಕದಲ್ಲಿದ್ರಾ ಅನ್ನೋ ಪ್ರಶ್ನೆ ಕಾಡಿದೆ. ಯಾಕಂದರೆ ಎಂಟಿಬಿ ಅವರು ಅಶೋಕ್ ಅವರ ನೇತೃತ್ವದಲ್ಲಿ ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ಅವರು, ಸುಧಾಕರ್ ಅವರನ್ನು ಸಂಪರ್ಕ ಮಾಡಿ ಅವರ ಜೊತೆ ಮಾತನಾಡಿ ನಾವು ನಿರ್ಧರಿಸುತ್ತೇವೆ. ಅಲ್ಲದೆ ಸುಧಾಕರ್ ಜೊತೆ ಮುಂದಿನ ನಡೆಯ ಬಗ್ಗೆ ಚರ್ಚೆ ಮಾಡುತ್ತೇನೆ. ನಾವಿಬ್ಬರೂ ಜೊತೆಯಾಗಿಯೇ ರಾಜೀನಾಮೆ ನೀಡಿದ್ದೆವು. ಇದ್ದರೆ ಪಾರ್ಟಿಯಲ್ಲಿ ಇಬ್ಬರೂ ಇರಬೇಕು, ಹೋದರೆ ಇಬ್ಬರೂ ಹೋಗಬೇಕು ಅಂದುಕೊಂಡು ಬಂದಿದ್ದೆವು. ಅದರಂತೆಯೇ ಸುಧಾಕರ್ ಮನವೊಲಿಸಬೇಕು ಎಂದು ಹೇಳಿದ್ದರು.

ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಸಲು ಶನಿವಾರ ದಿನವಿಡೀ ಕಾಂಗ್ರೆಸ್ ಯತ್ನಿಸಿತು. ಆದರೆ ಎಂಟಿಬಿ ಮಾತ್ರ ಬಗ್ಗಿರಲಿಲ್ಲ. ಸಿದ್ದರಾಮಯ್ಯ ಇದ್ದರು ಎಂಬ ಕಾರಣಕ್ಕೆ ಆಯ್ತು ರಾಜೀನಾಮೆ ವಾಪಸ್ ಪಡೆಯುವುದಾಗಿ ಹೇಳಿದ್ದರು. ಆದರೆ, ಇದಾದ ಕೇವಲ ಐದು ನಿಮಿಷದಲ್ಲಿ ಎಂಟಿಬಿ ಸ್ವರ ಬದಲಾಗಿತ್ತು. ಹಳೆ ನಿಲುವಿಗೆ ಅಂಟಿಕೊಂಡಿದ್ದು, ಸುಧಾಕರ್ ಜೊತೆ ಚರ್ಚೆ ನಡೆಸಿದ ಬಳಿಕವಷ್ಟೇ ಅಂತಿಮ ತೀರ್ಮಾನ ಎಂದು ಪ್ರಕಟಿಸಿದ್ದರು.

ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಸುಧಾಕರ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಮುಂಬೈನಿಂದ ವಾಪಸ್ ಬರುತ್ತಾರೆ ಎಂಬ ನಂಬಿಕೆ ನನಗಿದೆ. ವಿಶ್ವಾಸ ಮತಯಾಚನೆ ವೇಳೆಗೆ ಎಲ್ಲ ಅತೃಪ್ತ ಶಾಸಕರ ಮನವೊಲಿಕೆ ಯತ್ನಿಸುತ್ತೇವೆ ಎಂದು ತಿಳಿಸಿದ್ದರು. ಆದರೆ ಈಗ ಎಂಟಿಬಿ ಅವರು ಕೂಡ ಮುಂಬೈನತ್ತ ಪ್ರಯಾಣ ಬೆಳೆಸಿರುವುದು ದೋಸ್ತಿ ಪಕ್ಷದಲ್ಲಿ ಬಿರುಗಾಳಿ ಎಬ್ಬಿಸಿದೆ. ಮುಂದೇನು ಆಗುತ್ತೆ ಎಂದು ಮೈತ್ರಿ ಪಕ್ಷದ ನಾಯಕರು ಫುಲ್ ಟೆನ್ಶನಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *