ಎಂಟಿಬಿಗೆ ಸೋಲಿನ ಭೀತಿ – ಬಚ್ಚೇಗೌಡ ವಿರುದ್ಧ ಸಿಎಂ ಬಿಎಸ್‍ವೈಗೆ ದೂರು?

Public TV
1 Min Read

ಬೆಂಗಳೂರು: ಉಪಚುನಾವಣೆ ಮತದಾನ ಬಳಿಕ ಮೊದಲ ಬಾರಿಗೆ ಬಿಜೆಪಿ ಹೊಸಕೋಟೆ ಅಭ್ಯರ್ಥಿ ಎಂಟಿಬಿ ನಾಗರಾಜ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ ಹೊಸಕೋಟೆ ಕ್ಷೇತ್ರದಲ್ಲಿ ಅತ್ಯಧಿಕ ಶೇ.90.1ರಷ್ಟು ಮತದಾನವಾಗಿದ್ದು, ಎಂಟಿಬಿ ಅವರಿಗೆ ಸೋಲಿನ ಭೀತಿ ಎದುರಾಗಿದೆ ಎನ್ನಲಾಗಿದೆ. ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಕ್ಷೇತ್ರದಲ್ಲಿನ ಸದ್ಯದ ಪರಿಸ್ಥಿತಿಯ ಕುರಿತು ಎಂಟಿಬಿ ಅವರು ಸಿಎಂ ಅವರಿಗೆ ಮಾಹಿತಿ ನೀಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಅವರು, ಹೊಸಕೋಟೆಯಲ್ಲಿ ಅತ್ಯಧಿಕ ಶೇ.90.1 ರಷ್ಟು ಮತದಾನ ಆಗಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ನಾನು ಗೆಲ್ಲೋದು ನಿಶ್ಚಿತ ಎಂದರು.

ಸಂಸದ ಬಚ್ಚೇಗೌಡರ ವಿರುದ್ಧ ಸಿಎಂಗೆ ದೂರು ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಚ್ಚೇಗೌಡ ಅವರು ಬಿಜೆಪಿಯ ಕಾರ್ಯಕರ್ತರಿಗೆ, ತಮ್ಮ ಬೆಂಬಲಿಗರಿಗೆ ಕರೆ ಮಾಡಿ ಶರತ್ ಬಚ್ಚೇಗೌಡ ಅವರಿಗೆ ಬೆಂಬಲಿಸುವಂತೆ ಹೇಳಿರುವುದು ನಿಜ. ಇದರ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಆದರೆ ಬಚ್ಚೇಗೌಡರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಹೇಳಿಲ್ಲ. ಶಿಸ್ತು ಕ್ರಮ ಕೈಗೊಳ್ಳುವುದು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ ಎಂದರು.

ಚುನಾವಣೆಯಲ್ಲಿ ಸೋತ ಅನರ್ಹ ಶಾಸಕರಿಗೆ ಮಂತ್ರಿ ಸ್ಥಾನ ನೀಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವರು ಸೋತರೆ ಸಚಿವ ಸ್ಥಾನ ನೀಡುವ ತೀರ್ಮಾನವನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಕನಿಷ್ಠ 12 ಅಭ್ಯರ್ಥಿಗಳು ಗೆಲ್ಲುವು ನಿಶ್ಚಿತ. ಉಳಿದ 3 ಕ್ಷೇತ್ರಗಳಲ್ಲಿ ಪೈಪೋಟಿಯಿಂದ ಕೂಡಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *