MSP ರಕ್ಷಣೆ ಕಾನೂನು ತಕ್ಷಣ ಜಾರಿಗೆ ಆಗ್ರಹ: ಕೋಡಿಹಳ್ಳಿ ಚಂದ್ರಶೇಖರ್

Public TV
2 Min Read

-ವಿದ್ಯುತ್ ದರ ಹೆಚ್ಚಳಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಖಂಡನೆ

ಬೆಂಗಳೂರು: ಮುಂಗಾರು ಬೆಳೆಗಳಿಗೆ ಕೇಂದ್ರ ಸರ್ಕಾರ 2021-22ನೇ ಸಾಲಿನ ಪರಿಷ್ಕೃತ ಬೆಂಬಲ ಬೆಲೆ-ಎಂಎಸ್‍ಪಿಯನ್ನು 14 ಬೆಳೆಗಳಿಗೆ ಪರಿಷ್ಕರಿಸಿದ್ದು, ಇದು ನ್ಯಾಯಯುತವಾಗಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ. ಇದನ್ನು ಓದಿ: ಅಬಕಾರಿ ಅಧಿಕಾರಿಗಳಿಂದ ಅಕ್ರಮ ಮದ್ಯ ಮಾರಾಟಕ್ಕೆ ಸಾಥ್: ಉಪ ಆಯುಕ್ತರಿಂದ ನೋಟಿಸ್

ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಟ್ರಾಕ್ಟರ್ ಉಳುಮೆ ವೆಚ್ಚ ಹೆಚ್ಚಾಗಿದೆ. ರೈತರು ಎಷ್ಟು ಡೀಸೆಲ್ ಬಳಸುವರು, ಬೆಲೆ ಏರಿಕೆಯಿಂದಾಗಿ ಆದ ಹೆಚ್ಚುವರಿ ಹೊರೆ ಎಷ್ಟು ಎಂಬುದನ್ನು ಪರಿಗಣಿಸಿ ಬೆಂಬಲ ಬೆಲೆ ಹೆಚ್ಚಳ ಮಾಡಿಲ್ಲ. ವಿದ್ಯುತ್ ದರ ಏರಿಕೆ ಒಂದೆಡೆಯಾದರೆ, ಮತ್ತೊಂದೆಡೆ ನಾಮಕಾವಸ್ಥೆ ಬೆಂಬಲ ಬೆಲೆ ಹೆಚ್ಚಳ ಮಾಡಿ ಮಹದುಪಕಾರ ಮಾಡಿದಂತೆ ಬಿಂಬಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬೆಂಬಲ ಬೆಲೆ ರಕ್ಷಣೆಗೆ ಕಾನೂನಿನ ಅಗತ್ಯವಿದೆ, ಇಲ್ಲವಾದಲ್ಲಿ ಈ ಬೆಂಬಲ ಬೆಲೆ ಅವೈಜ್ಞಾನಿಕವಾಗಿ ನಿಗದಿಯಾಗುತ್ತಲೇ ಸಾಗಲಿದೆ ಎಂದು ಹೇಳಿದ್ದಾರೆ. ಇದರ ರಕ್ಷಣೆಗಾಗಿ ಪಂಜಾಬ್ ರಾಜ್ಯದಲ್ಲಿ ಎಂಎಸ್‍ಪಿ ದರಕ್ಕಿಂತ ಕಡಿಮೆ ದರಕ್ಕೆ ಖರೀದಿ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂಬ ಕಾನೂನಿದ್ದು, ಇಂತಹ ನಿಯಮ ದೇಶವ್ಯಾಪಿಯಾಗಿರಬೇಕು ಎಂದು ಆಗ್ರಹಿಸಿದ್ದಾರೆ.

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹಾಲಿಗೆ ನೀಡುತ್ತಿದ್ದ ದರ ಕಡಿಮೆ ಮಾಡಲಾಗಿದೆ. ಅಂತೆಯೇ ಅಗತ್ಯ ಪ್ರಮಾಣದ ಖರೀದಿಯೂ ಆಗುತ್ತಿಲ್ಲ. ಹೂವು, ಹಣ್ಣು, ತರಕಾರಿ ಖರೀದಿಯೂ ಹೆಚ್ಚಾಗಿಲ್ಲದ ಕಾರಣ ರೈತರಿಗೆ ಈ ಬೆಂಬಲ ಬೆಲೆ ಏರಿಕೆ ಏನೇನೂ ಸಾಲದು. ಕೇಂದ್ರ ಸರ್ಕಾರ ಕೂಡಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಎಂದಿದ್ದಾರೆ.

ಒಟ್ಟಿನಲ್ಲಿ ಕೇಂದ್ರ ಸರ್ಕಾರ ಬೆಲೆ ಏರಿಕೆಯ ಹೊರೆ ಹೊರಿಸಿ, ಇದೀಗ ವಿದ್ಯುತ್ ದರ ಏರಿಕೆಯ ಶಾಕ್ ಕೊಟ್ಟು ಮತ್ತೊಂದೆಡೆ ಅತ್ಯಲ್ಪ ಪ್ರಮಾಣದ ಬೆಂಬಲ ಬೆಲೆ ಹೆಚ್ಚಳ ಮಾಡಿ ರೈತರ ಮೂಗಿಗೆ ತುಪ್ಪ ಸವರಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದಾರೆ.

ವಿದ್ಯುತ್ ದರ ಹೆಚ್ಚಳಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಖಂಡನೆ ರಾಜ್ಯ ಸರ್ಕಾರ ವಿದ್ಯುತ್ ಬಿಲ್ ಪ್ರತಿ ಯೂನಿಟ್‍ಗೆ 30 ಪೈಸೆ ಹೆಚ್ಚಿಸಿದೆ. “ಕೊರೊನಾ ಲಾಕ್‍ಡೌನ್ ಕಾಲದಲ್ಲಿ ಜನರಿಗೆ ಸರಿಯಾಗಿ ಉದ್ಯೋಗವಿಲ್ಲ. ದುಡಿಮೆ ಇಲ್ಲದೇ ಊಟಕ್ಕೆ ಸಹ ತೊಂದರೆಯಾಗಿದೆ. ಇಂತಹ ಸಮಯದಲ್ಲಿ ದರ ಹೆಚ್ಚಿಸಿರುವುದು ಸರಿಯಲ್ಲ ಎಂದು ದರ ಏರಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಲಾಕ್‍ಡೌನ್ ನಿಂದ ಚೇತರಿಸಿಕೊಳ್ಳಲು ಬಿಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ದರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಆಸ್ತಿ ತೆರಿಗೆ ಹೆಚ್ಚಿಸಿದ್ದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ಎದುರಾಗಿದೆ ಎಂದಿದ್ದಾರೆ. ಇದನ್ನು ಓದಿ:ಕೊರೊನಾ ಸೋಂಕಿತರಿಗೆ ಬೆಡ್ ಕಾಯ್ದಿರಿಸುವ ನೂತನ ‘ಕ್ಯೂ ಪದ್ಧತಿ’ ವ್ಯವಸ್ಥೆ ಲೋಕಾರ್ಪಣೆ

ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದಲ್ಲಿವೆ ಎಂದು ಹೇಳುವ ಸರ್ಕಾರ ಕೇಂದ್ರದಿಂದ ವಿದ್ಯುತ್ ಖರೀದಿ, ಆದಾನಿ ಕಂಪನಿಯಿಂದ ವಿದ್ಯುತ್ ಖರೀದಿಯನ್ನು ನಿಲ್ಲಿಸಿಲ್ಲ. ಮೊದಲು ದುಬಾರಿ ಬೆಲೆಗೆ ಖರೀದಿ ನಿಲ್ಲಿಸಿ ವಿದ್ಯುತ್ ಇಳಿಸಿ ಪರಿಷ್ಕರಣೆ ಮಾಡಲಿ ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *