‘ಧೋನಿಗಿಂತ ದೇಶವೇ ಮುಖ್ಯ’: ಗಂಭೀರ್

Public TV
1 Min Read

ನವದೆಹಲಿ: ಟೀಂ ಇಂಡಿಯಾ ತಂಡದ ಪರ ಮತ್ತೆ ಎಂಎಸ್ ಧೋನಿ ಕ್ರಿಕೆಟ್ ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದ್ದು, ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಸಾಧ್ಯವಾದಷ್ಟು ಬೇಗ ಧೋನಿರ ಅಭಿಪ್ರಾಯವನ್ನು ಪಡೆದುಕೊಳ್ಳುವ ಅಗತ್ಯವಿದೆ ಎಂದು ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.

ಧೋನಿ ನಿವೃತ್ತಿಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಗಂಭೀರ್, ನಿವೃತ್ತಿ ಎಂಬುವುದು ಯಾವುದೇ ಆಟಗಾರನ ವೈಯಕ್ತಿಕ ನಿರ್ಧಾರ. ಆದರೆ ಅಂತಿಮವಾಗಿ ತಂಡದ ಮುಂದಿನ ಭವಿಷ್ಯವನ್ನು ಗಮನಿಸಬೇಕಾಗುತ್ತದೆ. ಧೋನಿ ವಿಚಾರದಲ್ಲಿ ಆಯ್ಕೆ ಸಮಿತಿ ಏನು ಮಾಡುತ್ತಿದೆ. ಧೋನಿಗಿಂತ ದೇಶವೇ ಮುಖ್ಯ ಎಂಬ ವಿಚಾರ ತಿಳಿಯುವುದಿಲ್ಲವಾ. ಅವರು ನಿವೃತ್ತಿ ಹೇಳುತ್ತೇನೆ ಎಂದು ಬರುವವರೆಗೂ ನಿರೀಕ್ಷೆ ಮಾಡುತ್ತಲೇ ಕುಳಿತುಕೊಳ್ಳುತ್ತರಾ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ತಂಡದಲ್ಲಿ ಧೋನಿರನ್ನು ನಾನು ನೋಡುತ್ತೇನೆ ಎನಿಸುತ್ತಿಲ್ಲ. ಆ ವೇಳೆಗೆ ತಂಡದ ನಾಯಕರಾಗಿ ಯಾರೇ ಇದ್ದರೂ ಕೂಡ ಅದು ನಡೆಯುವ ಕೆಲಸವಲ್ಲ. ವಿರಾಟ್ ಕೊಹ್ಲಿಯೇ ತಂಡದ ನಾಯಕರಾಗಿರುತ್ತಾರೆ ಎಂಬುವುದು ಖಚಿತವಲ್ಲ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಓದಿ: ರಿಷಬ್ ಪಂತ್‍ಗೆ ‘ಸೀರಿಯಸ್’ ವಾರ್ನಿಂಗ್ ಕೊಟ್ಟ ಗೌತಮ್ ಗಂಭೀರ್

ಮುಂದಿನ ವಿಶ್ವಕಪ್ ನಲ್ಲಿ ಧೋನಿ ಇರುವುದಿಲ್ಲ ಎಂದು ಹೇಳಲು ಯಾರೋ ಒಬ್ಬರು ಬರಬೇಕು. ಸದ್ಯ ಆಯ್ಕೆ ಸಮಿತಿ ಯುವ ಕ್ರಿಕೆಟಿಗರಿಗೆ ಪರೀಕ್ಷೆಗಳನ್ನು ನಡೆಸುತ್ತಿರುವುದು ಕೂಡ ದೇಶಕ್ಕಾಗಿಯೇ ವಿನಾಃ ಧೋನಿಗಾಗಿ ಅಲ್ಲ. ಆದರೆ ಯುವ ಆಟಗಾರರನ್ನು ಪರಿಕ್ಷೀಸಲು ಧೋನಿ ತಮಗೆ ಅವಕಾಶ ನೀಡಿದ್ದಾರೆ ಎಂದು ಹೇಳಿರುವುದು ನಂಬಿಕೆಗೆ ಅರ್ಹವಲ್ಲ. ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆಲುವು ಪಡೆಯಬೇಕಾದರೆ ಇಂದಿನಿಂದಲೇ ಸಿದ್ಧತೆ ನಡೆಸಬೇಕಾಗುತ್ತದೆ. ರಿಷಬ್ ಪಂತ್, ಸಂಜು ಸ್ಯಾಮ್ಸನ್ ರೊಂದಿಗೆ ಉಳಿದ ಯುವ ವಿಕೆಟ್ ಕೀಪರ್ ಆಟಗಾರರಿಗೂ ಅವಕಾಶ ನೀಡಬೇಕಿದೆ. ಟೀಂ ಇಂಡಿಯಾ ತಂಡ ಧೋನಿರನ್ನು ಹೊರತು ಪಡಿಸಿ ನೋಡುವ ಸಮಯ ಬಂದಿದೆ ಎಂದು ಗಂಭೀರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *