ಅಂತಿಮ ಸೆಕೆಂಡಿನಲ್ಲಿ ಡಿಆರ್‌ಎಸ್‌ ಮನವಿ : ಮತ್ತೊಮ್ಮೆ ಧೋನಿ ಮೋಡಿ – ವಿಡಿಯೋ ನೋಡಿ

Public TV
1 Min Read

ಚೆನ್ನೈ: ಸಿಎಸ್‍ಕೆ ತಂಡ ನಾಯಕ ಎಂಎಸ್ ಧೋನಿ ಮತ್ತೊಮ್ಮೆ ಡಿಆರ್‍ಎಸ್ ನಿಯಮ ಪಡೆಯುವಲ್ಲಿ ಚಾಣಾಕ್ಷತೆ ತೋರಿದ್ದು, ಅಂತಿಮ ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ತಂಡಕ್ಕೆ ಲಾಭ ತಂದುಕೊಟ್ಟಿದೆ.

ಐಪಿಎಲ್ 12 ಆವೃತ್ತಿಯ ಮೊದಲ ಪಂದ್ಯದಲ್ಲಿ ಧೋನಿ ಬಾಯ್ಸ್ ಗೆದ್ದು ಶುಭಾರಂಭ ಮಾಡಿದ್ದಾರೆ. ಪಂದ್ಯದ 11ನೇ ಓವರ್ ನಲ್ಲಿ ಸ್ಟ್ರೇಕ್ ನಲ್ಲಿದ್ದ ನವದೀಪ್ ಸೈನಿರನ್ನ ತಾಹಿರ್ ಎಲ್‍ಬಿ ಬಲೆಗೆ ಕೆಡವಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು. ಈ ವೇಳೆ ಬೌಲರ್‍ರೊಂದಿಗೆ ಚರ್ಚೆ ನಡೆಸಿದ ಧೋನಿ ನಿಗದಿತ 10 ಸೆಕೆಂಡ್‍ನ ಅಂತಿಮ ಕ್ಷಣದಲ್ಲಿ ಡಿಆರ್ ಎಸ್‍ಗೆ ಮನವಿ ಮಾಡಿದರು.

ಡಿಆರ್ ಎಸ್ ಪಡೆಯುತ್ತಿದಂತೆ ಆಟಗಾರರು ಕೂಡ ಧೋನಿಯ ಟೈಮಿಂಗ್ ಕಂಡು ಅಚ್ಚರಿಗೊಂಡಿದ್ದರು. ಮನವಿ ಸ್ವೀಕರಿಸಿ ಪರಿಶೀಲನೆ ನಡೆಸಿದ ವೇಳೆ ಚೆಂಡು ಬ್ಯಾಟಿಗೆ ಸ್ಪರ್ಶಿಸದೇ ಇರುವುದು ಖಚಿತವಾಗಿದ್ದ ಕಾರಣ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆ ಬಳಿಕ ಪಂದ್ಯದಲ್ಲಿ ರವೀಂದ್ರ ಜಡೇಜಾ ಮನವಿ ಮೇರೆಗೆ ಧೋನಿ ಮತ್ತೊಂದು ರಿವ್ಯೂ ಪಡೆದಿದ್ದರು. ಆದರೆ ನೇರ ಬೌಲರ್ ಬಳಿ ತೆರಳಿದ ಧೋನಿ ಅದು ನಾಟೌಟ್ ಎಂದು ತಿಳಿಸಿದ್ದರು. ಅಂತೆಯೇ ಅಂಪೈರ್ ಕೂಡ ಪರಿಶೀಲನೆ ನಡೆಸಿ ಧೋನಿಯ ತೀರ್ಮಾನವನ್ನು ಬೆಂಬಲಿಸಿದ್ದರು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ 17.1 ಓವರ್ ಗಳಲ್ಲಿ ಅಲೌಟ್ ಆಯ್ತು. ತಂಡದ ಪರ ಪಾರ್ಥಿವ್ ಪಟೇಲ್ 35 ಎಸೆತಗಳಲ್ಲಿ 29 ರನ್ ಗಳಿಸಿದರೆ, ಉಳಿದ ಎಲ್ಲಾ 10 ಆಟಗಾರರು ಎರಡಂಕಿ ದಾಟಲು ವಿಫರಾದರು. ಚೆನ್ನೈ ತಂಡ 17.4 ಓವರ್ ಗಳಲ್ಲಿ ಗುರಿ ಬೆನ್ನಟ್ಟಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

Share This Article
Leave a Comment

Leave a Reply

Your email address will not be published. Required fields are marked *