ಡಿಕೆಶಿ V/s ಹೆಚ್‍ಡಿಕೆ ನಡುವೆ ಕಥಾ ನಾಯಕ ಕಾಳಗ

Public TV
3 Min Read

– ಸರ್ಕಾರದ ಮೇಲೆ ಮುಗಿಬಿದ್ದ ದಳಪತಿ, ಕೈಪಡೆಗೆ ಕೌಂಟರ್

ಬೆಂಗಳೂರು: ಲೋಕಸಭಾ ಚುನಾವಣಾ (Loksabha Elections 2024) ಅಖಾಡದ ಜಿದ್ದಾಜಿದ್ದಿ ಮುಗಿದಿದೆ. ಲೋಕ ಸಮರದಲ್ಲೇ ಸಿಡಿದ ಆಶ್ಲೀಲ ಪೆನ್‍ಡ್ರೈವ್ ರಾಡಿ ರಾಜ್ಯವಷ್ಟೇ ಅಲ್ಲ ದೇಶ-ವಿದೇಶದಲ್ಲೂ ಸದ್ದು ಮಾಡ್ತಿದೆ. ಮತಯುದ್ಧ ಮುಗಿಯುತ್ತಿದ್ದಂತೆ ಪೆನ್‍ಡ್ರೈವ್ ಫೈಟ್ ತಾರಕಕ್ಕೇರಿದೆ. ಪೆನ್‍ಡ್ರೈವ್‍ನಲ್ಲಿ ವೀಡಿಯೋಗಳು ಕಾಡ್ಗಿಚ್ಚಿನಂತೆ ಹರಿದಾಡ್ತಿರೋ ಹೊತ್ತಲ್ಲೇ ಪ್ರಜ್ವಲ್ ರೇವಣ್ಣ (Prajwal Revanna) ವಿದೇಶಕ್ಕೆ ಹಾರಿದ್ರೆ, ಇತ್ತ ಪ್ರಕರಣದಲ್ಲಿ ಎಸ್‍ಐಟಿ ಅತಿದೊಡ್ಡ ಬೇಟೆ ಆಡಿತ್ತು. ಶಾಸಕ ರೇವಣ್ಣ ಬಂಧನ ಮೂಲಕ ಪ್ರಕರಣ ಮತ್ತಷ್ಟು ಕಾವು ಪಡೆಯಿತು. ರೇವಣ್ಣ ಪರಪ್ಪನ ಅಗ್ರಹಾರ ಸೇರಿದ್ರು. ಇತ್ತ ವಕೀಲ ದೇವರಾಜೇಗೌಡ ಸ್ಫೋಟಕ ಟ್ವಿಸ್ಟ್ ಕೊಟ್ರು. ಪ್ರಕರಣದ ಕಥಾನಾಯಕ ಡಿಕೆಶಿ ಅಂತಾ ಬಾಂಬ್ ಹಾಕಿದ ಬೆನ್ನಲ್ಲೇ ದಳಪತಿ ಕುಮಾರಸ್ವಾಮಿ ಇದೀಗ ಮೈಕೊಡವಿ ನಿಂತಿದ್ದಾರೆ.

ಹೌದು. ಪೆನ್‍ಡ್ರೈವ್ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ (HD Revanna) ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರ ಸೇರಿದ ಬಳಿಕ ಕಥಾನಾಯಕ ಆರೋಪ ಹೊತ್ತಿರುವ ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ ಎಸ್‍ಐಟಿ ತನಿಖೆ, ಕಾಂಗ್ರೆಸ್ ಸರ್ಕಾರ, ಒಕ್ಕಲಿಗ ಸಚಿವರ ವಿರುದ್ಧ ಗುಡುಗಿದ್ರು. ಡಿಕೆಶಿ-ನನಗೆ ಒಕ್ಕಲಿಗ ನಾಯಕತ್ವ ಫೈಟ್ ಅಂತಾರೆ. ನಾನು ಒಕ್ಕಲಿಗ ಕ್ಯಾಪ್ ಇಟ್ಟುಕೊಂಡು, ಇಂತಹ ಕೆಟ್ಟ ಘಟನೆಗೆ ಜಾತಿ ಹೆಸರಲ್ಲಿ ರಕ್ಷಣೆ ಪಡೆಯೊಲ್ಲ. ನಾನು ಎಲ್ಲೂ ಒಕ್ಕಲಿಗ ನಾಯಕ ಅಂತ ಹೇಳಿಲ್ಲ. ನಾನು ಹಿಟ್ ಅಂಡ್ ರನ್ ಅಲ್ಲ ಅಂತ ಕೌಂಟರ್ ಕೊಟ್ರು.

ಮೊದಲ ದಿನ ಕೊಟ್ಟ ಹೇಳಿಕೆಯಿಂದ ನಾನು ಹಿಂದೆ ಸರಿದಿಲ್ಲ. ಈಗಲೂ ನಾನು ನನ್ನ ಮಾತಿಗೆ ಬದ್ಧ. ನಾನು ರೇವಣ್ಣ ಕುಟುಂಬ ಬೇರೆ ಅಂದ್ರೆ, ಇಂಡಿಪೆಂಡೆಂಟ್ ಆಗಿ ಜೀವನ ಮಾಡ್ತಿದ್ದೇವೆ. ನಮ್ಮ ವ್ಯವಹಾರ ಬೇರೆ ಬೇರೆ ಇದೆ ಅಂತ ಸ್ಪಷ್ಟಪಡಿಸಿದ್ರು. ಕಥಾನಾಯಕ ನಾನೇ, ಆಕ್ಟಿಂಗ್ ಮಾಡಿಲ್ಲ ಎಂದು ಡಿಕೆಶಿ ಕಥಾನಾಯಕ ಆರೋಪಕ್ಕೆ ಎಚ್‍ಡಿಕೆ ಕೌಂಟರ್ ಕೊಟ್ಟು, ಹೌದಪ್ಪ ಕಥಾ ನಾಯಕ ನಾನೇ. ಕಥಾ ನಾಯಕ ನನ್ನ ಮಾಡಿದ್ದಾರೆ. ಆದ್ರೆ ಆಕ್ಟಿಂಗ್ ಮಾತ್ರಾ ಮಾಡಿಲ್ಲ. ಏಕ ವಚನದಲ್ಲಿ ಮಾತಾಡಬೇಡಿ ಅಂದಿದ್ದಾರೆ. ಸಾರಿ ಅಪ್ಪ ಕ್ಷಮೆ ಇರಲಿ ಅಂತ ಡಿಕೆಗೆ ಡಿಚ್ಚಿ ಕೊಟ್ಟರು.

25 ಸಾವಿರ ಪೆನ್‍ಡ್ರೈವ್ ಮಾಡಿದ್ರಿ: ರೇವಣ್ಣ ಕುಟುಂಬ ಮುಗಿಸೋಕೆ ಮಾಡಿದೆ ಅಂತಾರೆ. ಪೆನ್ ಡ್ರೈವ್ ನಾನೇ ಬಿಡುಗಡೆ ಮಾಡಿದ್ದು ಅಂತಾರೆ. ಕಥಾ ನಾಯಕ ಅಂತಾರೆ. ಇಂತಹ ದೊಡ್ಡ ಹಗರಣದಲ್ಲಿ ಪೆನ್ ಡ್ರೈವ್ ಬಿಟ್ರಲ್ಲ. 25 ಸಾವಿರ ಪೆನ್ ಡ್ರೈವ್ ಮಾಡಿದ್ರಿ. ನವೀನ್ ಅನ್ನೋನು ಪೋಸ್ಟ್ ಮಾಡಿದ್ದಾನೆ. ಎಂಟು ಗಂಟೆ ವರೆಗೂ ಕಾಯ್ರಿ ವೀಡಿಯೋ ಬರುತ್ತೆ ಅಂತ. ಅವನ ಮೇಲೆ ಏನು ಕ್ರಮ ಕೈಗೊಂಡ್ರಿ.? ಕಾರ್ತಿಕ್ ಅನ್ನೋನು ಡ್ರೈವರ್ ಕೊಟ್ಟ ಅಂತೀರಿ. ಸರ್ಜಿಕಲ್ ಸ್ಟ್ರೈಕ್ ರೀತಿ ವ್ಯವಸ್ಥಿತ ಸಂಚು ಮಾಡಿ ಪ್ರಕರಣ ಮುಚ್ಚಿ ಹಾಕಲಾಗ್ತಿದೆ ಅಂತ ಹೇಳಿದ್ದೀರಿ. ಸರ್ಕಾರ ನಿಮ್ಮದೇ ಇದೆ ನೀವು ಏನು ಮಾಡ್ತಿದ್ದಿರಾ? ಅಂತ ಕೃಷ್ಣಬೈರೇಗೌಡಗೆ ತಿರುಗೇಟು ಕೊಟ್ಟರು.

ಪ್ರಜ್ವಲ್ ಪೆನ್‍ಡ್ರೈವ್ ಪ್ರಕರಣ ಇದೀಗ ರಾಜ್ಯಪಾಲರ ಅಂಗಳಕ್ಕೆ ಹೋಗಿದೆ. ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜಭವನದ ಕದ ತಟ್ಟಿದ್ರು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್‍ಗೆ ಪ್ರಕರಣದ ವಿವರಣೆ ನೀಡಿ, ಪ್ರಕರಣದಲ್ಲಿ ಪಾರದರ್ಶಕ ತನಿಖೆ ಆಗಬೇಕು. ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದೆ. ವಿಡಿಯೋ ಬಿಡುಗಡೆ ಮಾಡಿದ ಪ್ರಮುಖ ಆರೋಪಿಗೆ ಬೆಂಗಳೂರಿನಲ್ಲಿ ಸರ್ಕಾರದಿಂದಲೇ ರಾಜ ಮರ್ಯಾದೆ ಸಿಕ್ತಿದೆ. ಇದರ ಹಿಂದೆ ಸರ್ಕಾರದ ಪ್ರಭಾವಿ ನಾಯಕರ ಕೈವಾಡ ಇದೆ. ಎಸ್‍ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೀತಿಲ್ಲ. ನವೀನ್ ಗೌಡ ಬಂಧನ ಮಾಡಿಲ್ಲ. 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ. ಡಿಕೆಶಿಯನ್ನ ವಿಚಾರಣೆ ಮಾಡದೇ ಎಸ್ ಐಟಿ ಪಾರದರ್ಶಕತೆ ಪ್ರದರ್ಶಿಸಿಲ್ಲ. ಡಿಕೆಶಿಯನ್ನು ಸಂಪುಟದಿಂದ ವಜಾಗೊಳಿಸಿ, ತನಿಖೆಯನ್ನ ಸಿಬಿಐಗೆ ಕೊಡುವಂತೆ ಶಿಫಾರಸು ಮಾಡಬೇಕೆಂದು ಆಗ್ರಹಿಸಿದ್ದಾರೆ.

ವಾಯ್ಸ್: ಒಟ್ನಲ್ಲಿ ಪೆನ್‍ಡ್ರೈವ್ ಪ್ರಕರಣ ಸಾಕಷ್ಟು ತಿರುವುಗಳು, ಒಂದೊಂದೆ ಮಜಲುಗಳನ್ನು ಪಡೆಯುತ್ತಿದೆ. ವಾಗ್ಯುದ್ಧ, ಆರೋಪ ಪ್ರತ್ಯಾರೋಪಗಳ ನಡುವೆ ಈ ಪ್ರಕರಣ ಯಾವ ಹಂತಕ್ಕೆ ಬಂದು ತಲುಪುತ್ತೊ ಗೊತ್ತಿಲ್ಲ.

Share This Article