ಎಲ್ಲಾ ಮದರಸಾಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜ ಹಾರಿಸಿ ಎಂದು ಕೇಳಿದ ಮಧ್ಯಪ್ರದೇಶದ ಶಿಕ್ಷಣ ಸಚಿವ

Public TV
1 Min Read

ಮಧ್ಯಪ್ರದೇಶ: ಮಕ್ಕಳಲ್ಲಿ ರಾಷ್ಟ್ರಪ್ರೇಮ ಬೆಳಸಲು ಮದರಸಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜವನ್ನು ಹಾರಿಸಬೇಕು. ಜೊತೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಮಧ್ಯ ಪ್ರದೇಶದ ಶಿಕ್ಷಣಸಚಿವ ವಿಜಯ್ ಶಾ ಹೇಳಿದ್ದಾರೆ.

ಶುಕ್ರವಾರದಂದು ಭೋಪಾಲ್‍ನಲ್ಲಿ ಮಧ್ಯಪ್ರದೇಶ ಮದರಸ ಮಂಡಳಿಯ 20ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿಜಯ್ ಶಾ, ಮಧ್ಯಪ್ರದೇಶದ ಎಲ್ಲಾ ಮದರಸಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜವನ್ನ ಹಾರಿಸಬೇಕು, ರಾಷ್ಟ್ರಗೀತೆ ಹಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ಇದರಿಂದ ಯಾರಿಗೂ ಸಮಸ್ಯೆ ಇಲ್ಲ ಎಂದು ಭಾವಿಸಿದ್ದೇನೆ ಅಂತ ಹೇಳಿದ್ರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಮಕ್ಕಳು ದೇಶವನ್ನು ಹೇಗೆ ಪ್ರೀತಿಸಬೇಕು ಎಂಬುದನ್ನ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ದೇಶವನ್ನು ಪ್ರೀತಿಸುವುದು ಹೇಗೆ ಮತ್ತು ಅದನ್ನು ಯಾವ ರೀತಿ ಮುಂದುವರೆಸಬೇಕು ಎಂಬುದು ಶಾಲಾ ಪಠ್ಯಕ್ರಮದ ಭಾಗವಾಗಿರಬೇಕು. ನಾವೆಲ್ಲರೂ ಒಂದೇ ನೀರನ್ನು ಕುಡಿಯುತ್ತೇವೆ, ಒಂದೇ ಅನ್ನವನ್ನು ತಿನ್ನುತ್ತೇವೆ ಮತ್ತು ನಮ್ಮ ರಕ್ತವು ಕೆಂಪು ಬಣ್ಣದ್ದಾಗಿದೆ. ನಾವು ವಿಭಿನ್ನ ಧರ್ಮಗಳನ್ನ ಅನುಸರಿಸಬಹುದು. ಮಕ್ಕಳಿಗೆ ಪ್ರೀತಿ, ಸೌಹಾರ್ದತೆ ಮತ್ತು ದೇಶಭಕ್ತಿಯ ಪಾಠ ಮಾಡಬೇಕು ಅಂತ ಹೇಳಿದರು.

ಜೊತೆಗೆ ಮದರಸಗಳಲ್ಲಿ ಶಿಕ್ಷಣವನ್ನು ಆಧುನೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಇದರಿಂದ ಮಕ್ಕಳು ಉತ್ತಮ ಉದ್ಯೋಗಗಳನ್ನು ಪಡೆಯಬಹುದು. ಬದುಕಿನ ಸವಾಲುಗಳನ್ನ ಎದುರಿಸಲು ಸಮರ್ಥವಾಗುವಂತೆ ಅವರಲ್ಲಿ ಕೌಶಲ್ಯವನ್ನು ಬೆಳೆಸಬೇಕು. ಒಂದು ಕಡೆ ನಿರುದ್ಯೋಗದ ಸಮಸ್ಯೆ ಇದ್ದರೆ ಮತ್ತೊಂದು ಕಡೆ ಕೌಶಲ್ಯಯುಕ್ತ ಜನರ ಕೊರತೆಯಿದೆ ಎಂದು ಹೇಳಿದ್ದಾರೆ.

ಇಸ್ಲಾಂನಲ್ಲಿ ವ್ಯಕ್ತಿಯ ದೇಶಪ್ರೇಮದ ಪ್ರಾಮುಖ್ಯತೆ ಏನು ಎಂಬ ವಿಷಯದ ಆಧಾರದ ಮೇಲೆ ಪಠ್ಯ ಕ್ರಮವನ್ನು ಪರಿಷ್ಕರಿಸಲು ಮಂಡಳಿ ನಿರ್ಧರಸಿದೆ ಎಂದು ಅಧ್ಯಕ್ಷರಾದ ಸೈಯದ್ ಇಮಾದ್ ಉದ್ದೀನ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *