‘ಗೋದ್ರಾ’ಗಾಗಿ ಬಂದ ಕಾಲಿವುಡ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಕೆ.ಪಿ!

Public TV
1 Min Read

ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಅಭಿನಯದ ‘ಗೋದ್ರಾ’ ಚಿತ್ರ ದಿನದಿಂದ ದಿನಕ್ಕೆ ಸಖತ್ ಕ್ಯೂರಿಯಾಸಿಟಿ ಮೂಡಿಸುತ್ತಿದೆ. ಟೀಸರ್ ಮೂಲಕ ಸಂಚಲನ ಸೃಷ್ಟಿಸಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸ್ಟೋರಿ ಲೈನ್ ಒಳಗೊಂಡಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಕೆ.ಪಿ ಗೋದ್ರಾ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದು, ಸ್ವತಃ ಚಿತ್ರದ ನಿರ್ದೇಶಕ ಕೆ.ಎಸ್.ನಂದೀಶ್ ಇದನ್ನು ಸ್ಪಷ್ಟ ಪಡಿಸಿದ್ದಾರೆ.

ಭೋದಾಯ್ ಎರಿ ಭೂದಿ ಮಾರಿ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಖ್ಯಾತಿ ಗಳಿಸಿರುವ ಕೆ.ಪಿ ಕಾಲಿವುಡ್ ನಲ್ಲಿ ಹೆಸರುವಾಸಿ. ಇದೀಗ ಕನ್ನಡದ ‘ಗೋದ್ರಾ’ ಚಿತ್ರಕ್ಕೆ ಇವ್ರು ಹಿನ್ನೆಲೆ ಸಂಗೀತ ನೀಡಲು ಒಪ್ಪಿಕೊಂಡಿದ್ದು, ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗುವಂತೆ ಮಾಡಿದೆ. ಚಿತ್ರವನ್ನು ಒಮ್ಮೆ ನೋಡಿ ಹಿನ್ನೆಲೆ ಸಂಗೀತ ನೀಡಲು ಒಪ್ಪಿಕೊಂಡಿದ್ದು, ಈಗಾಗಲೇ ಕೆಲಸವನ್ನು ಆರಂಭಿಸಿದ್ದಾರೆ ಕೆ.ಪಿ. ಇಂಟ್ರಸ್ಟಿಂಗ್ ಸಂಗತಿಯಂದ್ರೆ ಈ ಚಿತ್ರಕ್ಕೆ ಕೆ.ಪಿ ಸೇರಿ ನಾಲ್ಕು ಜನ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಜ್ಯೂಡಾ ಸ್ಯಾಂಡಿ, ನವೀನ್ ಸಜ್ಜು, ಟೋನಿ ಜೋಸೆಫ್ ಮೂವರು ಸಂಗೀತ ನಿರ್ದೇಶಕರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದು, ಇದೀಗ ಕೆ.ಪಿ ಚಿತ್ರದ ಹಿನ್ನೆಲೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಚಿತ್ರದಲ್ಲಿ ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಪತ್ರಿಕೋಧ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿದ್ದಾರೆ. ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಹೋರಾಡುವ ಹೋರಾಟಗಾರನಾಗಿ ಸತೀಶ್ ತೆರೆ ಮೇಲೆ ಕಾಣಸಿಗಲಿದ್ದಾರೆ. ಕೆ. ಎಸ್. ನಂದೀಶ್ ಗೋದ್ರಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ಧಾರೆ. ಜಾಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗಿದೆ. ಅಚ್ಯುತ್ ಕುಮಾರ್, ವಸಿಷ್ಠ ಎನ್ ಸಿಂಹ, ರಕ್ಷಾ ಸೋಮಶೇಖರ್ ಚಿತ್ರದ ಮುಖ್ಯ ತಾರಾಬಳಗದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *