ಬರಲಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರಿತ ಸಿನಿಮಾ- ನಾಯಕ, ನಾಯಕಿ ಯಾರು ಗೊತ್ತಾ?

Public TV
2 Min Read

ಮಂಗಳೂರು: ಧರ್ಮಸ್ಥಳ ಕೇವಲ ದೇವಸ್ಥಾನ ಮಾತ್ರ ಆಗಿ ಪ್ರಸಿದ್ಧಿ ಪಡೆದಿಲ್ಲ. ಅಲ್ಲಿನ ಹತ್ತಾರು ಸೇವಾ ಯೋಜನೆಗಳು ಜನರನ್ನು ಹತ್ತಿರವಾಗಿಸಿದೆ. ಕ್ಷೇತ್ರದ ಈ ಯಶೋಗಾಥೆ ಈಗ ಸಿನಿಮಾ ವಸ್ತುವಾಗಿದ್ದು ಗ್ರಾಮೀಣ ರೈತರ ಮೂಲಕ ಅನಾವರಣ ಆಗಲಿದೆ.

ಇಂಥ ಅಪರೂಪದ ಸಿನಿಮಾವೊಂದು ಸೆಟ್ಟೇರುತ್ತಿದೆ. ಗ್ರಾಮೀಣ ರೈತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಲಾಭ ಪಡೆದು ಹೇಗೆ ಸ್ವಾವಲಂಬಿಯಾಗ್ತಾನೆ ಅನ್ನೋದೇ ಕಥಾವಸ್ತು. ವಿಶೇಷ ಅಂದ್ರೆ ಗ್ರಾಮಾಭಿವೃದ್ಧಿ ಯೋಜನೆಯ 20 ಲಕ್ಷ ಸದಸ್ಯರು ತಲಾ 20 ರೂಪಾಯಿ ನೀಡುವ ಮೂಲಕ ಸಮೂಹ ಮಾದರಿಯಲ್ಲಿ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಒಟ್ಟು 4 ಕೋಟಿ ಬಜೆಟ್‍ನ ಸಿನಿಮಾ ಇದಾಗಿದೆ. ಕನ್ನಡದ ಹೆಸರಾಂತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೇ ಇದಕ್ಕೆ ನಿರ್ದೇಶಕರು.

ಈ ಚಿತ್ರಕ್ಕೆ ಕಾನೂರಾಯಣ ಅನ್ನೋ ವಿಶಿಷ್ಟವಾದ ಹೆಸರಿಟ್ಟಿದ್ದಾರೆ. ರಾಧಾರಮಣ ಧಾರವಾಹಿ ಖ್ಯಾತಿಯ ಸ್ಕಂದ ಹಾಗೂ ಸೋನು ಗೌಡ ನಾಯಕ-ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ವಿಶೇಷ ಪಾತ್ರದಲ್ಲಿ ವೀರೇಂದ್ರ ಹೆಗ್ಗಡೆಯವರು ಅಭಿನಯಿಸ್ತಿದ್ದು, ಬೆಳ್ತಂಗಡಿ ಹಾಗೂ ಚಿಕ್ಕಮಗಳೂರಿನಲ್ಲೇ 45 ದಿನಗಳ ಶೂಟಿಂಗ್ ನಡೆಯಲಿದೆ.


ಒಟ್ಟಿನಲ್ಲಿ ಇಡೀ ಚಿತ್ರ ಹಳ್ಳಿಯ ರೈತ ಮತ್ತು ಗ್ರಾಮೀಣ ಸೊಗಡಿನಲ್ಲಿ ಮೂಡಿಬರಲಿದೆ. ಇದು ಸಿನಿಮಾ ಕ್ಷೇತ್ರದಲ್ಲಿ ಹೊಸ ರೀತಿಯ ದಾಖಲೆ ನಿರ್ಮಿಸೋ ನಿರೀಕ್ಷೆಯಿದೆ.

ಯೋಜನೆ ಬೆಳೆದು ಬಂದ ಬಗೆ: ಕಲೆ, ಸಾಹಿತ್ಯ, ಸಂಸ್ಕೃತಿ, ದಾನ, ಧರ್ಮ ಮುಂತಾದ ಸತ್ಕಾರ್ಯಗಳ ನೀಲಗಗನ ಧರ್ಮಸ್ಥಳದಲ್ಲಿ ಬಾಹುಬಲಿಯ ಪ್ರತಿಷ್ಠೆ ಸಂದರ್ಭ ಅಂದರೆ 1982ರಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರು ಬಡವರ ಉದ್ಧಾರದ ಕಾಳಜಿಯಿಂದ ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ವಿಶಾಲ ವೃಕ್ಷವಾಗಿ ಬೆಳೆದು ಲಕ್ಷಾಂತರ ಜನರಿಗೆ ನೆರಳು ಕೊಡುತ್ತಿದೆ.

ಯಾವಾಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಶುರುವಾಯಿತೋ ನಿಸರ್ಗದ ದೆಸೆಯೇ ಬದಲಾಯಿತು. ಜನಜೀವನ ಮಟ್ಟ ಸಾಗರ ತಳದಿಂದ ಮೇಲಕ್ಕೇರಿತು. ಸರಿಸುಮಾರು 35 ವರ್ಷಗಳ ಹಿಂದೆ ಆರಂಭಗೊಂಡು ಇದೀಗ ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಈ ಯೋಜನೆ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸುತ್ತಾ ತಾಲೂಕನ್ನು ಮೀರಿ 30 ಜಿಲ್ಲೆಗೆ ವಿಸ್ತರಿಸಲ್ಪಟ್ಟಿದೆ. ಯೋಜನೆಯನ್ನು ಅಣ್ವಸ್ತ್ರ ಜನಕ ರಾಷ್ಟ್ರಪತಿ ಡಾ| ಎ. ಪಿ. ಜೆ. ಅಬ್ದುಲ್ ಕಲಾಂ ಕೂಡ ಮನಸಾರೆ ಕೊಂಡಾಡಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *