ನಮ್ಮ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದಾದ್ರೆ ನಿಮ್ಮ ಅಭ್ಯರ್ಥಿಯನ್ನ ಕಣದಿಂದ ಹಿಂದೆ ಸರಿಸಿ: JDSಗೆ ಸಿದ್ದು ಸವಾಲ್

Public TV
2 Min Read

ಧಾರವಾಡ: ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆ ಜೆಡಿಎಸ್ ಒಪ್ಪಂದ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಾದರೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಿ ನಮ್ಮ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಪ್ರತ್ಯುತ್ತರ ನೀಡಿದರು.

ಧಾರವಾಡದಲ್ಲಿ ಮಾತನಾಡಿದ ಅವರು, ಸಂಧಾನ ಮಾಡಿಕೊಳ್ಳುವಂತೆ ಹೆಚ್‍ಡಿಕೆ ಆಹ್ವಾನ ಮಾಡಿದ್ದಾರೆ ಎಂಬ ಸುದ್ದಿ ಇದೆ. ಜೆಡಿಎಸ್ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿ ಮಾಡುವುದೇ ಈಗ ಸಂಧಾನ. ಅವರು ನಮಗೆ ಮತ ಹಾಕಬೇಕು ಅದೇ ಸಂಧಾನ. ಈ ಹಿಂದೆ ದೇವೇಗೌಡರ ವಿರುದ್ಧ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ, ಅವರು ಈಗ ಯಾಕೆ ಅಭ್ಯರ್ಥಿಯನ್ನು ಹಾಕಿದ್ದಾರೆ. ಬಿಜೆಪಿಯನ್ನು ಸೋಲಿಸುವುದೇ ಗುರಿಯಾದ್ರೆ ಜೆಡಿಎಸ್‍ನವರು ನಮಗೆ ಬೆಂಬಲಕೊಡಲಿ. ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ, ಅವರ ಪಕ್ಷಕ್ಕೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧೀಮಂತ ಜನ ನಾಯಕ: ಪ್ರಚಾರ ಸಮಯದಲ್ಲಿ ತಂದೆ ಸಾಧನೆಯನ್ನು ಗುಣಗಾನ ಮಾಡಿದ ವಿಜಯೇಂದ್ರ 

ನಮ್ಮ ಹೈಕಮಾಂಡ್ ಇರೋದು ದೆಹಲಿಯಲ್ಲಿ, ಅವರ ಹೈಕಮಾಂಡ್ ಇರೋದು ಪದ್ಮನಾಭನಗರದಲ್ಲಿ. ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ, ಏನೇ ಆಗೋದಿದ್ರೂ ಮತದಾನದ ದಿನವೇ ತೀರ್ಮಾನ ಆಗುತ್ತದೆ ಎಂದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಹಿತಿಗಳು ಅವರ ಫಲಾನುಭವಿಗಳಾಗಿದ್ದರು ಎಂಬ ಅಡ್ಡಂಡ ಸಿ. ಕಾರ್ಯಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಂಡಿತಾರಾಧ್ಯ ಶ್ರೀ ನಮ್ಮ ಫಲಾನುಭವಿನಾ ಎಂದು ಪ್ರಶ್ನಿಸಿದರು. ಪಠ್ಯಕ್ರಮದಲ್ಲಿ ಬಸವಣ್ಣನ ವಿಚಾರವನ್ನು ತಿರುಚಲಾಗಿದೆ. ಅಂಬೇಡ್ಕರ್ ಸೇರಿದಂತೆ ಭಗತ್ ಸಿಂಗ್ ಹಾಗೂ ಕುವೆಂಪು ಅವರ ವಿಚಾರವನ್ನು ತಿರುಚಲಾಗಿದೆ. ಚರಿತ್ರೆಯಲ್ಲಿ ಏನಿದೆಯೋ ಅದನ್ನು ಮುಚ್ಚಿಟ್ಟು ತಿರುಚಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಮಂತ್ರಿ, ಮುಖ್ಯಮಂತ್ರಿ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿಲ್ಲ: ವಿಜಯೇಂದ್ರ

ಮಕ್ಕಳಿಗೆ ವೈಚಾರಿಕತೆ ತಿಳಿಸಬೇಕು, ಅಂಬೇಡ್ಕರ್ ಸಂವಿಧಾನ ಶಿಲ್ಪಿ ಅನ್ನೋದನ್ನೇ ತೆಗೆದುಹಾಕಲಾಗಿದೆ. ಬಸವಣ್ಣ ವೈದಿಕ ಧರ್ಮದ ವಿರುದ್ಧ ಹೋರಾಡಿದ್ದರು. ಅದನ್ನೂ ತಿರುಚಲಾಗಿದೆ. 10 ದಿನದಲ್ಲಿ ಪಠ್ಯ ಪರಿಷ್ಕರಣೆ ಆಗಬೇಕು ಎಂಬುದಕ್ಕೆ ನನ್ನ ಬೆಂಬಲವೂ ಇದೆ. ರೋಹಿತ್ ಚಕ್ರತೀರ್ಥ ಮಾಡಿರೋದನ್ನು ಸಂಪೂರ್ಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *