ಮಗು ಅತ್ತಿದ್ದಕ್ಕೆ ನೀರಿನಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ!

Public TV
1 Min Read

ಮುಂಬೈ: ತನ್ನ ಮಗು ನಿರಂತರವಾಗಿ ಅಳುತ್ತದೆ ಎಂಬ ಒಂದೇ ಕಾರಣಕ್ಕೆ ತಾಯಿಯೊಬ್ಬಳು ತನ್ನ 6 ತಿಂಗಳ ಕಂದಮ್ಮನನ್ನೇ ಕೊಂದಿರುವ ಹೃದಯವಿದ್ರಾವಕ ಘಟನೆ ಭಿವಂಡಿ ತಾಲೂಕಿನ ಕವಾಡ ಪಂಚಾಯ್ತಿ ವ್ಯಾಪ್ತಿಯ ಛಾಪಶಿಪಾಡಿ ಎಂಬಲ್ಲಿ ನಡೆದಿದೆ. ಮಗು ಹುಟ್ಟಿದಾಗಿನಿಂದಲೂ ಅನಾರೋಗ್ಯದಿಂದ ಕೂಡಿದ್ದು, ನಿರಂತರವಾಗಿ ಅಳುತ್ತಿತ್ತು. ಮಗುವಿನ ಅಳು ಶಬ್ಧ ಕೇಳಲಾರದೇ ತಾಯಿಯೇ ಕೊಂದಿದ್ದಾಳೆಂದು ಹೇಳಲಾಗುತ್ತಿದೆ.

ಆದಿವಾಸಿ ಜನಾಂಗದ ಕಲ್ಪನಾ ಗಾಯಕರ್ (25) ಮಗುವನ್ನ ಕೊಂದ ಕ್ರೂರಿ ತಾಯಿ. ಮಹಿಳೆಗೆ ಇಬ್ಬರು ಮಕ್ಕಳಿದ್ದು, 6 ತಿಂಗಳ ವೃಷಭ್ ಹುಟ್ಟಿನಿಂದಲೇ ಶೀತ, ಕೆಮ್ಮು, ತೀವ್ರ ಜ್ವರದಿಂದ ಬಳಲುತ್ತಿದ್ದನು. ಮಗುವಿಗೆ ಚಿಕಿತ್ಸೆ ಕೊಡಿಸುವ ಬದಲಾಗಿ, ಕಲ್ಪನಾ ತಂತ್ರ-ಮಂತ್ರದ ಮೊರೆ ಹೋಗಿದ್ದಳು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಗುವಿನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತಿತ್ತು. ಆರೋಗ್ಯದಲ್ಲಿನ ಏರುಪೇರುಗಳಿಂದಾಗಿ ಮಗು ನಿರಂತರವಾಗಿ ಅಳುತ್ತಿತ್ತು.

ನೀರಿನಲ್ಲಿ ಮುಳುಗಿಸಿ ಕೊಲೆ:
ಮಗುವಿನ ಅಳುವಿನ ಶಬ್ಧದಿಂದ ವಿಚಲಿತಳಾದ ಕಲ್ಪನಾ ಆಗಸ್ಟ್ 8 ರಂದು ಮಗುವನ್ನು ಕರೆದುಕೊಂಡು ನಿತ್ಯಾನಂದ ಕಾಲೋನಿಯಲ್ಲಿರುವ ತವರು ಮನೆಗೆ ತೆರಳಿದ್ದಳು. ಕಾಲುವೆಯ ಬಳಿ ಮಗುವನ್ನು ಕರೆದುಕೊಂಡು ಹೋದ ಕಲ್ಪನಾ ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾಳೆ. ಮಗುವಿನ ಶವ ಪತ್ತೆಯಾದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕಲ್ಪನಾ ತನ್ನ ರೋಗಗ್ರಸ್ಥ ಮಗುವನ್ನು ಸಾಯಿಸುತ್ತೇನೆ ಎಂದು ಹಲವು ಬಾರಿ ಗ್ರಾಮಸ್ಥರ ಬಳಿ ಹೇಳಿಕೊಂಡಿದ್ದಳು. ಮಗುವಿನ ಶವ ಪತ್ತೆಯಾದ ಕೂಡಲೇ ಗ್ರಾಮಸ್ಥರಲ್ಲಿ ಕಲ್ಪನಾ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಕಲ್ಪಾಳನ್ನು ವಶಕ್ಕೆ ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ.

2 ವರ್ಷದ ಹಿಂದೆಯೂ ಮಗು ಕೊಲೆ:
ಮೂಢನಂಬಿಕೆಗೆ ಒಳಗಾಗಿ ಕಲ್ಪನಾ ಮಗುವನ್ನು ಕೊಂದಿರುವ ಶಂಕೆಗಳು ವ್ಯಕ್ತವಾಗುತ್ತಿವೆ. ಎರಡು ವರ್ಷಗಳ ಹಿಂದೆ ನಿಧಿ ಆಸೆಗಾಗಿ ಕಲ್ಪನಾ ಪತಿ ನಿಲೇಶ್ ಗಾಯಕರ್ ತನ್ನ ಮೊದಲ ಮಗುವನ್ನು ಇದೇ ರೀತಿ ಕೊಂದಿದ್ದನು. ಹೀಗಾಗಿ ಇದೀಗ ಈ ಎರಡೂ ಕೊಲೆಗಳಲ್ಲಿ ಒಂದೇ ಹೋಲಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *