ಅಳುತ್ತಿದ್ದ ಮಗುವನ್ನ ನಾಲೆಗೆ ಎಸೆದ ತಾಯಿ

Public TV
1 Min Read

ಚಿಕ್ಕಮಗಳೂರು: ಮೂರು ತಿಂಗಳ ಗಂಡು ಮಗುವನ್ನ ಹೆತ್ತ ತಾಯಿಯೇ ನಾಲೆಗೆ ಎಸೆದು ಕೊಂದ ಅಮಾನವೀಯ ಘಟನೆ ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.

ಕಡೂರು ತಾಲೂಕಿನ ನಿಡಘಟ್ಟ ನಿವಾಸಿ ಕಮಲ ಮಗುವನ್ನು ನಾಲೆಗೆ ಎಸೆದ ತಾಯಿ. ಮೂರು ತಿಂಗಳ ತೇಜಸ್ ಮೃತ ಕಂದಮ್ಮ ಎಂದು ಗುರುತಿಸಲಾಗಿದೆ. ತರೀಕೆರೆ ತಾಲೂಕಿನ ಹಳಿಯಾರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಮಲ ಹಾಗೂ ಆಕೆಯ ಅತ್ತೆ ಮಗುವಿಗೆ ಹುಷಾರಿರಲಿಲ್ಲ ಎಂದು ತರೀಕೆರೆಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ತಡರಾತ್ರಿ ಮಗು ಅಳುತ್ತಿತ್ತು ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸಿರಲಿಲ್ಲ. ಈ ವೇಳೆ ಕಮಲ ಸಮಾಧಾನ ಮಾಡಿಸಿಕೊಂಡ ವಾಪಾಸ್ ಬರುತ್ತೇನೆ ಎಂದು ಅತ್ತೆ ಬಳಿ ಹೇಳಿ ಮಗುವನ್ನು ಎತ್ತುಕೊಂಡು ಹೋಗಿದ್ದಳು.

ಆದರೆ ಮಗುವನ್ನು ಎತ್ತಿಕೊಂಡು ಬಂದ ತಾಯಿ ತರೀಕೆರೆಯಿಂದ ೪ ಕಿ.ಮೀ ದೂರವಿರುವ ಹಳಿಯಾರು ಗ್ರಾಮಕ್ಕೆ ನಡೆದುಕೊಂಡು ಬಂದು, ಅಲ್ಲಿರುವ ಭದ್ರಾ ನಾಲೆಯಲ್ಲಿ ಮಗುವನ್ನು ಎಸೆದು ಮತ್ತೆ ಆಸ್ಪತ್ರೆಗೆ ಹೋಗಿ ಏನು ಗೊತ್ತಿಲ್ಲದಂತೆ ಮಲಗಿಕೊಂಡಿದ್ದಳು. ಇತ್ತ ನೀರಿನಲ್ಲಿ ಮುಳುಗಿ ಮಗು ಮೃತಪಟ್ಟಿದ್ದು, ನೀರು ಹರಿಯುತ್ತಿದ್ದ ರಭಸಕ್ಕೆ ಮಗು ಮೃತದೇಹ ಹರಿದುಬಂದು ಹಳಿಯಾರು ಗ್ರಾಮದಿಂದ ೫ ಕಿ.ಮೀ ದೂರವಿರುವ ಬೆಟ್ಟತಾವರೆಕೆರೆ ಗ್ರಾಮದಲ್ಲಿ ಪತ್ತೆಯಾಗಿದೆ.

ನಾಲೆಯಲ್ಲಿ ಮಗುವಿನ ಮೃತದೇಹ ಕಂಡ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮಗುವಿನ ಮೃತದೇಹವನ್ನು ನಾಲೆಯಿಂದ ಹೊರತಗೆದು, ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಾಗ ಆರೋಪಿ ತಾಯಿ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *