8 ವರ್ಷದ ಮಗಳಿನೊಂದಿಗೆ ಕಲ್ಲುಕ್ವಾರಿಗೆ ಹಾರಿದ ತಾಯಿ

Public TV
1 Min Read

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೊಂದಿಬಸವನಹಳ್ಳಿಯಲ್ಲಿ ಸಾಲಬಾಧೆಯಿಂದ ಬೇಸತ್ತು ಮಹಿಳೆಯೊಬ್ಬರು ತನ್ನ 8 ವರ್ಷದ ಮಗಳಿನೊಂದಿಗೆ ಕಲ್ಲಿನಕ್ವಾರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗೊಂದಿಬಸವನಹಳ್ಳಿಯ ತಾಯಮ್ಮ (35) ಹಾಗೂ 8 ವರ್ಷದ ಮಗಳು ಗಾನವಿ (ದಿವ್ಯ) ಮೃತಪಟ್ಟ ದುರ್ದೈವಿಗಳು. ಸಾಲಬಾಧೆಯಿಂದ ಬೇಸತ್ತ ತಾಯಮ್ಮ ಮಂಗಳವಾರ ಬೆಳಗ್ಗೆ ತನ್ನ ಮಗಳು ದಿವ್ಯ ಜೊತೆಗೆ ಊರ ಹೊರಗಿರುವ ಕಲ್ಲುಕ್ವಾರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಇಬ್ಬರ ಮೃತದೇಹಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಘಟನೆ ಕುರಿತು ಮೃತ ತಾಯಮ್ಮರ ಪತಿ ಸ್ವಾಮಿ ನಾಯಕ್ ಮಾತನಾಡಿ, ನಾನು ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿದ್ದೇನೆ. ಎಂದಿನಂತೆ ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೊರ ಬಂದೆ. ನಾನು ಬಂದ ಮೇಲೆ ಅಮ್ಮ ಮಗಳು ಹೋಗಿ ಇಂತಹ ಕೆಲಸಕ್ಕೆ ಕೈ ಹಾಕಿ ಜೀವ ಕಳೆದುಕೊಂಡಿದ್ದಾರೆ. ಸಂಘ ಮತ್ತು ಇತರರಿಂದ ಕೈ ಸಾಲ ಮಾಡಿಕೊಂಡಿದ್ದೇವು. ಇದರಿಂದ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಮೃತ ಗಾನವಿ ಗೊಂದಿಬಸವನಹಳ್ಳಿ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಶಾಲೆಯಲ್ಲಿ ತುಂಬಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಳೆಂದು ಶಿಕ್ಷಕರು ಕಂಬನಿ ಮಿಡಿದಿದ್ದಾರೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *