ಮೀಟರ್ ಬಡ್ಡಿ ದಂಧೆ- ಮೂವರು ಮಕ್ಕಳ ಕತ್ತು ಕೊಯ್ದು ತಾಯಿ ಆತ್ಮಹತ್ಯೆಗೆ ಯತ್ನ!

Public TV
1 Min Read

ಚಿಕ್ಕಬಳ್ಳಾಪುರ: ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತ ತಾಯಿ, ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

ತಾಯಿ ರಾಜಮ್ಮ, ತನ್ನ ಮಕ್ಕಳಾದ ಮನೋಜ್, ಅಮೃತ, ಭೂಮಿಕಾಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಸದ್ಯ ನಾಲ್ವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜಮ್ಮ ತನ್ನ ಮೂವರು ಮಕ್ಕಳ ಕತ್ತನ್ನು ಬ್ಲೇಡ್ ನಿಂದ ಕೊಯ್ದು ಬಳಿಕ ಜಿರಳೆ ಔಷಧಿ ನುಂಗಿ, ತನ್ನ ಕತ್ತನ್ನು ಕೂಡ ಕೊಯ್ದುಕೊಳ್ಳುವ ಮೂಲಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕತ್ತು ಕೊಯ್ಯುವಾಗ ನೋವಿನಿಂದ ಚೀರಾಡುತ್ತಿರುವ ಮಕ್ಕಳ ಧ್ವನಿ ಅಕ್ಕ-ಪಕ್ಕದ ಮನೆಯವರಿಗೆ ಕೇಳಿಸಿದೆ. ಕೂಡಲೇ ನೆರೆಹೊರೆಯವರು ಸ್ಥಳಕ್ಕೆ ದೌಡಾಯಿಸಿ ಎಲ್ಲರನ್ನು ರಕ್ಷಿಸಿದ್ದಾರೆ. ಸದ್ಯ ತಾಯಿ ಸೇರಿ ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಂತಾಮಣಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಕ್ಕ-ಪಕ್ಕದ ಮನೆಯ ಮಹಿಳೆಯರು ಬಡ್ಡಿಗೆ ಹಣ ಕೊಡುತ್ತಿದ್ದರು. ಹೀಗಾಗಿ ನಾನು 1 ಲಕ್ಷದಷ್ಟು ಹಣವನ್ನು ಬಡ್ಡಿಗೆ ಪಡೆದುಕೊಂಡಿದ್ದೆ. ಆದ್ರೆ ಪತಿ ವೆಂಕಟೇಶ್ ಕುಡಿತದ ದಾಸನಾಗಿದ್ದರಿಂದ ಬಡ್ಡಿ ಕಟ್ಟಿಲ್ಲ. ಸದ್ಯ ನನಗೆ ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬಡ್ಡಿಯವರು ಪದೇ ಪದೇ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದಾರೆ. ಪರಿಣಾಮ ಮನನೊಂದು ಈ ಕೃತ್ಯ ಎಸಗಿರುವುದಾಗಿ ಮಹಿಳೆ ತಿಳಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಮೀಟರ್ ಬಡ್ಡಿ ದಂಧೆಯನ್ನು ಹೋಗಲಾಡಿಸಬೇಕು ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಯತ್ನ ಮಾಡುತ್ತಿದ್ದರೂ, ಕೆಲವೆಡೆ ದಂಧೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *