ಕರ್ನಾಟಕದಲ್ಲಿ ಮತ್ತೆ ಬರದ ಕಾರ್ಮೋಡ- ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೀಕರ ಬರಗಾಲದ ಭೀತಿ

Public TV
2 Min Read

ಬೆಂಗಳೂರು: ಕರ್ನಾಟಕದ ಮೇಲೆ ಈ ವರ್ಷವೂ ರಣಭೀಕರ ಬರದ ಕಾರ್ಮೋಡ ಆವರಿಸಿದೆ.

ಯಾತಕ್ಕೆ ಮಳೆ ಹೋಯಿತೋ.. ಶಿವ.. ಶಿವ.. ಲೋಕ ತಲ್ಲಣಿಸ್ತಾವೋ.. ಅಂತ ಮೂರು ವರ್ಷಗಳಿಂದ ಅನ್ನದಾತರು ಆಕಾಶದತ್ತ ಮುಖ ಮಾಡಿದ್ದಾರೆ. ಗಾಯದ ಮೇಲೆ ಬರೆ, ಬರೆ ಮೇಲೆ ಮತ್ತೆ ಉಪ್ಪು ಎನ್ನುವಂತೆ 42 ವರ್ಷಗಳ ಬಳಿಕ ಈ ವರ್ಷವೂ ರಣಭೀಕರ ಬರಗಾಲ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ಮುಂಗಾರು ಮಳೆಯ ಕಾಲ ಮುಗಿದಿದೆ. ಜೂನ್‍ನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಕೊರತೆ ಇತ್ತು. ಜುಲೈ ತಿಂಗಳಲ್ಲಿ 280 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ ಕೇವಲ 173 ಮಿಲಿ ಮೀಟರ್ ಮಳೆಯಾಗಿದೆ.

ರಾಜ್ಯದಲ್ಲಿ ಈ ಬಾರಿ ಶೇಕಡಾ 38ರಷ್ಟು ಮಳೆಯ ಕೊರತೆಯಾಗಿದೆ. ಮುಂಗಾರು ಕಣ್ಣಾಮುಚ್ಚಾಲೆಯಿಂದ ಕೃಷಿ ಚಟುವಟಿಕೆ ಆರಂಭಿಸೋಕೆ ನೇಗಿಲಯೋಗಿ ಮೀನಾಮೇಷ ಎಣಿಸುತ್ತಿದ್ದಾರೆ.

ಜಲಾಶಯಗಳ ಸಾಮಥ್ರ್ಯಗಳಲ್ಲಿ ಅರ್ಧದಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಹಾರಂಗಿ ಬಿಟ್ಟರೆ ಕೆಆರ್‍ಎಸ್, ಕಬಿನಿ, ಹೇಮಾವತಿ, ಜಲಾಶಯಗಳಲ್ಲಿ ಅರ್ಧಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಇದು ಕಾವೇರಿ ಕೊಳ್ಳದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ರಾಜಧಾನಿ ಬೆಂಗಳೂರಿನ ಕುಡಿಯುವ ನೀರಿಗೆ ಕಂಟಕ ಎದುರಾಗಿದೆ.

ಬೆಂಗಳೂರು ಗ್ರಾಮಾಂತರ, ಧಾರವಾಡ, ಗದಗ ಸೇರಿದಂತೆ 12 ಜಿಲ್ಲೆಗಳಲ್ಲಿ ಭಾರೀ ಕ್ಷಾಮದ ಮುನ್ಸೂಚನೆ ಸಿಕ್ಕಿದೆ. ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ 15 ಜಿಲ್ಲೆಗಳಲ್ಲಿ ಮಧ್ಯಮ ಪ್ರಮಾಣದ ಮಳೆಯಾಗಿದೆ. ವಿಚಿತ್ರ ಅಂದ್ರೆ ಕಲಬುರಗಿಯಲ್ಲಿ ಮಾತ್ರ ಭಾರೀ ಪ್ರಮಾಣದ ಮಳೆಯಾಗಿದೆ.

ರಾಜ್ಯದಲ್ಲಿ ಹೆಚ್ಚು ಬರಗಾಲ ಹೊಂದಿರುವ ಜಿಲ್ಲೆಗಳು ಹೀಗಿವೆ.

1. ಧಾರವಾಡ : 45%
2. ಗದಗ : 45%
3. ಹಾವೇರಿ : 45%
4. ತುಮಕೂರು : 44%
5. ಚಿಕ್ಕಬಳ್ಳಾಪುರ : 41%
6. ಕೋಲಾರ : 38%
7. ಬೆಂಗಳೂರು ನಗರ : 52%
8. ಚಾಮರಾಜನಗರ : 60%
9. ಮೈಸೂರು : 50%
10. ಬೆಂಗಳೂರು ಗ್ರಾ. : 51%
11. ಮಂಡ್ಯ : 65%
12. ರಾಮನಗರ : 45%

ಮಧ್ಯಮ ಪ್ರಮಾಣ ಬರಗಾಲ ಹೊಂದಿರುವ ಜಿಲ್ಲೆಗಳು ಹೀಗಿವೆ.

13. ಬೀದರ್ : 8%
14. ವಿಜಯಪುರ : 18%
15. ಯಾದಗಿರಿ : 28%
16. ರಾಯಚೂರು : 20%
17. ಬಾಗಲಕೋಟೆ : 23&
18. ಬೆಳಗಾವಿ : 27%
19. ಬಳ್ಳಾರಿ : 25%
20. ದಾವಣಗೆರೆ : 21%
21. ಶಿವಮೊಗ್ಗ : 24%
22. ಚಿತ್ರದುರ್ಗ : 32%
23. ಚಿಕ್ಕಮಗಳೂರು : 30%
24. ಉಡುಪಿ : 15%
25. ದಕ್ಷಿಣ ಕನ್ನಡ : 26%
26. ಹಾಸನ : 30%
27. ಕೊಡಗು : 37%

ಕಡಿಮೆ ಪ್ರಮಾಣದಲ್ಲಿ ಬರಗಾಲ ಹೊಂದಿರುವ ಜಿಲ್ಲೆಗಳು

28. ಕೊಪ್ಪಳ : 5%
29. ಉತ್ತರ ಕನ್ನಡ : 6%

ಇನ್ನೂ ಆಶ್ಚರ್ಯ ಎಂಬಂತೆ ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.

30. ಕಲಬುರ್ಗಿ: +5%

ಮುಂದಿನ ತಿಂಗಳಲ್ಲಿ ಮಳೆಯಾಗೋ ಸಾಧ್ಯತೆ ತುಂಬಾ ಕಡಿಮೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್‍ರೆಡ್ಡಿ ಹೇಳಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *