ಕಾರ್ಕಳದ ಮದೀನಾ ಮಸೀದಿಯಿಂದ 32 ವಿದ್ಯಾರ್ಥಿಗಳ ಜೊತೆ ಧರ್ಮಗುರು ಎಸ್ಕೇಪ್!

Public TV
1 Min Read

ಉಡುಪಿ: ವಿದ್ಯಾರ್ಥಿಗಳ ಜೊತೆ ಧರ್ಮಗುರು ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮದೀನಾ ಮಸೀದಿಯಲ್ಲಿ ನಡೆದಿದೆ.

ಧಾರ್ಮಿಕ ವಿದ್ಯಾಭ್ಯಾಸಕ್ಕೆ ಬಿಹಾರದಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಮೂವತ್ತೆರಡು ವಿದ್ಯಾರ್ಥಿಗಳು ಬಂದಿದ್ದರು. ಧರ್ಮಗುರು ತೈಯ್ಯಬ್ ಕೂಡಾ ಮೂಲತಃ ಬಿಹಾರ ರಾಜ್ಯದವನು. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮದೀನಾ ಮಸೀದಿಯಲ್ಲಿ ಈ ಘಟನೆ ನಡೆದಿದೆ.

ಬಿಹಾರ ಮೂಲದ ತೈಯ್ಯಬ್ ಐದು ವರ್ಷದ ಹಿಂದೆ ಮದೀನ ಮಸೀದಿಗೆ ಸಹಾಯಕ ಧರ್ಮಗುರುವಾಗಿ ನೇಮಕವಾಗಿದ್ದ. ಕಳೆದ ಐದು ವರ್ಷದಿಂದ ಹಂತ ಹಂತವಾಗಿ ಸುಮಾರು ಮೂವತ್ತು ಮಂದಿ ಬಿಹಾರ ಮೂಲದ ಮಕ್ಕಳನ್ನು ಧಾರ್ಮಿಕ ಶಿಕ್ಷಣಕ್ಕಾಗಿ ಉಡುಪಿಗೆ ಕರೆ ತಂದಿದ್ದ. ಕೆಲ ದಿನಗಳಿಂದ ಮಸೀದಿಯ ಆಡಳಿತ ಮಂಡಳಿ ಮತ್ತು ತೈಯಬ್ ನಡುವೆ ಆಂತರಿಕ ಕಲಹ ಏರ್ಪಟ್ಟಿತ್ತು. ಕಮಿಟಿಯ ಜೊತೆ ವೈಮನಸ್ಸು ನಡೆದಿತ್ತು. ಕಳೆದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಟೆಂಪೋ ಟ್ರಾವೆಲ್ಲರ್ ಮೂಲಕ 32 ಮಂದಿ ವಿದ್ಯಾರ್ಥಿಗಳನ್ನು ತೈಯ್ಯಬ್ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಟಿಟಿ ವಾಹನ ಕಾರ್ಕಳದಿಂದ ಹೊರಟು ಕುಂದಾಪುರ ಕಡೆಗೆ ತೆರಳಿತ್ತು ಎಂಬ ಮಾಹಿತಿ ಇದೆ. ಮೂವತ್ತೆರಡು ಮಂದಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ಕೊಡುವುದರ ಜೊತೆಗೆ ಪಕ್ಕದಲ್ಲಿರುವ ಸಭಾಂಗಣದ ಮೇಲ್ವಿಚಾರಣೆಯನ್ನು ನೋಡುತ್ತಿದ್ದನು. ಇದರ ಜೊತೆ ಮದೀನಾ ಮಸೀದಿಯಲ್ಲಿ ಐದು ಬಾರಿ ಧ್ವನಿವರ್ಧಕದಲ್ಲಿ ನಮಾಜ್ ಮಾಡುವ ಕೆಲಸಕ್ಕೂ ನೇಮಕಗೊಂಡಿದ್ದ.

ಮಸೀದಿ ಆಡಳಿತ ಮಂಡಳಿ ಕಾರ್ಕಳ ನಗರ ಠಾಣೆಗೆ ಪ್ರಕರಣವನ್ನು ಗಮನಕ್ಕೆ ತಂದಿದೆ. ತೈಯ್ಯಬ್ ವಿರುದ್ಧ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *