ಪರಿಷತ್ ಚುನಾವಣೆ – ಕಾಂಗ್ರೆಸ್ ಟಿಕೆಟ್‍ಗೆ 20ಕ್ಕೂ ಹೆಚ್ಚು ಅಲ್ಪಸಂಖ್ಯಾತರ ಕಸರತ್ತು

Public TV
1 Min Read

ಧಾರವಾಡ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಯಿಂದ ಆಯ್ಕೆಯಾಗಲಿರುವ ವಿಧಾನ ಪರಿಷತ್ ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ಹೀಗಾಗಿ ಧಾರವಾಡದ ದ್ವಿಸದಸ್ಯಿಯ ಕ್ಷೇತ್ರದ ಟಿಕೆಟ್‍ಗಾಗಿ ಎಲ್ಲ ಕಡೆ ಕಸರತ್ತು ಆರಂಭವಾಗಿದೆ.

ಧಾರವಾಡ ಕ್ಷೇತ್ರದಲ್ಲಿ ಮೂರು ಜಿಲ್ಲೆಗಳು ಬರಲಿವೆ. ಅದರಲ್ಲಿ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ಸ್ಥಳಿಯ ಸಂಸ್ಥೆಗಳ ಸದಸ್ಯರು ಮತದಾನ ಮಾಡಲಿದ್ದಾರೆ. ಹೀಗಾಗಿ ಟಿಕೆಟ್ ಗಿಟ್ಟಿಸಿಕೊಳ್ಳಲು ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಲ್ಲಿ ಆಕಾಂಕ್ಷಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ರೂ ಕ್ರಮ ಆಗ್ಲೇಬೇಕು: ಕೆ.ಬಿ.ಕೋಳಿವಾಡ

ಕಳೆದ ಬಾರಿ ಇದೇ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಶ್ರೀನಿವಾಸ ಮಾನೆ ಹಾನಗಲ್ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಇನ್ನೋರ್ವ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಈಗ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಡಿಸೆಂಬರ್ 10 ರಂದು ಈ ದ್ವಿಸದಸ್ಯಿಯ ಕ್ಷೇತ್ರದ ಮತದಾನ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡಲು ನಿರ್ಧಾರ ಮಾಡಲಾಗಿದೆ.

ಈ ಹಿನ್ನೆಲೆ ಕಾಂಗ್ರೆಸ್ ನಲ್ಲಿರುವ ಈ ಮೂರು ಜಿಲ್ಲೆಯ ಅಲ್ಪಸಂಖ್ಯಾತ ಟಿಕೆಟ್ ಆಕಾಂಕ್ಷಿಗಳು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ. ಇದರಲ್ಲಿ ಕಾಂಗ್ರೆಸ್ ಮುಖಂಡ ಸಲೀಂ ಅಹ್ಮದ್, ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಇಸ್ಲಾಯಿಲ್ ತಮಾಟಗಾರ, ಇಮ್ರಾನ್ ಕಳ್ಳಿಮನಿ, ಅಲ್ತಾಫ್ ಹಳ್ಳುರ ಸೇರಿ 20 ಕ್ಕೂ ಹೆಚ್ಚು ಅಲ್ಪಸಂಖ್ಯಾತ ಟಿಕೆಟ್ ಆಕಾಂಕ್ಷಿಗಳು ಕಸರತ್ತು ನಡೆಸುತ್ತಿದ್ದಾರೆ. ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸಿದ ರಮೇಶ್ ಭೂಸನೂರು

ಮತ್ತೊಂದು ಕಡೆ ಬಿಜೆಪಿ ಪಕ್ಷದಿಂದ ಈಗಿರುವ ಪ್ರದೀಪ್ ಶೆಟ್ಟರ್ ಅವರಿಗೆ ಟಿಕೆಟ್ ಫೈನಲ್ ಎನ್ನಲಾಗುತ್ತಿದೆ. ಆದರೂ ಮಹೇಶ್ ನಾಲವಾಡ ಹಾಗೂ ನಾಗೇಶ್ ಕಲಬುರ್ಗಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಪ್ರಸ್ತುತ ಬಿಜೆಪಿ ಒಬ್ಬರನ್ನೇ ಕಣದಲ್ಲಿ ಇಳಿಸುವ ನಿರ್ಧಾರ ಮಾಡಿದರೆ ಪ್ರದೀಪ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಲಿದೆ. ಇನ್ನೋರ್ವ ಅಭ್ಯರ್ಥಿ ಏನಾದ್ರು ಕಣದಲ್ಲಿ ಇಳಿಸಲು ನಿರ್ಧಾರ ಮಾಡಿದರೆ ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ಕೊಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *