ಬೆಂಗಳೂರು: ಮೊಪೆಡ್ ಡಿಕ್ಕಿಯಲ್ಲಿಟ್ಟಿದ್ದ ಮೂರುವರೆ ಲಕ್ಷ ರೂ.ಗಳನ್ನು ಖದೀಮರು ಎಗರಿಸಿರುವ ಘಟನೆ ಬೆಂಗಳೂರಿನ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಸಂಜಯ್ ಕುಮಾರ್ ವಿಜ್ಞಾನ ನಗರದ ಹೆಚ್ಡಿಎಫ್ಸಿ ಬ್ಯಾಂಕಿನಿಂದ ನಾಲ್ಕು ಲಕ್ಷ ರೂ. ಡ್ರಾ ಮಾಡಿಕೊಂಡು ಬಂದಿದ್ದಾರೆ. ಇದನ್ನು ಕಂಡ ಖದೀಮರಿಬ್ಬರು ಸಂಜಯ್ ಕುಮಾರ್ ಅವರನ್ನು ಹಿಂಬಾಲಿಸಿದ್ದಾರೆ. ಸಂಜಯ್ ಕುಮಾರ್ ವಿಜ್ಞಾನ ನಗರ ಮುಖ್ಯ ರಸ್ತೆಯಲ್ಲಿರುವ ಹಾರ್ಡ್ ವೇರ್ ಕಂಪನಿಗೆ ಹಣ ನೀಡಲು ಹೋಗಿದ್ದಾರೆ.
ಅವರು 50 ಸಾವಿರ ರೂ. ಕೊಟ್ಟು ಬರುವಷ್ಟರಲ್ಲಿ ಖದೀಮರು ಮೊಪೆಡ್ನಲ್ಲಿದ್ದ 3.50 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ವಿರುದ್ಧ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.