ಮುಂಗಾರು ಅಬ್ಬರ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

Public TV
1 Min Read

ಉಡುಪಿ/ಮಂಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ನಿನ್ನೆ ಆರಂಭವಾದ ಮಳೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮುಂಜಾನೆಯಿಂದ ಗಾಳಿ ಸಹಿತ ಮಳೆಯಾಗಿತ್ತಿದ್ದು, ಇನ್ನೆರಡು ದಿನ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಬೆನ್ನಲ್ಲಿ ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ನಿನ್ನೆಯಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಇಂದು ವಿಪರೀತ ಮಳೆ ಬೀಳುತ್ತಿದ್ದು, ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಅವರು ಒಂದು ದಿನ ರಜೆ ಘೋಷಿಸಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಎರಡು ದಿನ ರಜೆ ನೀಡಿದ್ದು, ಸಂಜೆಯ ನಂತರ ಮಳೆ ಕಡಿಮೆಯಾಗದಿದ್ದರೆ ಉಡುಪಿಯಲ್ಲೂ ರಜೆ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಶಾಲಾ ಕಾಲೇಜಿನ ವಿದ್ಯಾರ್ಥಿಗಳು ರಜೆ ಘೋಷಣೆಗೆ ಮುನ್ನವೇ ಮನೆಯಿಂದ ಹೊರಟಿದ್ದರು. ಶಾಲೆ ತಲುಪುತ್ತಿದ್ದಂತೆ ರಜೆ ಘೋಷಣೆಯಾಗಿದ್ದು, ಮಳೆಯಲ್ಲಿಯೇ ಬಂದಿದ್ದ ಮಕ್ಕಳು ನೆನೆದುಕೊಂಡೇ ಮನೆ ಸೇರುವಂತಾಯಿತು. ಪುಟ್ಟ ಮಕ್ಕಳನ್ನು ಕರೆದೊಯ್ಯಲು ಪೋಷಕರು ಪರದಾಡುವಂತಾಗಿದೆ. ಶಿಕ್ಷಕರು ಆತಂಕದಲ್ಲೇ ಮಕ್ಕಳನ್ನು ಶಾಲೆಯಿಂದ ಕಳುಹಿಸಿಕೊಟ್ಟರು.

ಮಕ್ಕಳು ಮನೆಯಿಂದ ಹೊರಡುವ ಮೊದಲೇ ರಜೆ ಕೊಡಬೇಕು. ಶಾಲೆ ತಲುಪಿದ ನಂತರ ರಜೆ ಕೊಟ್ಟರೆ ಮಕ್ಕಳಿಗೂ ಕಷ್ಟ, ಪೋಷಕರಿಗೂ ಆತಂಕ. ಹವಾಮಾನ ಇಲಾಖೆ ನಾಲ್ಕು ದಿನ ಮಳೆಯಾಗುತ್ತದೆ ಅಂತ ಮೊದಲೇ ವರದಿ ನೀಡಿದೆ. ಮುಂದಿನ ದಿನಗಳಲ್ಲಾದರೂ ಈ ಬಗ್ಗೆ ಜಿಲ್ಲಾಡಳಿತ ಚಿಂತನೆ ಮಾಡಬೇಕು ಎಂದು ಸಮಾಜ ಸೇವಕ ನಿತ್ಯಾನಂದ ಹೇಳಿದ್ದಾರೆ.

ಇತ್ತ ಅರಬ್ಬೀ ಸಮುದ್ರ ಅಬ್ಬರಿಸುತ್ತಿದೆ. ಮೀನುಗಾರರಿಗೂ ಕಡಲಿಗಿಳಿಯದಂತೆ ಸೂಚಿಸಲಾಗಿದೆ. ಈಗಾಗಲೇ ಆಳಸಮುದ್ರ ಮೀನುಗಾರಿಕೆ ಸ್ಥಗಿತಗೊಂಡಿದ್ದು, ನಾಡದೋಣಿ ಮೀನುಗಾರರಿಗೆ ಜಾಗರೂಕರಾಗಿರುವಂತೆ ಮುನ್ಸೂಚನೆ ಕೊಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದ್ದು, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಜಡಿ ಮಳೆ, ಮಂಗಳೂರು ನಗರದಲ್ಲಿ ತುಂತುರು ಮಳೆ ಸುರಿಯುತ್ತಿದೆ. ಹೊಳೆ, ನದಿಗಳು ತುಂಬಿ ಹಯಿಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ, ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *