ನೀರು ಕುಡಿಯಲು ಹೋಗಿ ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆ ಸೇರಿತು ಕೋತಿ!

Public TV
1 Min Read

ಧಾರವಾಡ: ಜಿಲ್ಲೆಯಲ್ಲಿ ಈ ಬಾರಿ ಎಲ್ಲಿ ನೋಡಿದ್ರೂ ಬಿರುಕು ಬಿಟ್ಟ ಭೂಮಿ, ನೆತ್ತಿಯ ಮೇಲೆ ಮೈಸುಡುವ ಬಿಸಿಲು, ಎಲ್ಲಿ ನೋಡಿದ್ರು ಬತ್ತಿ ಹೋದ ಕೆರೆ ಕಟ್ಟೆಗಳು. ಜಿಲ್ಲೆಯಾದ್ಯಂತ ಕುಡಿಯುವ ನೀರಿಗಾಗಿ ಹಾಹಾಕಾರ. ಈ ನಡುವೆ ನೀರಿಗಾಗಿ ಕಾಡಿನಿಂದ ನಾಡಿಗೆ ಬಂದ ಕೋತಿಯೊಂದು ನೀರು ಕುಡಿಯುತ್ತಿದ್ದ ವೇಳೆ ನಾಯಿ ಕಚ್ಚಿ ಆಸ್ಪತ್ರೆ ಸೇರಿದೆ.

ಕಳೆದ 5 ದಿನಗಳ ಹಿಂದೆ ಕೋತಿ ಬಾಲಕ್ಕೆ ಹಾಗೂ ಮೈಗೆ ನಾಯಿ ಕಚ್ಚಿದ್ದರ ಪರಿಣಾಮ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿರೋದನ್ನು ಕಂಡು ಧಾರವಾಡ ಲಕ್ಷ್ಮಿನಗರ ನಿವಾಸಿಯೊಬ್ಬರು ಸ್ನೇಕ್ ಎಲ್ಲಪ್ಪನವರಿಗೆ ಈ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಎಲ್ಲಪ್ಪ, ಕೋತಿಯನ್ನು ಕೃಷಿ ವಿವಿಯ ಪಶು ಚಿಕಿತ್ಸಾಲಯಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿದ್ದ ಈ ಕೋತಿಗೆ ಆಸ್ಪತ್ರೆ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದಾರೆ. ಕೋತಿಯ ಬಾಲದ ಗಾಯ ಹೆಚ್ಚಾಗಿದ್ದರಿಂದ ಬಾಲವನ್ನ ಕಡಿದು ಹಾಕಲಾಗಿದೆ. ಇನ್ನುಳಿದಂತೆ ಮೈಮೇಲೆ ಇದ್ದ ಗಾಯಗಳಿಗೆ ಕೂಡಾ ಔಷಧ ಹಚ್ಚಿದ ವೈದ್ಯರು, ಕೃಷಿ ವಿವಿಯ ಪಶು ಆಸ್ಪತ್ರೆಯಲ್ಲಿ ಕೋತಿಯನ್ನು ಒಳ ರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. 4 ದಿನಗಳ ಕಾಲ ಇಲ್ಲೇ ಔಷಧೋಪಚಾರ ಪಡೆಯಲಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡ ನಂತರ ಕೋತಿಯನ್ನು ಮತ್ತೇ ಕಾಡಿನಲ್ಲಿ ಬಿಡುವುದಾಗಿ ಕೃಷಿ ವಿವಿ ಪಶು ಚಿಕಿತ್ಸೆಯ ವೈದ್ಯರಾದ ಎಎಸ್ ಪಾಟೀಲ್ ತಿಳಿಸಿದ್ದಾರೆ.

ಇಂತಹ ಬಿಸಿಲಿಗೆ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳು ಕೂಡಾ ನೀರಿನ ದಾಹ ತಿರಿಸಿಕೊಳ್ಳಲು ಬಂದು ಇಕ್ಕಟ್ಟಿಗೆ ಸಿಲುಕುತ್ತಿವೆ. ಸದ್ಯ ಪ್ರಾಣಿ ಪ್ರಿಯರೊಬ್ಬರು ಈ ಕೋತಿಗೆ ಪ್ರಾಣ ಉಳಿಸಿ ಪುಣ್ಯ ಕಟ್ಟಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *