ದೇವೇಗೌಡರೇ ಕರ್ನಾಟಕದ ಜನತೆಗೆ ಉತ್ತರ ನೀಡಿ: ಪ್ರಧಾನಿ ಮೋದಿ

Public TV
1 Min Read

ಹೈದರಾಬಾದ್: ಜಮ್ಮು-ಕಾಶ್ಮೀರದಲ್ಲಿ ದೇಶ ಇಬ್ಭಾಗ ಮಾಡಲು ಪ್ರಯತ್ನಿಸುತ್ತಿರುವ ನ್ಯಾಷನಲ್ ಕಾನ್ಫರೆನ್ಸ್(ಎನ್‍ಸಿ) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ. ಕರ್ನಾಟಕದಲ್ಲಿ ಅದೇ ಕಾಂಗ್ರೆಸ್ ಜೊತೆ ಮಾಜಿ ಪ್ರಧಾನಿ ದೇವೇಗೌಡರು ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ದೇಶ ಇಬ್ಭಾಗದ ಮಾತನಾಡುತ್ತಿರುವರ ನಿಮ್ಮ ಮೈತ್ರಿಯ ಪಕ್ಷದ ಬಗ್ಗೆ ನಿಮ್ಮ ನಿಲುವು ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹಿಸಿದ್ದಾರೆ.

ತೆಲಂಗಾಣದ ಸಿಕಂದರಾಬಾದ್ ನಲ್ಲಿ ನಡೆದ ಬಿಜೆಪಿ ಸಮಾವೇಶದದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇವೇಗೌಡಜೀ, ನೀವು ದೇಶದ ಮಾಜಿ ಪ್ರಧಾನಿಗಳು. ನಿಮ್ಮ ಪುತ್ರ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಕರ್ನಾಟಕದಲ್ಲಿ ದೇವೇಗೌಡರ ಕುಟುಂಬಸ್ಥರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ನಿಮ್ಮ ಮೈತ್ರಿ ಪಕ್ಷ ಎನ್‍ಸಿ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆಂದು ಹೇಳುತ್ತಿದೆ. ಈ ಬಗ್ಗೆ ದೇವೇಗೌಡರೇ ಚುನಾವಣೆ ಪ್ರಚಾರದ ವೇಳೆ ತಮ್ಮ ನಿಲುವು ಏನು ಎನ್ನುವುದನ್ನು ಕರ್ನಾಟಕದ ಜನತೆಗೆ ತಿಳಿಸಬೇಕೆಂದು ಒತ್ತಾಯಿಸಿದರು.

ತೆಲಂಗಾಣದ ನೆರೆಯ ಆಂಧ್ರದಲ್ಲಿ ಯೂಟರ್ನ್ ಬಾಬು ಅಂತ ಒಬ್ಬರಿದ್ದಾರೆ. ಇದೇ ಯೂಟರ್ನ್ ಬಾಬು ಎರಡು ದಿನಗಳ ಹಿಂದೆ ಎನ್‍ಸಿ ಮುಖ್ಯಸ್ಥ ಫಾರೂಖ್ ಅಬ್ದುಲ್ಲಾ ಜೊತೆ ದೊಡ್ಡ ದೊಡ್ಡ ಶಾಲು ಧರಿಸಿ ರ್ಯಾಲಿಯಲ್ಲಿ ಭಾಗಿಯಾಗಿ ತಿರುಗಾಡಿದ್ದರು. ಚಂದ್ರಬಾಬು ನಾಯ್ಡುರನ್ನು ಜೊತೆಯಾಗಿ ನಿಲ್ಲಿಸಿಕೊಂಡು ಫಾರೂಖ್ ಅಬ್ದುಲ್ಲಾ ಮತ ಕೇಳುತ್ತಿದ್ದಾರೆ. ಈ ಫಾರೂಖ್ ಅಬ್ದುಲ್ಲಾ ಪುತ್ರ ಓಮರ್ ಅಬ್ದುಲ್ಲಾ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕೆಂದು ಕೇಳುತ್ತಾರೆ. ಇಂತಹ ಚಂದ್ರಬಾಬುವಿಗೆ ನೀವು ವೋಟ್ ಹಾಕ್ತೀರಾ ಎಂದು ಪ್ರಶ್ನಿಸಿದರು.

ಎನ್‍ಸಿಪಿಯ ಓರ್ವ ನಾಯಕ ಪಾಕಿಸ್ತಾನ ಘೋಷಣೆ ಕೂಗುತ್ತಾರೆ. ಇಂತಹ ವ್ಯಕ್ತಿಗಳ ಜೊತೆಗೆ ಮೈತ್ರಿ ಮಾಡಿಕೊಂಡ ನಾಯಕರು ದೇಶದ ಜನತೆಗೆ ಸ್ಪಷ್ಟನೆ ನೀಡಬೇಕು. ಶರದ್ ಪವಾರ್ ಹಿರಿಯ ನಾಯಕರಾಗಿದ್ದು, ಮುಖ್ಯಮಂತ್ರಿ ಮತ್ತು ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿಮ್ಮ ಮೈತ್ರಿ ಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕೆಂದು ಮೋದಿ ಆಗ್ರಹಿಸಿದರು.

Share This Article
Leave a Comment

Leave a Reply

Your email address will not be published. Required fields are marked *