ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ: ಸಿಎಂ ಆಕ್ರೋಶ

Public TV
1 Min Read

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಕುಮ್ಮಕ್ಕಿನಿಂದಲೇ ಬಾದಾಮಿಯಲ್ಲಿ ಐಟಿ ದಾಳಿ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಾಳಿಯನ್ನು ಉಗ್ರವಾಗಿ ಖಂಡಿಸುತ್ತೇನೆ. ದಾಳಿಗಳನ್ನು ಮಾಡಿಸಿ ನನ್ನ ಹೆದರಿಸೋಕೆ ಸಾಧ್ಯವಿಲ್ಲ. ನನಗೆ ಯಾವ ಹೆದರಿಕೆಯು ಇಲ್ಲ. ಚುನಾವಣಾ ಸಮಯದಲ್ಲಿ ಕೇಂದ್ರ ಸಂಸ್ಥೆಗಳನ್ನು ದುರುದ್ದೇಶದಿಂದ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಪಕ್ಷದ ನಾಯಕರುಗಳು ಇಳಿದುಕೊಂಡಿರುವ ಕಡೆ ಏನಕ್ಕೆ ದಾಳಿ ಮಾಡುತ್ತಿಲ್ಲ. ಕಾಂಗ್ರೆಸ್ ನವರ ಮೇಲಷ್ಟೆ ದಾಳಿಮಾಡುತ್ತಾರೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.

ರೆಸಾರ್ಟ್ ನಲ್ಲಿ ಉಳಿದುಕೊಂಡು ಬಂದು ನಾಲ್ಕು ದಿನವಾದ ಮೇಲೆ ದಾಳಿಮಾಡುತ್ತಾರೆ. ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ? ಈಗ ಅಲ್ಲಿ ಹಣ ಸಿಕ್ಕಿತು ಅಂತಾರೆ. ಮೊದಲನೆಯದಾಗಿ ನಾನೂ ಆ ರೂಮಿನಲ್ಲಿ ಇರಲಿಲ್ಲ. ಚುನಾವಣೆ ವೇಳೆ ಈ ದಾಳಿಗಳು ರಾಜಕೀಯ ಪ್ರೇರಿತವಲ್ಲದೆ ಇನ್ನೇನು? ಬಿಜೆಪಿಗೆ ಸೋಲಿನ ಭೀತಿ ಕಾಡುತ್ತಿದೆ. ಇದರಿಂದ ವಾಮಮಾರ್ಗದಲ್ಲಿ ನಮ್ಮನ್ನ ಎದರಿಸಲು ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿಯವರು ಜಾರಿ ನಿರ್ದೇಶನಾಲಯ(ಇಡಿ)ಯವನ್ನು ದುರುಪಯೋಗ ಪಡಿಸಿಕೊಳ್ಳಲಿ. ಐಟಿ ಯನ್ನಾದರೂ ದುರುಪಯೋಗ ಮಾಡಿಕೊಳ್ಳಲಿ. ಜನ ನನ್ನ ಪರವಾಗಿದ್ದಾರೆ. ಈ ದಾಳಿಗಳಿಂದ ಅನುಕೂಲವಾಗುತ್ತದೆ ಎಂದು ಬಿಜೆಪಿ ಅಂದುಕೊಂಡರೆ ಅವರಂತ ಮೂರ್ಖರಿಲ್ಲ ಎಂದು ಲೇವಡಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *