ಇನ್ನು ಮುಂದೆ ಡೇಟಾ ಅಗ್ಗವಲ್ಲ – ಡಿಸೆಂಬರ್‌ನಿಂದ ಏರಿಕೆ ಆಗುತ್ತೆ ದರ

Public TV
2 Min Read

ನವದೆಹಲಿ: ಇಲ್ಲಿಯವರೆಗೆ ಅಗ್ಗವಾಗಿ ಡೇಟಾ ಬಳಸುತ್ತಿದ್ದವರಿಗೆ ಶಾಕಿಂಗ್ ನ್ಯೂಸ್. ಡಿಸೆಂಬರ್ ಆರಂಭದಿಂದ ಟೆಲಿಕಾಂ ಕಂಪನಿಗಳು ಡೇಟಾ ಮತ್ತು ಕರೆ ದರಗಳನ್ನು ಏರಿಸಲು ಮುಂದಾಗಿವೆ.

ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸಲು ಸಿದ್ಧತೆ ನಡೆಸಿವೆ.

ವೊಡಾಫೋನ್ ಐಡಿಯಾ, ಏರ್ಟೆಲ್ ಸೋಮವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿವೆ. ಇದನ್ನೂ ಓದಿ: ರಿಲಯನ್ಸ್ ಕಮ್ಯೂನಿಕೇಷನ್ ನಿರ್ದೇಶಕ ಹುದ್ದೆಗೆ ಅನಿಲ್ ಅಂಬಾನಿ ರಾಜೀನಾಮೆ

 

ಟೆಲಿಕಾಂ ಕ್ಷೇತ್ರದ ತಜ್ಞರ ಪ್ರಕಾರ ಶೇ.30-40  ರಷ್ಟು ದರ ಏರಿಕೆಯಾಗುವ ಸಾಧ್ಯತೆಯಿದೆ. ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದೆ.

ವಿಶ್ವದಲ್ಲಿ ಈಗ ಭಾರತದಲ್ಲಿ ಅತಿ ಕಡಿಮೆ ದರದಲ್ಲಿ ಡೇಟಾ ಲಭ್ಯವಿದೆ. ಜಿಯೋಗೆ ಸ್ಪರ್ಧೆ ನೀಡಲು ಡೇಟಾ ಮತ್ತು ಕರೆ ದರವನ್ನು ಕಡಿತಗೊಳಿಸಿದ ಪರಿಣಾಮ ಟೆಲಿಕಾಂ ಕಂಪನಿಗಳು ಭಾರೀ ನಷ್ಟಕ್ಕೆ ತುತ್ತಾಗಿವೆ.

ವೊಡಾಫೋನ್ ಐಡಿಯಾ ಸೆಪ್ಟೆಂಬರಿಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ 50,921 ರೂ. ಕೋಟಿಗಳಷ್ಟು ನಷ್ಟ ದಾಖಲಿಸಿದ್ದರೆ, ಭಾರ್ತಿ ಏರ್ಟೆಲ್ 23,045 ಕೋಟಿ ರೂ. ನಷ್ಟ ಅನುಭವಿಸಿದೆ. ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತರಂಗಾಂತರ ಬಳಕೆ ಮತ್ತು ಲೈಸೆನ್ಸ್ ಶುಲ್ಕವನ್ನು ದಂಡ, ಬಡ್ಡಿ ಜತೆ ಪಾವತಿಸಬೇಕಿದೆ. ತಮ್ಮ ಆದಾಯದ ಬಹಭಾಗವನ್ನು ಪ್ರತ್ಯೇಕವಾಗಿ ತೆಗೆದಿರಿಸಿದ ಪರಿಣಾಮ ಟೆಲಿಕಾಂ ಕಂಪನಿಗಳ ನಷ್ಟ ಭಾರೀ ಏರಿಕೆಯಾಗಿದೆ. ಶುಲ್ಕ ಮತ್ತು ದಂಡ ಪಾವತಿಸುವಂತೆ ಸುಪ್ರೀಂಕೋರ್ಟ್ ತೀರ್ಪು ಪರಾಮರ್ಶೆಗೆ ಅರ್ಜಿ ಸಲ್ಲಿಸಲು ವೊಡಾಫೋನ್ ಸಿದ್ಧತೆ ನಡೆಸುತ್ತಿದೆ.

ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿತ್ತು. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಲಾಗಿದೆ.

ಭಾರತಿ ಏರ್ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯೂನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2,098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2,537 ಕೋಟಿ ರೂ. ಪಾವತಿಸಬೇಕಾಗಿದೆ.  ಇದನ್ನೂ ಓದಿ: ಹೃದಯ ತುಂಬಿ ಬಂತು – ಜೈಲು ಶಿಕ್ಷೆಯಿಂದ ಪಾರು ಮಾಡಿದ ಅಣ್ಣನಿಗೆ ಅನಿಲ್ ಅಂಬಾನಿ ಧನ್ಯವಾದ

ಏನಿದು ಎಜಿಆರ್?
ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *