ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ (MM Hills Forest) 5 ಹುಲಿಗಳು ವಿಷಪ್ರಾಶನಕ್ಕೆ ಬಲಿ ಆಗಿರುವುದು ಇಡೀ ರಾಜ್ಯದಲ್ಲಿ ವನ್ಯಜೀವಿಗಳ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿಸಿವೆ. ಈಗಾಗಲೇ ಹಂತಕರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯದೊಂದಿಗೆ ಮಾನವ ಹಾಗೂ ವನ್ಯಜೀವಿ ಸಂಘರ್ಷದ ಪಾತ್ರವೂ ಕಂಡುಬಂದಿದೆ.
ಹೌದು. ಹುಲಿಗಳ ಸಂರಕ್ಷಣೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದೊಂದು ದಶಕದ ಅವಧಿಯಲ್ಲಿ ದೇಶದಲ್ಲಿನ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, 3,650ಕ್ಕೂ ಹೆಚ್ಚು ಹುಲಿಗಳು (Tigers) ಭಾರತದಲ್ಲಿವೆ ಎಂಬುದನ್ನು ಸಮೀಕ್ಷೆಗಳು ತಿಳಿಸಿವೆ. ವಿಶ್ವದ ಒಟ್ಟು ಹುಲಿಗಳಲ್ಲಿ ಶೇ 75ರಷ್ಟು ಭಾರತದಲ್ಲಿಯೇ ಇವೆ. ಹುಲಿ ಸಂರಕ್ಷಣೆಯ ಸಾಧನೆ ಮೂಲಕ ವಿಶ್ವದ ಗಮನಸೆಳೆದಿರುವ ದೇಶದಲ್ಲಿ ಮನುಷ್ಯನ ಹಸ್ತಕ್ಷೇಪದಿಂದಾಗಿ ಹುಲಿಗಳ ದಾರುಣ ಸಾವುಗಳೂ ಸಂಭವಿಸುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ, ಚಾಮರಾಜನಗರ ಜಿಲ್ಲೆಯ ಮೀಣ್ಯಂನ ಕಾಡಿನಲ್ಲಿ ಸಂಭವಿಸಿರುವ ಐದು ಹುಲಿಗಳ ಸಾವು.
ವನ್ಯಜೀವಿ ಮಾನವ ಸಂಘರ್ಷದ ಭಾಗವಾಗಿ ಪ್ರಾಣಿಗಳಿಗೆ ವಿಷವಿಕ್ಕುವುದು ಅವುಗಳನ್ನು ಹತ್ಯೆಗೈಯುವುದು ಹೊಸದೇನಲ್ಲ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಇಂತಹ ನೀಚ ಕೃತ್ಯಗಳನ್ನು ನೋಡುತ್ತಲೇ ಇರುತ್ತೇವೆ. ತಮ್ಮ ಜಾನುವಾರುಗಳನ್ನು ಕೊಂದು ಅದಕ್ಕೆ ವಿಷವಿಕ್ಕುವ ಮೂಲಕ ಆ ಪ್ರಾಣಿ (Animal) ಅಥವಾ ಮಾಂಸವನ್ನು ವನ್ಯಜೀವಿಗಳು ತಿಂದು ಮೃತಪಟ್ಟ ಘಟನೆಗಳು ಅನೇಕಬಾರಿ ಕರ್ನಾಟಕದಲ್ಲೇ ನಡೆದಿದೆ. ಆದ್ರೆ ಒಂದೇ ಬಾರಿ 5 ಹುಲಿಗಳು ಮೃತಪಟ್ಟಿರುವ ಘಟನೆ ದೇಶದಲ್ಲೇ ಮೊದಲಬಾರಿ ಆಗಿರುವುದರಿಂದ ಘಟನೆ ತೀವ್ರತೆ ಪಡೆದುಕೊಂಡಿದೆ. ಈ ಹೊತ್ತಿನಲ್ಲಿ ಹತ್ತಾರು ವರ್ಷಗಳಿಂದ ಇಂತಹ ಕೃತ್ಯಗಳು ನಡೆದಿದ್ದು, ಅವುಗಳನ್ನು ಒಂದು ಸುತ್ತು ಮೆಲುಕು ಹಾಕೋಣ. ಅದಕ್ಕೂ ಮುನ್ನ ಮಲೆ ಮದೇಶ್ವರ ಬೆಟ್ಟದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಹೇಗೆ ಎಂಬುದನ್ನೂ ತಿಳಿಯೋಣ..
ಬೆಟ್ಟದಲ್ಲಿ ಹುಲಿಗಳು ಸತ್ತಿದ್ದು ಹೇಗೆ?
ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ವಿಷ ಬೆರೆಸಿದ್ದ ಜಾನುವಾರುವಿನ ಕಳೇಬರ ತಿಂದು ದುರ್ಮರಣಕ್ಕೆ ಒಳಗಾಗಿವೆ. ಹುಲಿಗಳಿಗೆ ವಿಷಪ್ರಾಶನ ಮಾಡಿ ಕೊಂದಿರುವ ಆರೋಪದ ಮೇಲೆ ಹನೂರು ತಾಲ್ಲೂಕಿನ ಕೊಪ್ಪ ಗ್ರಾಮದ ಮೂವರು ಹಾಗೂ ಕೃತ್ಯಕ್ಕೆ ನೆರವು ನೀಡಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಅರಣ್ಯದೊಳಗೆ ಮೇಯುತ್ತಿದ್ದ ಹಸುವನ್ನು ಹುಲಿ ಕೊಂದು ಹಾಕಿರುವ ಘಟನೆಗೆ ಪ್ರತೀಕಾರದ ರೂಪದಲ್ಲಿ ದುಷ್ಕೃತ್ಯ ನಡೆದಿದ್ದು, ಹುಲಿ ತಿಂದು ಉಳಿಸಿದ್ದ ಕಳೇಬರಕ್ಕೆ ವಿಷ ಹಾಕಲಾಗಿದೆ. ಆ ವಿಷಪೂರಿತ ಕಳೇಬರವನ್ನು ತಿಂದು ಐದು ಹುಲಿಗಳೂ ಪ್ರಾಣಬಿಟ್ಟಿವೆ. ಹುಲಿಗಳ ಸಾವಿನ ಹಿಂದೆ ತಮಿಳುನಾಡಿನ ಜಾನುವಾರುಗಳ ಮಾಲೀಕರ ʻಸಗಣಿ ಮಾಫಿಯಾ’ದ ಪರೋಕ್ಷ ಪಾತ್ರ ಇರುವುದರ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೈಸೂರಿನಲ್ಲಿ ಆನೆಗಳಿಗೂ ವಿಷಪ್ರಾಶನ ನಡೆದಿತ್ತು
2003-04ರ ಸಂದರ್ಭದಲ್ಲಿ ಮೈಸೂರು ಮೃಗಾಲಯದಲ್ಲಿ ಆತಂಕ ಮನೆ ಮಾಡಿತ್ತು. ಅಧಿಕಾರಿಗಳ ಪ್ರಾಮಾಣಿಕ ಕಾರ್ಯವನ್ನು ಸಹಿಸದ ಕೆಲವು ದುಷ್ಕರ್ಮಿಗಳು ಪ್ರಾಣಿಗಳನ್ನು ವಿಕೃತವಾಗಿ ಕೊಲ್ಲುವ, ಅವುಗಳಿಗೆ ವಿಷವಿಕ್ಕುವ ಕೃತ್ಯ ಎಸಗಿದ್ದರು. 2000 ಇಸವಿಗೂ ಮುನ್ನ ಮೈಸೂರು ಮೃಗಾಲಯ ಕೊಟ್ಟಿಗೆಯಂತಿತ್ತು. ನಂತರ ಮೃಗಾಲಯಕ್ಕೆ ಬಂದ ಅಧಿಕಾರಿ ಕುಮಾರ್ ಪುಷ್ಕರ್, ಮೃಗಾಲಯದ ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿಬಿಟ್ಟರು. ಹೆಚ್ಚು ಸಂಖ್ಯೆಯಲ್ಲಿದ್ದ ಜಿಂಕೆಗಳನ್ನ ಕಡಿಮೆ ಮಾಡಿ ಜನರಿಗೆ ಅಗತ್ಯವಿರುವಷ್ಟನ್ನು ಮಾತ್ರ ಪ್ರದರ್ಶನಕ್ಕಿಡುವಂತೆ ಮಾಡಿದರು. ಸಿಬ್ಬಂದಿಗೆ ದಿನವಿಡೀ ಕೆಲಸ ಕೊಟ್ಟರು. ಇದನ್ನು ಸಹಿಸದ ಕೆಲವರು ಎಮು ಪಕ್ಷಿಯ ಕುತ್ತಿಗೆ ಕತ್ತರಿಸಿ ಹಾಕಿದ್ದರು. ಇದಾದ ಕೆಲ ದಿನಗಳಲ್ಲೇ ಹಂದಿಯನ್ನ ಕೊಂದು ಕಾಡೆಮ್ಮೆ ಕೋಣೆಯ ಮುಂದೆ ಬಿಸಾಡಿದ್ದರು, ಕಾಡೆಮ್ಮೆಯೆ ಕೊಂದಿದೆ ಎಂದು ಹಬ್ಬಿಸಿದ್ದರು. ಘಟನೆ ಬಳಿಕ ಪುಷ್ಕರ್ ಅವರನ್ನ ವರ್ಗಾವಣೆ ಮಾಡಲಾಗಿತ್ತು. ಆ ಜಾಗಕ್ಕೆ ಮನೋಜ್ ಕುಮಾರ್ ಅವರನ್ನು ನೇಮಕ ಮಾಡಲಾಯಿತು. ಕೆಲವೇ ದಿನಗಳಲ್ಲಿ ಆನೆಯೊಂದು ಸಾವಿಗೀಡಾಯಿತು. ಕಿಡಿಗೇಡಿಗಳು ಜಿಂಕ್ ಪಾಸ್ಪೆಟ್ ತಿನಿಸಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾತಿತು. ಧೈರ್ಯಗೆಡದ ಮನೋಜ್ ಕೆಲಸ ಮುಂದುವರಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಮತ್ತೆರಡು ಆನೆಗಳನ್ನು ಕೊಲ್ಲಲಾಯಿತು. ಅವುಗಳಿಗೂ ವಿಷಪ್ರಾಶನ ಮಾಡಿಸಲಾಗಿತ್ತು. ಸತ್ತ ಆನೆಗಳಲ್ಲಿ ಒಂದನ್ನು ವಿದೇಶಕ್ಕೆ ಕಳುಹಿಸಲು ರಾಷ್ಟ್ರಪತಿ ಕಚೇರಿಯಿಂದ ಆಯ್ಕೆ ಮಾಡಲಾಗಿತ್ತು. ಮುಂದೆ ಕಣ್ಣೊರೆಸುವ ತಂತ್ರಗಾರಿಕೆ ಭಾಗವಾಗಿ ತನಿಖೆ ನಡೆಯಿತು. ಆದ್ರೆ ಅದರಿಂದ ಏನಾಯಿತು ಅನ್ನೋ ಕಾರಣ ಮಾತ್ರ ಹೊರಗೆ ಬರಲೇ ಇಲ್ಲ.
ಯಾವ-ಯಾವ ವರ್ಷ ಎಲ್ಲೆಲ್ಲಿ ಹುಲಿ ಸಾವು?
2013: ಆ ವರ್ಷದ ಜನವರಿ 13ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ ಕುಪ್ಪೆ ವಲಯದ ಮಾಸ್ತಿಗುಡಿ ಬೀಟ್ನ ತಡಿಕೆಹಳ್ಳದ ಕಬಿನಿ ಹಿನ್ನೀರು ಪ್ರದೇಶದಲ್ಲಿ 4-5 ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿತ್ತು. ಮೈಮೇಲೆ ಯಾವುದೇ ಗಾಯದ ಗುರುತುಗಳೂ ಇರಲಿಲ್ಲ ಮತ್ತು ಅದರ ಅಂಗಾಂಗಗಳು ಸುರಕ್ಷಿತವಾಗಿದ್ದವು. ಬಳಿಕವೇ ಅದು ವಿಷಪ್ರಾಶನದಿಂದ ಮೃತಪಟ್ಟಿದೆ ಎಂಬುದು ಗೊತ್ತಾಯಿತು.
2013ರ ಅದೇ ವರ್ಷ ಫೆ.16ರಂದು ಮೇಟಿಕುಪ್ಪೆ ವಲಯದ ಸೊಳ್ಳೇಪುರ ಹಾಡಿಯ ಬಳಿ ಹೆಣ್ಣು ಹುಲಿಯೊಂದು ಮೃತಪಟ್ಟಿತ್ತು. ಉರುವಲು ತರಲು ಹೋದ ಜನರು ಅದನ್ನ ನೋಡಿ ಅರಣ್ಯ ಇಲಾಖೆಗೆ ತಿಳಿಸಿದ್ದರು. ಹುಲಿ ಕಳೇಬರ ಸಿಕ್ಕಿದ್ದರ ಸಮೀಪದಲ್ಲಿ ಹಸುವಿನ ಕಳೇಬರ ಕೂಡ ಸಿಕ್ಕಿತ್ತು. ಕೊನೆಗೆ ವಿಷಪ್ರಾಶನದಿಂದ ಮೃತಪಟ್ಟಿರುವುದು ಗೊತ್ತಾಗಿ ಬೊಮ್ಮಲಾಪುರ ರೈತರೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ಆಗ ಹಸುಗಳನ್ನು ಸಾಕಿಕೊಂಡು ಬದುಕುತ್ತಿದ್ದೇವೆ. ಹುಲಿಗಳ ಹಾವಳಿ ಇದ್ದರೂ ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಸಾಕು ಪ್ರಾಣಿಗಳನ್ನು ಕೊಂದು ತಿಂದರೆ ನಾವು ಬದುಕುವುದು ಹೇಗೆ? ಎಂದು ಪ್ರಶ್ನೆ ಮಾಡಿದ್ದರು.
2014: 2014ರ ಜನವರಿ 26ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಓಂಕಾರ ಅರಣ್ಯ ಪ್ರದೇಶದಲ್ಲಿ ಗಂಡು ಚಿರತೆಯನ್ನು ವಿಷವಿಕ್ಕಿ ಕೊಲ್ಲಲಾಗಿತ್ತು. ಈ ಸಂಬಂಧ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆಲತ್ತೂರು ಗ್ರಾಮದಲ್ಲಿ ಚಿರತೆ ಹಸುವಿನ ಮಾಂಸಕ್ಕೆ ವಿಷ ಹಾಕಿದ್ದಾರೆ ಅದರ ಮಾಂಸ ತಿಂದ ಕಾರಣ ಚಿರತೆ ಮೃತಪಟ್ಟಿತ್ತಯ ಎಂಬ ಆರೋಪ ಕೇಳಿಬಂದಿತ್ತು.
2016: 2016ರ ಜುಲೈ 12ರಂದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ಅರಣ್ಯ ಪ್ರದೇಶದ ವ್ಯಾಪ್ತಿಯ ಗುಂಡ್ಲುಪೇಟೆ ಹಂಚಿಪುರ ಗ್ರಾಮದ ಜಮೀನಿನಲ್ಲಿ ಕಪ್ಪು ಚಿರತೆ ಸೇರಿ ಎರಡು ಚಿರತೆ ಸಾವನ್ನಪ್ಪಿದ್ದವು. ಚಿರತೆ ಒಂದು ನಾಯಿಯನ್ನು ಕೊಂದಿತ್ತು. ಅದಕ್ಕೆ ವಿಷ ಹಾಕಲಾಗಿತ್ತು ಎಂದು ಹೇಳಲಾಗಿತ್ತು.
2023: 2023ರ ಜೂನ್ಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಮೂರು ವರ್ಷದ ಹೆಣ್ಣು ಚಿರತೆಯನ್ನು ವಿಷ ಹಾಕಿ ಕೊಲ್ಲಲಾಗಿತ್ತು.
2025: ಪ್ರಸಕ್ತ ವರ್ಷದ ಮಾರ್ಚ್ನಲ್ಲಿ ನಾಗರಹೊಳೆ ವ್ಯಾಪ್ತಿಯ ರಾಷ್ಟ್ರೀಯ ಉದ್ಯಾನವನದಲ್ಲಿ ಶೆಟ್ಟಿಹಳ್ಳಿ-ಲಕ್ಕಪಟ್ಟಣ ಅರಣ್ಯ ಪ್ರದೇಶದ ಬಳಿ ಹಾರಂಗಿ ಸೇತುವೆ ಕೆಳಗೆ 5-6 ವರ್ಷದ ಹುಲು ಕಳೇಬರ ಪತ್ತೆಯಾಗಿತ್ತು. ಇದು ಕಿಡಿಗೇಡಿಗಳಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆದ್ರೆ ಈವರೆಗೆ ಇದರ ತನಿಖಾ ವರದಿ ಹೊರಬಂದಿಲ್ಲ.
13 ವರ್ಷಗಳಲ್ಲಿ 1,519 ಹುಲಿಗಳು ಸಾವು
2013ರಿಂದ ಈ ವರ್ಷ ಜೂನ್ 26ರ ವರೆಗೆ ದೇಶಾದ್ಯಂತ 1,519 ಹುಲಿಗಳು ಸಾವನ್ನಪ್ಪಿವೆ. ಈ ವರ್ಷ ಮೊದಲ ಆರೂವರೆ ತಿಂಗಳಲ್ಲೇ 103 ಹುಲಿಗಳು ಮೃತಪಟ್ಟಿವೆ. ಮಹಾರಾಷ್ಟ್ರದಲ್ಲಿ 28, ಮಧ್ಯಪ್ರದೇಶದಲಲಿ 26, ಅಸ್ಸಾಂನಲ್ಲಿ 10 ಹುಲಿಗಳು ಮೃತಪಟ್ಟರೆ, ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಸೇರಿದಂತೆ ಕರ್ನಾಟಕದ ಒಟ್ಟು 8 ಹುಲಿಗಳು ಮೃತಪಟ್ಟಿವೆ. ಇದಲ್ಲದೇ ಸಹಜ ಸಾವು, ಬೇಟೆ ಹೊರತುಪಡಿಸಿ ಅಸಹಜ ಸಾವು, ಮೂರ್ಛೆ ಅಥವಾ ಪಾರ್ಶ್ವವಾಯು, ಹೃದಯಾಘಾತ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ 4-5 ವರ್ಷಗಳಲ್ಲಿ ನೂರಾರು ಹುಲಿಗಳು ಸತ್ತಿವೆ.
ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ಹುಲಿಗಳು ಸಾವು?
2012 ರಿಂದ 2025ರ ಜೂನ್ ವರೆಗೆ
* ಮಧ್ಯಪ್ರದೇಶ – 392
* ಮಹಾರಾಷ್ಟ್ರ – 321
* ಕರ್ನಾಟಕ – 189
* ಉತ್ತರಾಖಂಡ – 140
* ತಮಿಳುನಾಡು – 96
* ಅಸ್ಸಾಂ – 95
* ಕೇರಳ – 86
* ಉತ್ತರ ಪ್ರದೇಶ- 71
* ರಾಜಸ್ಥಾನ – 41
* ಬಿಹಾರ – 22
ದೇಶಲ್ಲಿರುವ ಹುಲಿಗಳ ಸಂಖ್ಯೆ ಎಷ್ಟು?
ದೇಶದಲ್ಲಿ ಹುಲಿಗಳ ಸಾವು ಒಂದೆಡೆಯಾದ್ರೆ ಸೂಕ್ತ ಪರಿಸರ ವ್ಯವಸ್ಥೆಯಿಂದ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ. 2006ರಲ್ಲಿ ದೇಶದಲ್ಲಿ ಹುಲಿಗಳ ಸಂಖ್ಯೆ 1,411 ಇತ್ತು ಆಗ ಕರ್ನಾಟಕದಲ್ಲಿ 290 ಹುಲಿಗಳಿದ್ದವು. 2010ರಲ್ಲಿ ದೇಶದಲ್ಲಿ 1,706 ಈ ಪೈಕಿ ಕರ್ನಾಟಕದಲ್ಲಿ 300, 2014ರಲ್ಲಿ ದೇಶದಲ್ಲಿ 2,226 ಈ ಪೈಕಿ ಕರ್ನಾಟಕದಲ್ಲಿ 406, 2018ರಲ್ಲಿ ದೇಶದಲ್ಲಿ 2,967 ಈ ಪೈಕಿ ಕರ್ನಾಟಕದಲ್ಲಿ 524 ಹುಲಿಗಳಿದ್ದವು ಸದ್ಯ 2022ರ ಸಮೀಕ್ಷಾ ವರದಿ ಪ್ರಕಾರ ದೇಶದಲ್ಲಿ 3,682 ಹುಲಿಗಳಿದ್ದರೆ ಈ ಪೈಕಿ ಕರ್ನಾಟಕದಲ್ಲಿ 563 ಹುಲಿಗಳಿವೆ. ದೇಶದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದ್ದರೆಮ 785 ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶ ಅಗ್ರಸ್ಥಾನದಲ್ಲಿದೆ.
ಪರಿಸರ ವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ಹಲಿಗಳ ಪಾತ್ರ ಬಹುಮುಖ್ಯವಾಗಿದೆ. ಕಾಡಿನ ಬೇಟೆಗಾರನಾಗಿರುವ ಹುಲಿ ಮಾಂಸಾಹಾರಿ ಪ್ರಾಣಿಯಾಗಿದ್ದು, ಇತರ ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಪ್ರಾಕೃತಿಕ ಸಮತೋಲನವನ್ನೂ ಕಾಪಾಡುತ್ತದೆ. ಈಗಾಗಲೇ ಗಂಧದಗುಡಿ, ಮಾಸ್ತಿ ಗುಡಿ ಅಂತಹ ಸಿನಿಮಾಗಳಲ್ಲಿ ಹುಲಿಗಳ ಪ್ರಾಮುಖ್ಯತೆಯನ್ನು ಸಾರಲಾಗಿದೆ. ಈ ನಿಟ್ಟಿನಲ್ಲಿ ಹುಲಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ.