ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು – ಖರ್ಗೆ ಮಗನಿಗೂ ಮೀಸಲಾತಿ, ಇದು ಸರಿನಾ: ವಿಶ್ವನಾಥ್ ಪ್ರಶ್ನೆ

Public TV
2 Min Read

– ಸಿದ್ದರಾಮಯ್ಯ ಸಂತೋಷದಲ್ಲಿದ್ದಾಗ ಕುರುಬರನ್ನು ಒದ್ದಿದ್ದಾರೆ: ಎಂಎಲ್‌ಸಿ ಕಿಡಿ

ಮೈಸೂರು: ಉಳ್ಳವರು ಮೀಸಲಾತಿ ಬಿಟ್ಟು ಕೊಡಬೇಕು. ಉಳ್ಳವರಿಗೆ ಮೀಸಲಾತಿ ತೆಗೆದು ಹಾಕುವ ಕಾಯ್ದೆ ಸರ್ಕಾರ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H.Vishwanath) ಆಗ್ರಹಿಸಿದರು.

ಮೈಸೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ಮೂಲಕ ಮೇಲೆ ಬಂದವರು ಆ ಮೀಸಲಾತಿ ಬಿಟ್ಟು ಕೊಡಲಿ. ಖರ್ಗೆ ಮಗನಿಗೂ ಮೀಸಲಾತಿ, ಊರಲ್ಲಿ ತಮಟೆ ಹೊಡೆಯುವ ದಲಿತನಿಗೂ ಮೀಸಲಾತಿ. ವಿಶ್ವನಾಥ್ ಮಗನಿಗೂ ಮೀಸಲಾತಿ, ಕುರಿ ಕಾಯುವವನ ಮಗನಿಗೂ ಮೀಸಲಾತಿ. ಸಿದ್ದರಾಮಯ್ಯ ಮಗನಿಗೂ ಮೀಸಲಾತಿ, ಬಡ ಕುರುಬರಿಗೂ ಮೀಸಲಾತಿ. ಇದು ಸರಿನಾ ಹೇಳಿ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ: ಸುನಿಲ್ ಕುಮಾರ್ ಕಿಡಿ

ಬಾನು ಮುಷ್ತಾಕ್ ದಸರಾ ಉದ್ಘಾಟಿಸುವುದಕ್ಕೆ ಸ್ವಾಗತವಿದೆ. ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯದ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.

ಕುರುಬ ಸಮುದಾಯವನ್ನು ಸರ್ಕಾರ ಪ. ವರ್ಗಕ್ಕೆ ಸೇರಿಸಿದ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯ ಇದಕ್ಕೆ ಎಂದೂ ಪರವಾಗಿರಲಿಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾಗ ಈ ಪ್ರಕ್ರಿಯೆ ನಡೆದಿತ್ತು. ಕುಲ ಶಾಸ್ತ್ರೀಯ ಅಧ್ಯಯನವನ್ನು ಬೊಮ್ಮಾಯಿ ಸರ್ಕಾರ ಮಾಡಿತ್ತು. ಈಗಲೂ ಕಾನೂನು ಪ್ರಕಾರವಾಗಿ ಕೇಂದ್ರ ಸರ್ಕಾರಕ್ಕೆ ಈ ನಿರ್ಣಯವನ್ನು ರಾಜ್ಯ ಸರ್ಕಾರ ಕಳಿಸಿಲ್ಲ. ಸಿದ್ದರಾಮಯ್ಯಗೆ ಈಗ ಕಷ್ಟಕಾಲ. ಸಂತೋಷವಿದ್ದಾಗ ಕುರುಬರನ್ನು ಒದ್ದಿದ್ದಾರೆ. ಕಷ್ಟ ಬಂದಾಗ ಕುರುಬರ ನೆನಪಾಗಿದೆ. ಸಿಎಂ ಕುರ್ಚಿ ಹತ್ತಿರಕ್ಕೆ ಡಿಕೆ ಶಿವಕುಮಾರ್ ಬಂದಿದ್ದಾರೆ. ಹೀಗಾಗಿ ಕುರುಬರನ್ನು ತಮ್ಮ ರಕ್ಷಣೆಗೆ ಸಿದ್ದರಾಮಯ್ಯ ಕರೆಯುತ್ತಿದ್ದಾರೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ

ಕಾಗಿನೆಲೆ ಮಹಾಸಂಸ್ಥಾನ ಕಟ್ಟುವಾಗ ಸಿದ್ದರಾಮಯ್ಯ ಯಾವುದಕ್ಕೂ ಸಹಕಾರ ಕೊಡಲಿಲ್ಲ. ಕುರುಬ ಸಮುದಾಯದ ನಾಯಕತ್ವವನ್ನು ಸಿದ್ದರಾಮಯ್ಯ ತುಳಿದರು. ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಕೊಡುಗೆ ಶೂನ್ಯ. ನಾಯಕ ಸಮುದಾಯವನ್ನು ಎಸ್‌ಟಿಗೆ ಸೇರಿಸಿದ್ದು, ಹೆಚ್.ಡಿ.ದೇವೇಗೌಡರು. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಯಾವ ಸಹಾಯವೂ ಮಾಡಿಲ್ಲ. ಸಮ್ಮನೆ ಹಿಂದುಳಿದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಸಿದ್ದರಾಮಯ್ಯಗೆ ತಮ್ಮ ಮಗ ಬಿಟ್ಟರೆ ಇನ್ನೂ ಯಾರೂ ಕಾಣಿಸುತ್ತಿಲ್ಲ. ಕಾಗಿನೆಲೆ ಸ್ವಾಮೀಜಿಗಳೇ ನಿಮ್ಮನ್ನು ಸ್ವಾಮೀಜಿ ಮಾಡಿದ್ದು ಇದೇ ವಿಶ್ವನಾಥ್. ಸ್ವಾಮೀಜಿಗಳೆ ನಿಮ್ಮನ್ನು ಛೂ ಬಿಡುತ್ತಾರೆ. ನೀವು ಸಿದ್ದರಾಮಯ್ಯ ಪರ ಬೀದಿಗೆ ಬಂದರೆ ಹುಷಾರ್. ಅದು ಚೆನ್ನಾಗಿರಲ್ಲ. ಸ್ವಾಮೀಜಿಗಳೆ ನೀವು ಸಿದ್ದರಾಮಯ್ಯರ ಅಡಿಯಾಳು ಅಲ್ಲ. ಕಾಗಿನೆಲೆ ಸ್ವಾಮೀಜಿ ಸಿದ್ದರಾಮಯ್ಯ ಪರ ರಸ್ತೆಗೆ ಇಳಿದರೆ, ಸ್ವಾಮೀಜಿ ತಲೆದಂಡ ಮಾಡ್ತೀವಿ ಹುಷಾರ್. ಎಚ್ಚರಿಕೆ ಇರಲಿ ಸ್ವಾಮೀಜಿ. ಕಾಗಿನೆಲೆ ಪೀಠ ಸಿದ್ದರಾಮಯ್ಯನ ಪೀಠ ಅಲ್ಲ. ಅದು ಸಮುದಾಯ ಪೀಠ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಕುರುಬ ಸಮುದಾಯದ ಯುವಕರಿಗೆ ಒಂಥರ ಇಂಗ್ಲಿಷ್ ಸಿನಿಮಾ ಹೀರೋ ಥರ ಕಾಣುತ್ತಾರೆ. ಇಂಗ್ಲಿಷ್ ಸಿನಿಮಾ ಅರ್ಥ ಆಗದಿದ್ದರೂ ಶಿಳ್ಳೆ ಹೊಡೆದಂತೆ, ಸಿದ್ದರಾಮಯ್ಯ ಏನೂ ಮಾಡದಿದ್ದರೂ ಶಿಳ್ಳೆ ಹೊಡೆಯುತ್ತಾರೆ ಎಂದು ಲೇವಡಿ ಮಾಡಿದರು.

Share This Article