ಸಿದ್ದು ಸಂಪುಟಕ್ಕೆ ಫೈನಲ್ ಸರ್ಜರಿ: ಮೂವರಿಗೆ ಸಚಿವ ಸ್ಥಾನ ಸಿಗೋದರ ಹಿಂದೆ ಇರೋ ಲೆಕ್ಕಾಚಾರ ಏನು?

Public TV
1 Min Read

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ 6ನೇ ಸಂಪುಟ ವಿಸ್ತರಣೆಯಾಗಿದೆ. ಅಸಮಾಧಾನದ ನಡುವೆ ಸಿಎಂ ಅತ್ಯಾಪ್ತ ಎಚ್.ಎಂ.ರೇವಣ್ಣ, ಆರ್.ಬಿ. ತಿಮ್ಮಾಪೂರ್ ಅವರು ಸಂಪುಟ ದರ್ಜೆ ಮತ್ತು ಮಾಜಿ ಸಚಿವ ದಿವಂಗತ ಮಹದೇವ್ ಪ್ರಸಾದ್ ಪತ್ನಿ ಗೀತಾಪ್ರಸಾದ್ ಅವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

ಯಾರಿಗೆ ಯಾವ ಖಾತೆ?
ಎಚ್‍ಎಂ ರೇವಣ್ಣ ಅವರಿಗೆ ಸಾರಿಗೆ ಖಾತೆ ಸಿಕ್ಕಿದರೆ ರಾಮಲಿಂಗಾರೆಡ್ಡಿಗೆ ಗೃಹ ಖಾತೆಗೆ ಸಿಕ್ಕಿದೆ. ಆರ್.ಬಿ ತಿಮ್ಮಾಪುರ ಅವರಿಗೆ ಅಬಕಾರಿ ಸಿಕ್ಕಿದರೆ, ಸಕ್ಕರೆ ಮತ್ತು ಸಣ್ಣ ಕೈಗಾರಿಕಾ ಖಾತೆ ಗೀತಾ ಮಹದೇವ ಪ್ರಸಾದ್ ಅವರಿಗೆ ಸಿಕ್ಕಿದೆ.

ರಮೇಶ್ ಜಾರಕಿಹೊಳಿಗೆ ಸಹಕಾರ, ಸಂತೋಷ್ ಲಾಡ್ ಅವರಿಗೆ ಕಾರ್ಮಿಕ ಜೊತೆಗೆ ಕೌಶಲ್ಯ ಅಭಿವೃದ್ಧಿ ಇಲಾಖೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಪ್ರಿಯಾಂಕ ಖರ್ಗೆ, ಪ್ರಮೋದ್ ಮದ್ವರಾಜ್, ಈಶ್ವರ್ ಖಂಡ್ರೆ, ರುದ್ರಪ್ಪ ಲಮಾಣಿ ಅವರು ರಾಜ್ಯ ಸಚಿವ ದರ್ಜೆಯಿಂದ ಸಂಪುಟ ದರ್ಜೆಗೆ ಬಡ್ತಿ ಪಡೆದಿದ್ದಾರೆ.

ಮೂವರಿಗೆ ಮಂತ್ರಿ ಸ್ಥಾನ ಹಿಂದಿರೋ ರಾಜಕೀಯ ಏನು?
ಮೇಲ್ಮನೆ ಸದಸ್ಯರಾಗಿರುವ ಆರ್.ಬಿ ತಿಮ್ಮಾಪುರ ಅವರು ಉತ್ತರ ಕರ್ನಾಟಕದ ದಲಿತ ಸಮುದಾಯದ ಹಿರಿಯ ನಾಯಕ. ನರೇಂದ್ರಸ್ವಾಮಿ ಪರ ಸಿಎಂ ಒಲವಿದ್ದರೂ ಜಾತಿ ಲೆಕ್ಕಾಚಾರದಲ್ಲಿ ಮಣೆ ಹಾಕಿ ಮಂತ್ರಿ ಸ್ಥಾನ ಸಿಕ್ಕಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಎಡಗೈ ಸಮುದಾಯದವರಿಗೆ ಆದ್ಯತೆ ನೀಡಲು ಸಚಿವ ಸ್ಥಾನ ನೀಡಲಾಗಿದೆ.

ಮೇಲ್ಮನೆ ಸದಸ್ಯರಾಗಿರುವ ಎಚ್.ಎಂ. ರೇವಣ್ಣ ಕುರುಬ ಸಮುದಾಯದ ಸಂಘಟನೆಯಲ್ಲಿ ಹೆಚ್ಚಿನ ಪಾತ್ರವಿದೆ. ಎಚ್ ವೈ ಮೇಟಿಯಿಂದ ತೆರವಾದ ಸ್ಥಾನಕ್ಕೆ ರೇವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಎಚ್.ವಿಶ್ವನಾಥ್ ಪಕ್ಷ ತೊರೆದ ಮೇಲೆ ಸ್ವಸಮುದಾಯದವರಿಗೆ ಆದ್ಯತೆ ನೀಡಲು ಸಿಎಂ ಮಂತ್ರಿ ಸ್ಥಾನವನ್ನು ನೀಡಿದ್ದಾರೆ ಎನ್ನಲಾಗಿದೆ.

ಗೀತಾ ಮಹದೇವಪ್ರಸಾದ್ ಗುಂಡ್ಲುಪೇಟೆ ಶಾಸಕಿ ಆಗಿದ್ದು, ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಲಿಂಗಾಯತ ಸಮುದಾಯದವರಿಗೆ ಆದ್ಯತೆ ಮತ್ತು ಚುನಾವಣೆ ದೃಷ್ಠಿಯಿಂದ ಹಳೆ ಮೈಸೂರು ಭಾಗಕ್ಕೆ ಪ್ರಾಮುಖ್ಯತೆ ನೀಡುವ ಉದ್ದೇಶದಿಂದಾಗಿ ಸಿದ್ದರಾಮಯ್ಯ ಮಂತ್ರಿ ಭಾಗ್ಯವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

 

Share This Article
Leave a Comment

Leave a Reply

Your email address will not be published. Required fields are marked *