ಹಾವೇರಿ: ಮೈತ್ರಿ ಸರ್ಕಾರ ಬಿತ್ತು ಬಿತ್ತು ಎಂದು ಹೇಳುವುದು ಕನಸಿನ ಮಾತಾಗಿದ್ದು, ಐದು ವರ್ಷಗಳ ಕಾಲ ಮೈತ್ರಿ ಸರ್ಕಾರ ಸುಭದ್ರವಾಗಿರುತ್ತೆ. ಶಾಸಕರು ಯಾರು ರಾಜೀನಾಮೆ ನೀಡಲು ತಯಾರಿಲ್ಲ ಎಂದು ನೂತನ ಸಚಿವ ಆರ್ ಶಂಕರ್ ತಿಳಿಸಿದ್ದಾರೆ.
ಜಿಲ್ಲೆಯ ರಾಣೇಬೆನ್ನೂರು ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಹಿಂದೆ ನನ್ನನ್ನು ಸಂಪುಟದಿಂದ ಕೈ ಬಿಟ್ಟಾಗ ಸರ್ಕಾರ ರಚನೆಯ ಕಸರತ್ತು ನಡೆಯಿತು. ಆದರೆ ಸದ್ಯ ಯಾರು ರಾಜೀನಾಮೆ ನೀಡಲು ತಯಾರಿ ಇಲ್ಲ. ಅಲ್ಲದೇ ಸರ್ಕಾರ ರಚನೆಗೆ 16 ಶಾಸಕರು ರಾಜೀನಾಮೆ ನೀಡುವುದಂತು ಸಾಧ್ಯವಿಲ್ಲ. ನಾನು ಈ ಹಿಂದೆ ಸರ್ಕಾರದ ರಚನೆ ಯತ್ನಿಸಿದ ಸಂದರ್ಭದಲ್ಲಿ ನಾನು ಇದ್ದೆ. ಆದರೆ ಅದು ಆಗಲು ಸಾಧ್ಯವಿಲ್ಲ. ಪಕ್ಷಗಳಲ್ಲಿ ಅಸಮಾಧಾನ ಹೊಂದಿರುವ ಶಾಸಕರ ಮನವೊಲಿಸುವ ಪ್ರಯತ್ನ ಮಾಡುತ್ತೆವೆ ಎಂದರು.
ಈ ಬಾರಿ ಸಚಿವನಾಗಿದ್ದು, ಯಶಸ್ವಿಯಾಗಿ ನಿಭಾಯಿಸಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ. ನನ್ನಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಯಾವುದೇ ತಾರತಮ್ಯ ಮಾಡದೆ ಕ್ಷೇತ್ರದ ಎಲ್ಲಾ ಜನರ ಪರ ಕೆಲಸ ಮಾಡುತ್ತೇನೆ. ಎಲ್ಲರ ವಿಶ್ವಾಸ ತೆಗೆದುಕೊಂಡು ಮುಂದೆ ಹೋಗುತ್ತೇನೆ ಎಂದರು.
ರಾಜ್ಯದ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಸರ್ಕಾರ ಉಳಿಯಬೇಕು ಎಂಬುವುದು ನಮ್ಮ ಉದ್ದೇಶ, ನಾವು ಎಲ್ಲಿ ಬೇಕು ಅಲ್ಲಿಗೆ ಹೋಗುವ ಪರಿಸ್ಥಿತಿ ಇತ್ತು. ಪಕ್ಷೇತರರಾಗಿ ಗೆಲ್ಲುವುದು ಸುಲಭದ ಮಾತಲ್ಲ ಎಂದರು. ಈಗಾಗಲೇ ಐದು ಬಾರಿ ಗೆದ್ದ ಶಾಸಕರಿಗೆ, ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆ ವೈಯಕ್ತಿಕವಷ್ಟೇ ಎಂದರು.