ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಯನ್ನು ಸಮರ್ಥಿಸಿಕೊಂಡ ಜಮೀರ್

Public TV
2 Min Read

ಬೆಂಗಳೂರು: ಬುಧವಾರ ಬೆಂಗಳೂರಿನ ಸಾದಿಕ್ ನಗರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆಯನ್ನು ಶಾಸಕ ಜಮೀರ್ ಅಹಮದ್ ಅವರು ಸಮರ್ಥಿಸಿಕೊಂಡಿದ್ದಾರೆ.

ಇಂದು ಸಿಎಂ ಅವರ ಜೊತೆ ಸಭೆಯಲ್ಲಿ ಭಾಗಿಯಾಗಿದ್ದ ಜಮೀರ್ ಅಹಮದ್, ಬಳಿಕ ಹೊರಗೆ ಬಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಆಶಾ ಕಾರ್ಯಕರ್ತೆಯರಿಗೆ ಯಾರು ಅನುಮತಿ ಕೊಟ್ಟಿರುವುದು. ಸರ್ಕಾರದ ಅನುಮತಿ ಪಡೆದುಕೊಂಡು ಅವರು ಅಲ್ಲಿಗೆ ಹೋಗಿಲ್ಲ. ಅದಕ್ಕೆ ಹಲ್ಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ನಾನು ಕೂಡ ಘಟನೆ ನಡೆದ ಸ್ಥಳಕ್ಕೆ ಹೋಗಿ ಬಂದಿದ್ದೇನೆ. ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ಮಾಡಬೇಕು ಎಂದರೆ ಸರ್ಕಾರದ ಅನುಮತಿ ಪಡೆಯಬೇಕು. ಆದರೆ ಅವರು ಅಲ್ಲಿಗೆ ಹೆಲ್ತ್ ಚೆಕಪ್ ಮಾಡಲು ಹೋಗಿರಲಿಲ್ಲ. ಮನೆ ಮನೆಗೆ ಹೋಗಿ ಎಷ್ಟು ಜನ ಇದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾಗಿ ಇವರು ಎನ್.ಆರ್.ಸಿ ವಿಚಾರವಾಗಿ ಬಂದಿದ್ದಾರೆ ಎಂದು ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಜಮೀರ್ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನು ಓದಿ: ಬೆಂಗ್ಳೂರಿನಲ್ಲಿ ನರ್ಸ್, ಆಶಾ ಕಾರ್ಯಕರ್ತೆಯರ ಮೇಲೆ ಗ್ಯಾಂಗ್ ದಾಳಿ

ಇಂದು ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರು ಪರೀಕ್ಷೆ ಮಾಡಿಸಿಕೊಳ್ಳಲು ಮನವಿ ಮಾಡುವಂತೆ ಕೇಳಿ ಸಿಎಂ ಸಭೆ ಕರೆದಿದ್ದರು. ಅದಕ್ಕೆ ನಾವೆಲ್ಲ ಬಂದು ಬೆಂಬಲ ನೀಡಿದ್ದೇವೆ. ಪರೀಕ್ಷೆ ಮಾಡಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದರಿಂದ ನಮಗೆ ಒಳ್ಳೆಯದು. ನಮ್ಮ ಕ್ಷೇತ್ರದಿಂದಲೂ 11 ಜನ ನಿಜಾಮುದ್ದೀನ್‍ಗೆ ಹೋಗಿ ಬಂದಿದ್ದರು. ಅವರನ್ನು ನಾನೇ ಪರೀಕ್ಷೆ ಮಾಡಿಸಿದ್ದೆ. ಅವರಿಗೆ ನೆಗೆಟಿವ್ ಬಂದಿದೆ. ಹಾಗಾಗಿ ಅಲ್ಲಿಗೇ ಹೋಗಿ ಬಂದವರು ಸ್ವತಃ ತಾವೇ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಇದೇ ವೇಳೆ ಜಮೀರ್ ಮನವಿ ಮಾಡಿದರು.

ಸಿಎಂ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪನವ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಡಿಸಿಎಂ ಅಶ್ವಥ್ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ಸಿ.ಎಂ ಇಬ್ರಾಹಿಂ, ಜಮೀರ್ ಅಹಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಹ್ಯಾರಿಸ್ ಮತ್ತು ರಿಜ್ವಾನ್ ಅರ್ಷಾದ್ ಭಾಗಿಯಾಗಿದ್ದರು. ಈ ವೇಳೆ ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಪತ್ತೆ ಕಾರ್ಯಕ್ಕೆ ಸಹಕಾರಿಸುವಂತೆ ಸಿಎಂ ಮುಸ್ಲಿಂ ನಾಯಕರಲ್ಲಿ ಸಿಎಂ ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *