ಸಿದ್ದರಾಮಯ್ಯ ಕಾಂಗ್ರೆಸ್‍ನಿಂದ ಹೊರ ಬಂದ್ರೂ ಆಶ್ಚರ್ಯವಿಲ್ಲ: ರೇಣುಕಾಚಾರ್ಯ

Public TV
1 Min Read

ದಾವಣಗೆರೆ: ಸಿದ್ದರಾಮಯ್ಯ ಕಾಂಗ್ರೆಸ್‍ನಿಂದ ಹೊರಗೆ ಬಂದರೂ ಆಶ್ಚರ್ಯ ಇಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.

ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಡಿ ಬೇಡಿ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆದವರು. ಮೂರು ತಿಂಗಳು ಪ್ರತಿಪಕ್ಷದ ನಾಯಕ ಸ್ಥಾನ ಖಾಲಿ ಇತ್ತು. ಇದರಿಂದ ಸಿದ್ದರಾಮಯ್ಯನವರಿಗೆ ಎಷ್ಟರ ಮಟ್ಟಿಗೆ ಕಾಂಗ್ರೆಸ್‍ನಲ್ಲಿ ಗೌರವ ಇತ್ತು ಎನ್ನುವುದು ತಿಳಿಯುತ್ತದೆ. ಹೀಗಾಗಿ ಸಿದ್ದರಾಮಯ್ಯನವರು ಕಾಂಗ್ರೆಸ್‍ನಿಂದ ಹೊರ ಬಂದರೂ ಆಶ್ಚರ್ಯಪಡಬೇಡಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರತಿಪಕ್ಷದ ನಾಯಕರಾಗಿದ್ದಂತಹವರು. ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು. ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಗೋಲಿ ಆಡುವವರು ಅಂತ ಹೇಳಿಕೆ ನೀಡುವುದು ಸರಿಯಲ್ಲ.

ಕಾಂಗ್ರೆಸ್‍ನವರು ಭ್ರಮೆಯಲ್ಲಿದ್ದಾರೆ, ಅವರು ಭ್ರಮನಿರಸನವಾಗಿದ್ದಾರೆ. ಸಿದ್ದರಾಮಯ್ಯನವರು 5 ವರ್ಷ ಮುಖ್ಯಮಂತ್ರಿಯಾಗಿ, ನಂತರ ಸಮ್ಮಿಶ್ರ ಸರ್ಕಾರ ಬಂತು. ಈಗಲೂ ಕಾಂಗ್ರೆಸ್‍ನವರು ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂದು ಹಗಲುಗನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವರ್ತನೆ ನೋಡಿದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯನವರ ಮಧ್ಯೆ ಎಷ್ಟು ಸಾಮರಸ್ಯವಿದೆ ಎಂದು ತಿಳಿಯುತ್ತದೆ ಎಂದರು.

ವೀರಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಕುರಿತು ಹಗುರವಾಗಿ ಮಾತನಾಡಬಾರದು. ಅವರು ಅಪ್ರತಿಮ ದೇಶಭಕ್ತರು. ಮತಾಂಧ ಟಿಪ್ಪು ಜಯಂತಿ ಆಚರಿಸುತ್ತೀರಿ. ನಾವು ದೇಶಭಕ್ತರಿಗೆ ಭಾರತರತ್ನ ನೀಡಿದರೆ ತಪ್ಪೇ. ಸಾವರ್ಕರ್ ಬಗ್ಗೆ ಇತಿಹಾಸ ಓದಿ ತಿಳಿದುಕೊಳ್ಳಲಿ. ಈ ಕುರಿತು ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *